ವಕೀಲರ ಅವಹೇಳನ ಮಾಡಿರುವ ಗಾಂಧಿಗಂಜ್ ಠಾಣೆ ಸಿಪಿಐ ಆನಂದರಾವ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ.
ವಕೀಲರ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ನಿಯೋಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ʼಸಿವಿಲ್ ದಾವೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿ ಮಾಡಿದ ವಕೀಲ ಸುಂದರರಾಜ ಬಿ. ಫಿರಂಗೆ ಅವರೊಂದಿಗೆ ಸಿಪಿಐ ಅವರು ಅನುಚಿತವಾಗಿ ನಡೆದುಕೊಂಡಿದ್ದಾರೆ.ಏಕ ವಚನ ಬಳಸಿದ್ದಾರೆ. ವಕೀಲರು, ನ್ಯಾಯಾಲಯ, ನ್ಯಾಯವನ್ನು ಹೀಯ್ಯಾಳಿಸಿದ್ದಾರೆ. ವಕೀಲರ ಘನತೆ, ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆʼ ಎಂದು ಆರೋಪಿಸಿದರು.
ʼಸಿಪಿಐ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಹಿತಕರ ಘಟನೆ ಹಾಗೂ ಸಿವಿಲ್ ಪ್ರಕರಣದಲ್ಲಿ ಪೊಲೀಸ್ ಹಸ್ತಕ್ಷೇಪ ಮರುಕಳಿಸದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಆದೇಶಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಯುಗಧರ್ಮ | ಸಮಾಜವಾದಿ ಚಳವಳಿಯ ನೈತಿಕ ಮತ್ತು ಸೃಜನಶೀಲ ಪರಂಪರೆ
ಸಂಘದ ಅಧ್ಯಕ್ಷ ಸನ್ಮುಖಯ್ಯ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ ವಿ. ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಧನರಾಜ ಎಸ್. ಬಿರಾದಾರ, ಜಂಟಿ ಕಾರ್ಯದರ್ಶಿ ಬಜರಂಗ ಪಿ. ಕಾಶೆಂಪುರ, ಖಜಾಂಚಿ ಜಯಶ್ರೀ ಡಿ. ಪಾಟೀಲ, ಮಾಜಿ ಅಧ್ಯಕ್ಷ ಶಿವಶರಣಪ್ಪ(ಪುಟ್ಟು) ಪಾಟೀಲ, ವಕೀಲ ಗುರುದಾಸ್ ಅಮದಲಪಡ್, ಸಂಘದ ಸದಸ್ಯರು ಇದ್ದರು.





