ಕನಕದಾಸರು ಕೇವಲ ದೇವರ ಭಕ್ತನಾಗಿ ಸೀಮಿತನಾದವರಲ್ಲ, ಅವರು ತತ್ವ ಚಿಂತಕರು, ಸಾಮಾಜಿಕ ವಿಶ್ಲೇಷಕರು ಹಾಗೂ ತಳಸಮುದಾಯದ ಪರವಾಗಿ ಧ್ವನಿ ಎತ್ತಿದ ಯೋಧರು ಎಂದು ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಶ್ಲಾಘಿಸಿದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ ʼಕನಕ ಸಂಸ್ಕೃತಿ ಸಂಚಲನ, ಕನಕ ನಡೆ ನುಡಿ ಉತ್ಸವʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ʼಕನಕದಾಸರು ತಮ್ಮ ಸಂಗೀತ, ಪದ್ಯ ಹಾಗೂ ಕೀರ್ತನೆಗಳಲ್ಲಿ ದೇವರ ಮಹಿಮೆ ಹೇಳಿದರೂ, ಅದರ ಒಳನೋಟದಲ್ಲಿ ನಮ್ಮ ಸಮಾಜದ ದುರವಸ್ಥೆಗಳನ್ನು ನೈತಿಕ ಪಾಠಗಳನ್ನು ಮುಡಿಪಾಗಿಸಿ ಜನರ ಹೃದಯದಲ್ಲಿ ಬದಲಾವಣೆಯ ಬೀಜ ಬಿತ್ತಿದರುʼ ಎಂದರು.
ಸಂತ ಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, ʼಇಂದಿನ ಯುವ ಜನತೆ ಕನಕದಾಸರ ಆದರ್ಶಮಯ ಜೀವನ ಶೈಲಿ ಮತ್ತು ಆಚಾರ ವಿಚಾರಗಳಿಂದ ಪ್ರೇರಣೆ ಪಡೆಯಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕಾಲೇಜುಗಳ ಹಂತದಲ್ಲಿ ಆಯೋಜಿಸಲಾಗಿದೆʼ ಎಂದರು.
ʼಕನಕದಾಸರು ತಮ್ಮ ಕಾವ್ಯಗಳ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ವಿಸ್ತಾರಗೊಳಿಸಿದ್ದಾರೆ. ಅವರ ತತ್ವಪದಗಳು ನಾಡಿನ ಸಂಸ್ಕೃತಿಯ ಆಳವಾದ ಪ್ರತಿಬಿಂಬವಾಗಿವೆ. ಇಂತಹ ಮಹಾನ್ ವ್ಯಕ್ತಿಯ ಆಲೋಚನೆಗಳು ಮುಂದಿನ ಪೀಳಿಗೆಗೆ ತಲುಪಬೇಕಾದ ಅಗತ್ಯವಿದೆʼ ಎಂದರು.

ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶರಣಪ್ಪ ಮಲಗೊಂಡ್ ಅವರು ಮಾತನಾಡಿ, ʼದಾಸರ ಚಾರಿತ್ರ್ಯ ಮತ್ತು ಸಂಸ್ಕಾರಗಳನ್ನು ನಾವೆಲ್ಲರೂ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ಅವರು ಬೋಧಿಸಿದ ಮೌಲ್ಯಗಳು ನೈತಿಕ ಬದುಕಿಗೆ ದಾರಿದೀಪದಂತಿವೆʼ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಶಂಕರ್ ಗಣಗೊಂಡ ಮಾತನಾಡಿ, ʼಸಮಾಜದಲ್ಲಿ ಜಾತಿ-ಜಾತಿ ಎಂದು ವಿಭಜನೆಗೊಂಡು ಹೊಡೆದಾಡುವುದಕ್ಕಿಂತ, ನಾವೆಲ್ಲರೂ ಮನುಷ್ಯತ್ವ ಹೊಂದಿದ ಮನುಷ್ಯರೆಂಬ ಅರಿವಿನಿಂದ ನಡೆಯಬೇಕು. ಅಂದಾಗ ಮಾತ್ರ ನಮ್ಮ ಬದುಕು ನಿಜವಾದ ಅರ್ಥವನ್ನು ಪಡುತ್ತದೆʼ ಎಂದು ತಿಳಿಸಿದರು.
ಕನಕ ಸಂಸ್ಕೃತಿ ಸಂಚಲನ ಪ್ರತಿಭಾ ಸ್ಪರ್ಧೆಯಲ್ಲಿ ಕನಕ ಕಾವ್ಯ ಓದು, ವ್ಯಾಖ್ಯಾನ ಗಾಯನ, ರಸಪ್ರಶ್ನೆಯಲ್ಲಿ ಭಾಗವಹಿಸಿದ ಕಾಲೇಜುಗಳಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ ಬೀದರ, ಬಿ.ವ್ಹಿ ಭೂಮರೆಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬೀದರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ನಳ್ಳಿ, ಕರ್ನಾಟಕ ಕಲಾ, ವಿಜ್ಞಾನ, ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬೀದರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೀದರ, ಸಿದ್ದಾರ್ಥ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಒಟ್ಟು 72 ಜನ ವಿದ್ಯಾರ್ಥಿಗಳಿಗೆ ಆಯಾ ಕಾಲೇಜು ಅನುಗುಣವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ.
ನಿವೃತ್ತ ಉಪನ್ಯಾಸಕರಾದ ಉಮಾಕಾಂತ ಮೀಸೆ, ಬಿ.ಎಂ.ಅಮರವಾಡಿ, ಸತ್ಯನಾರಾಯಣ, ಮಾತನಾಡಿದರು. ಇದೇ ಸಂದರ್ಭದಲ್ಲಿ ಕನಕ ಯುವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ರವೀಂದ್ರ ಲಂಜವಾಡಕರ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಮಾಧ್ಯಮಗಳ ಪ್ರಾಮಾಣಿಕತೆ-ಬದ್ಧತೆಯಿಂದ ಸಾಮಾಜಿಕ ಏಳಿಗೆ ಸಾಧ್ಯ : ಡಾ.ಪ್ರಹ್ಲಾದ ಚೆಂಗಟಿ
ಡಾ.ರಾಜಕುಮಾರ ಅಲ್ಲೂರೆ ಸ್ವಾಗತಿಸಿದರು, ಲಕ್ಷಣ ಮೇತ್ರೆ, ನಿರೂಪಿಸಿದರೆ, ಭೀಮಶಾ ಬರಗಾಲ ವಂದಿಸಿದರು. ಕಾಲೇಜಿನ ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳು, ಮುಂತಾದವರು ಉಪಸ್ಥಿತರಿದ್ದರು.





