ಕನ್ನಡ ನಾಡು-ನುಡಿ ಉಳಿಯಬೇಕಾದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಬಳಸಬೇಕು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಶ್ರೀ ಸಿದ್ಧರೂಢ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ನಾಗಪ್ಪ ಜಾನಕನೂರ್ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಸಹಯೋಗದಲ್ಲಿ ಬೀದರ್ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ ಕನ್ನಡ ನಾಡು-ನುಡಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಎಲ್ಲವೂ ಎಲ್ಲವೂ ಸಮೃದ್ಧಿಯಾಗಿದೆ. ದಿನನಿತ್ಯವೂ ಕನ್ನಡ ಹೆಚ್ಚು ಬಳಸಬೇಕು, ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕಿದೆʼ ಎಂದು ನುಡಿದರು.
ಬೀದರ್ ತಾಲೂಕು ಕಸಾಪ ಅಧ್ಯಕ್ಷ ಟಿ.ಎಂ.ಮಚ್ಚೆ ಅವರು ಮಾತನಾಡಿ, ʼಗಡಿ ಭಾಗದಲ್ಲಿ ಕನ್ನಡ ಭಾಷೆ, ನುಡಿಯ ಜಾಗೃತಿ ಮೂಡಿಸಬೇಕಿದೆ. ಅನ್ಯ ಭಾಷೆಗಳೊಂದಿಗೆ ಮಿಶ್ರಿತವಾದ ಕನ್ನಡವನ್ನು ಶುದ್ಧ ಭಾಷೆಯನ್ನಾಗಿ ಮಾಡುವಪ್ರಯತ್ನ ಮಾಡಬೇಕುʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಮನೋಜಕುಮಾರ ಕುಲಕರ್ಣಿ ಮಾತನಾಡಿ, ʼಕನ್ನಡ ಅನ್ಯ ಭಾಷಿಕರಿಗೆ ಕಲಿಸುವುದು ಬಹಳ ಮುಖ್ಯ. ಕನ್ನಡ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕುʼ ಎಂದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ. ಮಾತನಾಡಿ, ʼಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟರೆ ಅವರು ಓದುವತ್ತ ಮನಸ್ಸು ಮಾಡುತ್ತಾರೆ. ಒಂದು ಸಲ ಓದುವ ಹವ್ಯಾಸ ಬೆಳೆಸಿಕೊಂಡರೆ ಅವರು ಮುಂದುವರೆಸಿಕೊಂಡು ಹೋಗುತ್ತಾರೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಆರ್ಎಸ್ಎಸ್ ಕಾನೂನು ಬಾಹಿರ ನೀತಿ ವಿರೋಧಿಸಿ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಪ್ರೊ.ಶ್ರೀಕಾಂತ ಪಾಟೀಲ್ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಕೀರ್ತನಾ ಪ್ರಾರ್ಥನೆ ನೆರವೇರಿಸಿದರು. ಡಾ.ಮನೋಹರ ನಿರೂಪಿಸಿದರು. ಪ್ರೊ. ಶ್ರೀನಿವಾಸ ಸ್ವಾಗತಿಸಿದರು. ಪಾರ್ವತಿ ಮೇತ್ರೆ ವಂದಿಸಿದರು.





