ಔರಾದ್ ತಾಲ್ಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಸಂಕಷ್ಟದ ಬದುಕು ದೂಡುತ್ತಿರುವ ಶಿವಮ್ಮಾ ದಶರಥ ಎನ್ನುವ ಮಹಿಳೆಗೆ ಸಮಾಜ ಸೇವಕಿ, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕಿ ಕ್ರಾಂತಿ ಕಲವಾಡಿಕರ್ ಅವರು ಮಹಿಳೆಗೆ ನೆರವಾಗುವ ಮೂಲಕ ಸಹಾಯಹಸ್ತ ಚಾಚಿದ್ದಾರೆ.
ಮಹಿಳೆ ಯಾರೊಬ್ಬರ ಆಶ್ರಯವಿಲ್ಲದೆ ಸಂಕಷ್ಟದ ಬದುಕು ನಡೆಸುತ್ತಿರುವ ಬಗ್ಗೆ ಗ್ರಾಮದ ರಾಜಕುಮಾರ ಮೇತ್ರೆ ಅವರು ಕ್ರಾಂತಿ ಕಲವಾಡಿಕರ್ ಅವರ ಗಮನಕ್ಕೆ ತಂದಿದ್ದರು. ಅದಕ್ಕೆ ಸ್ಪಂದಿಸಿ ಅವರು ಮಂಗಳವಾರ ಮಹಿಳೆಗೆ ಮನೆಗೆ ತೆರಳಿ ಆಹಾರ ಸಾಮಾಗ್ರಿ ಕಿಟ್ ಜೊತೆಗೆ ಜೀವಿತಾವಧಿ ತನಕ ಮಾಸಿಕ ₹500 ಕೊಡುವುದಾಗಿ ಭರವಸೆ ನೀಡಿದ್ದಾರೆ.
ಬಳಿಕ ಕ್ರಾಂತಿ ಕಲವಾಡಿಕರ್ ಅವರು ಮಾತನಾಡಿ, ʼಸಮಾಜದಲ್ಲಿ ಅನೇಕ ಜನರು ಜೀವನ ನಿರ್ವಹಣೆಗಾಗಿ ಪರದಾಡಬೇಕಾದ ಸ್ಥಿತಿ. ಅಂತವರನ್ನು ಗುರುತಿಸಿ ಸರ್ಕಾರದ ಸೌಲಭ್ಯ ಜೊತೆಗೆ ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡುವುದು ಅಗತ್ಯವಿದೆ. ಬಡ, ನಿರ್ಗತಿಕ, ಅನಾಥರಿಗೆ ಸಹಾಯಧನ ಮಾಡುವುದೆಂದರೆ ದೇವರ ಸೇವೆ ಮಾಡಿದಂತಾಗುತ್ತದೆ. ಪ್ರತಿಯೊಬ್ಬರೂ ಶ್ರಮದ ಅಲ್ಪ ಹಣವನ್ನು ಸಮಾಜದ ಒಳಿತಿಗಾಗಿ ಮೀಸಲಿಡಬೇಕುʼ ಎಂದು ಹೇಳಿದರು.

ಇದನ್ನೂ ಓದಿ : ಬೀದರ್ | ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ಗೆ ಜೀವಾವಧಿ ಶಿಕ್ಷೆ ವಿಧಿಸಿ
ಈ ಸಂದರ್ಭದಲ್ಲಿ ಬ್ರೇನ್ ಪೌಂಡೇಶನ್ ಸಂಸ್ಥಾಪಕ ನಂದಾದೀಪ ಬೊರಳೆ, ಉಪನ್ಯಾಸಕ ರಮೇಶ ಪವಾರ್, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಾಜಿ ಪಾಟೀಲ್ ಪ್ರಮುಖರಾದ ಅನೀತಾ, ಶ್ರೀಕಾಂತ್ ಮೂಲಗೆ, ಮಹೇಶ್ ಮಾನಕೋಜಿ, ರಾಜಕುಮಾರ ರಕ್ಷಾಳ, ಶಾದುಲ, ವೀರನಾಥ ಮತ್ತಿತರರು ಉಪಸ್ಥಿತರಿದ್ದರು.





