ಬೀದರ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರ ಹಾಗೂ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್ಆರ್ಪಿ) ನಿಗದಿಪಡಿಸುವಂತೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಮಂಡಳಿ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಈ ಸಂಬಂಧ ಮಂಡಳಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ ಮಾತನಾಡಿ, ʼರೈತರು ಬೆವರು ಸುರಿಸಿ ಕಬ್ಬು ಬೆಳೆದು ಅನ್ನ ನೀಡುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಮತ್ತು ಸರ್ಕಾರದ ರೈತ ವಿರೋಧಿ ನೀತಿಗಳಿಂದ ರೈತರ ಬದುಕು ದುಸ್ಥಿತಿಗೆ ತಲುಪಿದೆ. ಕಬ್ಬಿಗೆ ನ್ಯಾಯಯುತ ದರ ನೀಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆʼ ಎಂದು ಎಚ್ಚರಿಸಿದರು.
ʼಪ್ರತಿವರ್ಷ ಸಕ್ಕರೆ ಕಾರ್ಖಾನೆ ಮಾಲಿಕರು ಕಬ್ಬಿನ ದರವನ್ನು ಸರಿಯಾಗಿ ನಿಗದಿಪಡಿಸದೆ, ರೈತರಿಗೆ ಹಣವನ್ನು ಸಮಯಕ್ಕೆ ನೀಡದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೆಲ ಕಾರ್ಖಾನೆ ಮಾಲಿಕರು ರೈತರ ಪಹಾಣಿ ಪತ್ರದ ಮೂಲಕ ಬ್ಯಾಂಕ್ಗಳಿಂದ ಸಾಲ ಪಡೆದುಕೊಳ್ಳುತ್ತಿರುವುದು ಹಾಗೂ ಬ್ಯಾಂಕ್ಗಳು ರೈತರ ಮೇಲೆ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿರುವುದು ಖಂಡನೀಯವಾಗಿದೆʼ ಎಂದರು.
ಕೇಂದ್ರ ಸರ್ಕಾರ ಕಬ್ಬಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ನಿಗದಿಪಡಿಸದಿರುವುದನ್ನು ವಿರೋಧಿಸುವ ಮೂಲಕ, ಕಬ್ಬಿಗೆ 355 ರೂ. ಪ್ರತಿ ಕ್ವಿಂಟಲ್ ದರ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಟ್ಟು 5,325 ರೂ. ಪ್ರತಿ ಟನ್ ದರ ನಿಗದಿ ಮಾಡಬೇಕುʼ ಎಂದು ಒತ್ತಾಯಿಸಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಹರಿಯಾಣದ ‘ಮಹಾ ಮತಗಳ್ಳತನ’ ಮತ್ತು ಚುನಾವಣಾ ಆಯೋಗವೆಂಬ ಮೋದಿ ‘ಪಂಜರದ ಗಿಳಿ’
ಮಂಡಳಿಯ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಚೊಂಡಿ, ತಾಲೂಕಾಧ್ಯಕ್ಷ ಎಂ.ಡಿ. ಖಮರ್ ಪಟೇಲ್ ಸೇರಿದಂತೆ ಬಸವರಾಜ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.





