ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ನ್ಯಾಯಯುತವಾಗಿ ವೈಜ್ಞಾನಿಕ ಮಾನದಂಡದಂತೆ, ಮಾನವಿಯತೆಯ ಆಧಾರದ ಮೇಲೆ ಸಮರ್ಪಕ ಪರಿಹಾರ ಒದಗಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʼಈ ಸಮಿತಿ ಸ್ಥಳೀಯ ಅಧಿಕಾರಿಗಳು ಸೇರಿದಂತೆ, ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯಲ್ಲಿ ಕಾರಂಜಾ ಸಂತ್ರಸ್ತರ ಪರವಾಗಿ ಕನಿಷ್ಠ ಇಬ್ಬರು ಪರಿಣಿತ ಪ್ರತಿನಿಧಿಗಳನ್ನಾದರೂ ಸೇರಿಸಿಕೊಳ್ಳುವುದು ಅತಿ ಅವಶ್ಯವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರ ಬೇಡಿಕೆಗೆ ಪೂರಕವಾಗಿ ಸಮಿತಿಯ ಮನವಿಗೆ ಸ್ಪಂದಿಸಬೇಕುʼ ಎಂದರು.
ʼಕಾರಂಜಾ ಸಂತ್ರಸ್ತರಿಗೆ ನ್ಯಾಯಯುತವಾಗಿ ವೈಜ್ಞಾನಿಕ ಮಾನದಂಡದಂತೆ, ಮಾನವಿಯತೆಯ ಆಧಾರದ ಮೇಲೆ ಸಮರ್ಪಕ ಪರಿಹಾರ ಹಣ ನೀಡಬೇಕೆಂದು ಒತ್ತಾಯಿಸಿ ನಿರಂತರವಾಗಿ 920 ದಿನಗಳ ಕಾಲ ನಡೆಸಿರುವ ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲೆಯ ಶಾಸಕರುಗಳ ಸಂಘಟಿತ ಮುತುವರ್ಜಿಯಿಂದ ರಾಜ್ಯ ಸರಕಾರದ ರಾಜಕೀಯ ಇಚ್ಛಾಶಕ್ತಿಯಿಂದ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಸಿಎಂ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಿರುವಂತೆ ಕಾರಂಜಾ ಸಂತ್ರಸ್ತರ ಬೇಡಿಕೆಗಳನ್ನು ಪರಿಶೀಲಿಸಿ, ಈಡೇರಿಸಲು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣಾ ಭಾಜಪೇಯಿಯವರ ಅಧ್ಯಕ್ಷತೆಯಲ್ಲಿ ಆರು ಜನರ ಸಮಿತಿ ಸಮಿತಿ ರಚಿಸಿದೆʼ ಎಂದು ತಿಳಿಸಿದರು.
ʼಆರು ಅಧಿಕಾರಿಗಳ ಸಮಿತಿಯಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿದ್ದು, ಸಮಿತಿಯ ಸದಸ್ಯರಾಗಿ ಬಾಗಲಕೋಟಯ ನವನಗರದ ಭೂಸ್ವಾಧೀನ ಪುನರ್ವಸತಿ ಪುನರ್ ನಿರ್ಮಾಣ ವಿಭಾಗದ ಆಯುಕ್ತರು, ಕಲಬುರಗಿ ನೀರಾವರಿ ಯೋಜನಾ ವಲಯದ ಮುಖ್ಯ ಎಂಜಿನಿಯರ್, ಬೀದರ್ ಜಿಲ್ಲಾಧಿಕಾರಿ, ಕಾರಂಜಾ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ, ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿ ಕೆಲಸ ಮಾಡಲಿದ್ದಾರೆʼ ಎಂದರು.
ʼಸಮಿತಿಗೆ ಸರ್ಕಾರ ನಿರ್ದೇಶಿಸಿರುವಂತೆ, ಕಾರಂಜಾ ಯೋಜನೆಯ ಜಲಾಶಯದ ಮುಳುಗಡೆ ಪ್ರದೇಶದ ಸ್ವಾಧೀನದ ಪ್ರಕ್ರಿಯೆಯ, ಬಾಕಿ ಇರುವ ಭೂಸ್ವಾಧೀನದ ಅಧ್ಯಯನ, ನ್ಯಾಯಾಲಯಗಳು ನೀಡಿರುವ ಆದೇಶಗಳ ಅಧ್ಯಯನ, ಭೂಸ್ವಾಧೀನ ಕಾಯ್ದೆಯಲ್ಲಿ ಇರುವ ಅವಕಾಶಗಳ ಅಧ್ಯಯನ, ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಬೇಡಿಕೆ ಅಧ್ಯಯನ ಮಾಡಬೇಕಿದೆʼ ಎಂದರು.
ʼಈ ಹಿಂದೆ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿಯ ಬಗ್ಗೆ ಅಧ್ಯಯನ ನಡೆಸಿ ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ಮೂರು ತಿಂಗಳ ಒಳಗೆ ವರದಿ ನೀಡಲು ಸರ್ಕಾರ ಆದೇಶಿಸಿದೆ ಎಂದ ಅವರು, ರಾಜ್ಯದ ಇತಿಹಾಸದಲ್ಲೇ ಕಾವೇರಿ, ಕೃಷ್ಣಾ ಮತ್ತು ಗೋದಾವರಿ ಜಲಾನಯನ ಪ್ರದೇಶದ ನೀರಾವರಿ ಯೋಜನೆಗಳಲ್ಲಿ ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ಸಂತ್ರಸ್ತರಿಗೆ ಭರಿಸಲಾಗದಷ್ಟು ಅನ್ಯಾಯವಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕಿದೆ. ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯ ವರದಿ ಅತಿ ಮಹತ್ವದ್ದಾಗಿದೆ. ಈ ವರದಿ ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಮಾನದಂಡದ ಪರಿಹಾರ ನೀಡಲು ದಿಕ್ಸೂಚಿಯಾಗಲಿʼ ಎಂದರು.
ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ಸಮಿತಿಯ ಪ್ರಥಮ ಸಭೆ ಮೇ 6ರಂದು ನಡೆಯಲಿದೆ. ಈ ಸಭೆಯಲ್ಲಿ ಕಾರಂಜಾ ಸಂತ್ರಸ್ತರ ವಾಸ್ತವ ಅಂಶಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಬೀದರ್ ಜಿಲ್ಲೆಯ ರಚನಾತ್ಮಕ ಪ್ರಗತಿಗೆ ಮತ್ತು ರೈತರ, ಸಮಸ್ತ ಜನಾಂಗದ ಅಭ್ಯುದಯಕ್ಕಾಗಿ ಯಾವುದೇ ಷರತ್ತು ಇಲ್ಲದೆ ಕಾರಂಜಾ ಯೋಜನೆಗೆ ಜಮೀನು ನೀಡಿರುವ ಸಂತ್ರಸ್ತರಿಗೆ ನ್ಯಾಯ ಸಿಗಬೇಕಿದೆʼ ಎಂದರು.
ಕಾರಂಜಾ ಯೋಜನೆಗೆ ಭೂಮಿ, ಮನೆ, ಮಠ ನೀಡಿದ 28 ಹಳ್ಳಿಗಳ ಸಂತ್ರಸ್ತರ ಸಭೆಯನ್ನು ಎರಡು ವಾರಗಳ ನಂತರ ಬೀದರ್ ನಗರದಲ್ಲಿ ಸಮಿತಿಯಿಂದ ನಡೆಸಲಾಗುವುದು. ಆಗ ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯ ಅಧ್ಯಯನದ ಬಗ್ಗೆ ಚರ್ಚಿಸುವುದಲ್ಲದೆ, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ನಿಗದಿ ಮಾಡುವ ಬಗ್ಗೆ ವರದಿ ನೀಡಲಾಗುವುದು’ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ, ಉರ್ದು ಮಾಧ್ಯಮದ 500 ವಿದ್ಯಾರ್ಥಿಗಳಿಗೆ ʼಶಾಹೀನ್ ವಿದ್ಯಾರ್ಥಿ ವೇತನʼ
ಕಲ್ಯಾಣ ಕರ್ನಾಟಕ ಹೋರಾಟ ಸಮೀತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಕಾರಂಜಾ ಮುಳಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಹಿರಿಯ ಚಿಂತಕ ಆರ್.ಕೆ.ಹುಡಗಿ, ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೇಟ್ಟಿ, ಸಮಿತಿಯ ಪ್ರಮುಖರಾದ ವಿನಯ ಮಾಳಗೆ, ನಾಗಶೆಟ್ಟಿ ಹಂಚೆ, ಮುಖಂಡ ರಾಜಪ್ಪ ಕಮಲಪೂರೆ, ರಾಜಶೇಖರ ಕೋಸಂ, ರೋಹನಕುಮಾರ, ಮಾದಪ್ಪ ಸಂಗೊಳಗಿ, ಕೇದಾರನಾಥ ಪಾಟೀಲ್ ಹಾಗೂ ಸಂತ್ರಸ್ತರು ಇದ್ದರು.





