ರಾಜ್ಯದಾದ್ಯಂತ ಡಿ.19ರಂದು ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ ಎಂದು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ವಿಷ್ಣುಕಾಂತ ಬಿ.ಜೆ. ಹೇಳಿದರು.
ಭಾಲ್ಕಿ ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ʼಭರತ್ ಸಿನಿ ಕ್ರಿಯೇಷನ್ಸ್ ಬ್ಯಾನರ್ನಡಿ ನಿರ್ಮಾಣಗೊಂಡಿರುವ ಭಕ್ತಿ ಪ್ರಧಾನವಾಗಿರುವ ಜಗನ್ಮಾತೆ ಅಕ್ಕಮಹಾದೇವಿ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ’ ಎಂದರು.
ʼರಾಜ್ಯದ 100ಕ್ಕೂ ಅಧಿಕ ಚಿತ್ರ ಮಂದಿರ ಸೇರಿ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಗೊಳ್ಳಲಿದೆ. ಅಮೆರಿಕ, ಇಂಗ್ಲೆಂಡ್ ಇನ್ನೂ ಕೆಲ ಹೊರ ದೇಶಗಳಲ್ಲಿ ಚಿತ್ರ ಬಿಡುಗಡೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಬೀದರ್ ಜಿಲ್ಲೆ ಸೇರಿ ಶ್ರೀಶೈಲಂನಲ್ಲಿ ಸುಮಾರು 6 ತಿಂಗಳಕಾಲ ನಿರಂತರವಾಗಿ ಚಿತ್ರ ಚಿತ್ರೀಕರಣಗೊಂಡಿದ್ದು, 45 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಾನು ಬೀದರ್ ಜಿಲ್ಲೆಯವನು ಆಗಿರುವ ಕಾರಣಕ್ಕೆ ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇನೆʼ ಎಂದು ತಿಳಿಸಿದರು.
ʼಚಿತ್ರದ ಮುಖ್ಯ ಪಾತ್ರದಲ್ಲಿ ಹೆಸರಾಂತ ನಟರಾದ ಸುಚೀಂದ್ರ ಪ್ರಸಾದ ಕಾಣಸಿಕೊಳ್ಳಲಿದ್ದಾರೆ. ಹಾಸ್ಯ ಪಾತ್ರದಲ್ಲಿ ವೈಜಿನಾಥ ಬಿರಾದಾರ್ ಮಿಂಚಲಿದ್ದಾರೆ. ಸ್ಥಳೀಯ ಕಲಾವಿದೆ ಬೀದರ್ನ ಸುಲೇಕ್ಷಾ ಕೈರಾ ಅಕ್ಕಮಹಾದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದ್ದು ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಚಿತ್ರ ವೀಕ್ಷಿಸಿ ಶುಭ ಹಾರೈಸಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ತುಂಬಬೇಕುʼ ಎಂದು ತಿಳಿಸಿದರು.
ʼಕಳೆದ ನಾಲ್ಕೈದು ದಶಕಗಳಿಂದ ನಾನು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಯಾವತ್ತು ಕೂಡ ಲಾಭ ನಷ್ಟದ ಬಗ್ಗೆ ವಿಚಾರ ಮಾಡಿಲ್ಲ. ಜನರಿಗೆ ಭಕ್ತಿ ಪ್ರಧಾನ ಚಿತ್ರ ನೀಡುವುದು ನನ್ನ ಮೂಲ ಧ್ಯೇಯ, ಈ ನಿಟ್ಟಿನಲ್ಲಿ ಬೆಳ್ಳಿ ಪರದೆ ಮೇಲೆ ಬರುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಿತ್ರವನ್ನು ಎಲ್ಲರೂ ವೀಕ್ಷಿಸಿ ನಮಗೆ ಶಕ್ತಿ ತುಂಬಬೇಕುʼ ಎಂದು ಹೇಳಿದರು.
ನಟಿ ಸುಲೇಕ್ಷಾ ಕೈರಾ ಅವರು ಮಾತನಾಡಿ, ʼಅಕ್ಕಮಹಾದೇವಿ ಮಹಿಳಾ ಕುಲಕ್ಕೆ ಕಳಶಪ್ರಾಯರಾಗಿದ್ದಾರೆ. ಅಂತಹ ಮಹಾತ್ಮರ ಜೀವನ ಸಾಧನೆ ಕುರಿತು ತೆರೆ ಕಾಣುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಿತ್ರದಲ್ಲಿ ನಾನು ಅಕ್ಕಮಹಾದೇವಿ ಪಾತ್ರದಲ್ಲಿ ನಟಿಸಿದ್ದು ಅತ್ಯಂತ ಖುಷಿ ತಂದು ಕೊಟ್ಟಿದೆ. ಜಿಲ್ಲೆಯ ಜನರು ಈ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ನಮ್ಮ ಕರ್ನಾಟಕ ಸೇನೆ ವಾರ್ಷಿಕೋತ್ಸವ: ಭಿತ್ತಿ ಪತ್ರ ಬಿಡುಗಡೆ
ಸುದ್ದಿಗೋಷ್ಠಿಯಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ, ನಟಿ ಶ್ರೀಗೌರಿ ಇದ್ದರು.





