ಬೀದರ್ ತಾಲೂಕಿನ ಯರನಳ್ಳಿ ಗ್ರಾಮ ಪಂಚಾಯತಿ ಸದಸ್ಯರಿಗೆ ಕಳೆದ 11 ತಿಂಗಳ ಗೌರವಧನ ಬಿಡುಗಡೆಯಾದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನೀಡದೇ ಇರುವುದರಿಂದ ಸದಸ್ಯರು ಗೌರವಧನಕ್ಕಾಗಿ ಅಂಗಲಾಚಬೇಕಾದ ಸ್ಥಿತಿ ಬಂದಿದೆ.
ಯರನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯು ಯರನಳ್ಳಿ, ಬಂಪಳ್ಳಿ, ಸಾಂಗ್ವಿ, ಇಸ್ಲಾಂಪುರ ಹಾಗೂ ಸಿದ್ಧಾಪುರ ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು 14 ಜನ ಸದಸ್ಯ ಬಲ ಹೊಂದಿದೆ. ಸರ್ಕಾರದ ಹೊಸ ಆದೇಶದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ₹6 ಸಾವಿರ, ಉಪಾಧ್ಯಕ್ಷರಿಗೆ ₹4 ಸಾವಿರ ಹಾಗೂ ಸದಸ್ಯರಿಗೆ ₹2 ಸಾವಿರ ಗೌರವ ಧನ ನಿಗದಿಪಡಿಸಲಾಗಿದೆ.
2024ರಲ್ಲಿ ಹಿಂದಿನ ಪಿಡಿಒ ಅವರ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಒಟ್ಟು 11 ತಿಂಗಳ ಮಾಸಿಕ ಗೌರವಧನ ಬಿಡುಗಡೆಯಾಗಿದೆ. ಗೌರವ ಧನ ಕೊಡುವಂತೆ ಕೇಳಿದರೆ ʼಆ ಹಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಖರ್ಚು ಮಾಡಲಾಗಿದೆʼ ಎಂದು ಪಿಡಿಒ ಅವರು ಸಬೂಬು ಹೇಳಿದ್ದಾರೆʼ ಎಂದು ಸದಸ್ಯರು ದೂರಿದ್ದಾರೆ.
ಸರ್ಕಾರದಿಂದ ಬಿಡುಗಡೆಯಾಗಿ ಪಂಚಾಯತ್ ಖಾತೆಗೆ ಜಮೆಯಾದರೂ ಪಿಡಿಒಗಳು ಸದಸ್ಯರು ಗೌರವ ಧನ ನೀಡುತ್ತಿಲ್ಲ ಎಂದು ಆರೋಪಿಸಿ ಪಂಚಾಯಿತಿಯ 12 ಜನ ಸದಸ್ಯರು ಬೀದರ್ ತಾಲೂಕು ಪಂಚಾಯತಿ ಇಒ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ʼಕಳೆದ ಐದಾರು ತಿಂಗಳ ಹಿಂದೆ ಸದಸ್ಯರ ಗೌರವ ಧನ ಬಿಡುಗಡೆಯಾಗಿದೆ. ಹಿಂದಿನ ಪಿಡಿಒ ಅವರಿಗೆ ಅನೇಕ ಬಾರಿ ಕೇಳಿದರೂ ವೇತನ ನೀಡದೆ ವರ್ಗಾವಣೆಯಾದರು. ಇದೀಗ ಇರುವ ಪಿಡಿಒ ಅವರಿಗೆ ಕೇಳಿದರೆ ʼಈ ಬಗ್ಗೆ ಹಿಂದಿನ ಪಿಡಿಒ ಅವರಿಗೆ ಗೊತ್ತುʼ ಎಂದು ಹೇಳುತ್ತಿದ್ದಾರೆ. ಸದಸ್ಯರ ಗೌರವ ಧನ ಕೆಲಸಗಳಿಕೆ ಬಳಕೆ ಮಾಡಿಕೊಂಡರ ಕರ ವಸೂಲಾತಿ ಹಣ ನಮಗೆ ಕೊಡಿʼ ಎಂದು ಸದಸ್ಯರು ಕೇಳುತ್ತಿದ್ದಾರೆ.
ʼಪ್ರಜಾಪ್ರಭುತ್ವದ ಬುನಾದಿಯಾಗಿರುವ ಗ್ರಾಮ ಪಂಚಾಯತಿಗಳ ಸದಸ್ಯರಿಗೆ ಸರ್ಕಾರವೇ ಮಾಸಿಕ ಗೌರವಧನ ನಿಗದಿಪಡಿಸಿ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತದೆ. ಆದರೆ ʼದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲʼ ಎಂಬಂತೆ ಗೌರವಧನ ಸಕಾಲಕ್ಕೆ ಕೈಗೆ ಸೇರದ ಪರಿಣಾಮ ಸದಸ್ಯರು ಪಿಡಿಒ ಬಳಿ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿಯಾಗಿದೆʼ ಸದಸ್ಯರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಬೀದರ್ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಮುಕುಲ್ ಜೈನ್ ನೇಮಕ
ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಗ್ರಾಮ ಪಂಚಾಯತಿ ಸದಸ್ಯರಿಗೆ ಬರಬೇಕಾದ ಮಾಸಿಕ ಗೌರವಧನ ಪಾವತಿಸಬೇಕೆಂದು ಗ್ರಾಮ ಪಂಚಾಯತಿ ಸದಸ್ಯರಾದ ತಾಜುದ್ದೀನ್, ರಾಜಪ್ಪಾ, ಲಕ್ಷ್ಮೀಬಾಯಿ, ಕಸ್ತೂರಿಬಾಯಿ, ಬಾಬು, ಮಾಣಿಕೇಶ್ವರಿ, ವಿಜಯಕುಮಾರ, ಪ್ರಭುಶೆಟ್ಟಿ, ರೇಣುಕಾ, ರೇಷ್ಮಾ ಹಾಗೂ ಕಾವೇರಿ ಅವರು ಪತ್ರಕ್ಕೆ ಸಹಿ ಹಾಕಿ ಆಗ್ರಹಿಸಿದ್ದಾರೆ.





