ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 7 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನೀಡಿದ ಭರವಸೆಯಿಂದಾಗಿ ಧರಣಿ ಮುಕ್ತಾಯಗೊಂಡಿತು.
ಬೀದರ್ ಜಿಲ್ಲೆ ಹಸಿ ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿ ಪ್ರತಿ ಎಕರೆಗೆ ₹30 ಸಾವಿರಗಳಂತೆ ಪ್ರತಿ ಹೆಕ್ಟೇರ್ಗೆ ₹60 ಸಾವಿರ ಪರಿಹಾರ ನೀಡಬೇಕು. ರೈತರ ಎಲ್ಲ ತರಹದ ಸಹಕಾರಿ ಸಂಘಗಳ, ಸರ್ಕಾರಿ ಬ್ಯಾಂಕ್ ಹಾಗೂ ಇತರೆ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡುವುದು ಸೇರಿದಂತೆ ಒಟ್ಟು 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ, ಕಾರ್ಮಿಕ, ಕನ್ನಡ, ದಲಿತಪರ ಸಂಘಟನೆಗಳ ಬೆಂಬಲದೊಂದಿಗೆ ಅ.12ರಿಂದ ಧರಣಿ ನಡೆಯುತ್ತಿದ್ದು, ಶನಿವಾರ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಮಳೆ, ಪ್ರವಾಹದಿಂದ ಹಾನಿಯಾದ ಪ್ರತಿ ಹೆಕ್ಟೇರ್ಗೆ ₹60 ಸಾವಿರ ಪರಿಹಾರ ನೀಡಬೇಕೆಂಬ ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ʼಸರ್ಕಾರ ಈಗಾಗಲೇ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್ಗೆ ನಿಗದಿಯಾಗಿದ್ದ ₹8,500 ಬದಲಿಗೆ ₹17 ಸಾವಿರ, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್ಗೆ ನಿಗದಿಯಾಗಿರುವ ₹17 ಸಾವಿರ ಬದಲಿಗೆ ₹25,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ನಿಗದಿಯಾಗಿದ್ದ ₹22,500 ಬದಲಿಗೆ ₹31 ಸಾವಿರ ಪರಿಹಾರವನ್ನು ಅ.30ರ ಒಳಗಾಗಿ ರೈತರ ಖಾತೆಗೆ ಪಾವತಿಸಲಾಗುವುದು ಎಂದರು.
ರೈತರ ಸಾಲ ಮನ್ನಾ ಬೇಡಿಕೆಗೆ ಉತ್ತರಿಸಿದ ಅವರು, ʼರೈತರ ಸಾಲ ಮನ್ನಾ ಕುರಿತು ಸಿಎಂ ಅವರೊಂದಿಗೆ ಚರ್ಚಿಸಬೇಕು. ದೀಪಾವಳಿ ನಂತರ ನಿಯೋಗದೊಂದಿಗೆ ಬಂದರೆ ಮುಖ್ಯಮಂತ್ರಿಗಳೊಂದಿಗೆ ಭೇಟಿ ಮಾಡಿಸುವೆ, ಅವರೊಂದಿಗೆ ಜಿಲ್ಲೆಯ ರೈತರ ಎಲ್ಲ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸೋಣ ಎಂದು ಭರವಸೆ ನೀಡಿದ ಅವರು, 60 ವರ್ಷ ಪೂರೈಸಿದ ರೈತ ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ ₹10 ಸಾವಿರ ಗೌರವ ಧನ ನೀಡಲು ಬಜೆಟ್ನಲ್ಲಿ ಅನುದಾನ ಒದಗಿಸಬೇಕಾಗುತ್ತದೆ. ನವೆಂಬರ್-ಡಿಸೆಂಬರ್ನಲ್ಲಿ ಬಜೆಟ್ ಚರ್ಚಿಸುವ ವೇಳೆ ಬಂದರೆ ಈ ಭರವಸೆ ಈಡೇರಿಸಲಾಗುವುದುʼ ಎಂದು ತಿಳಿಸಿದರು.
ಕಬ್ಬಿನ ದರ ನಿಗದಿ ಕುರಿತು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಭೆ ಕರೆದು ಚರ್ಚಿಸಲಾಗುವುದು, ಕಬ್ಬಿನ ಎಫ್ಆರ್ಪಿ ಪರಿಶೀಲಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರ್ ಆರಂಭ ಬೇಡಿಕೆ ಸದ್ಯಕ್ಕೆ ಅಸಾಧ್ಯ ಎಂದ ಸಚಿವರು ಬಗರ್ ಹುಕಂ ಅರ್ಜಿಗಳ ವಿಲೇವಾರಿ ಮಾಡಿ ಮತ್ತು ಹಕ್ಕು ಪತ್ರ ವಿತರಣೆ ಕುರಿತು ಕಂದಾಯ ಇಲಾಖೆಗೆ ತಿಳಿಸುವೆ ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ʼರೈತರ ಬೆಳೆಗಳಿಗೆ ಬೆಂಬಲ ಬೆಲೆ, ಜಮೀನುಗಳಿಗೆ ವಿದ್ಯುತ್ ಪೂರೈಕೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜಾರಿಗೊಳಿಸಿದರೂ ರೈತರಿಗೆ ಸಾಕಾಗುವುದಿಲ್ಲ. ಒಂದೇ ಸಲ ಎಲ್ಲ ಬೇಡಿಕೆಗಳು ಈಡೇರಿಸಲು ಆಗುವುದಿಲ್ಲ. ಹಂತ-ಹಂತವಾಗಿ ರೈತರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದುʼ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ʼಹಸಿ ಬರಗಾಲʼ ಘೋಷಣೆಗೆ ಆಗ್ರಹ : 6ನೇ ದಿನಕ್ಕೆ ಕಾಲಿಟ್ಟ ಧರಣಿ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ್ ಹೊನ್ನಾ, ಖಾಸಿಂ ಅಲಿ, ರುದ್ರಯ್ಯಾ ಸ್ವಾಮಿ, ವೀರಾರೆಡ್ಡಿ ಪಾಟೀಲ್, ನಜೀರ ಅಹ್ಮದ ಚೊಂಡಿ, ವಿಠ್ಠಲ ರೆಡ್ಡಿ, ಸುಭಾಷ ಇಟಗೆ, ಶಾಂತಮ್ಮ ಮೂಲಗೆ, ಕಮಲಬಾಯಿ ಮಡ್ಡೆ, ಕೋಂಡಿಬಾರಾವ್ ಪಾಂಡ್ರೆ, ಎಂ.ಡಿ.ಶಫಾಯತ್ ಅಲಿ, ಶೀಲಾ ಸಾಗರ್, ವಿಜಯಕುಮಾರ್ ಬಾವಗೆ, ಗುಂಡೇರಾವ್ ಕುಲಕರ್ಣಿ, ನಾಗಶೆಟ್ಟಪ್ಪ ಲಂಜವಾಡೆ, ಬಸವರಾಜ ಅಷ್ಟೂರ್ ಮತ್ತಿತರರಿದ್ದರು.





