ಮನೆಯ ಕಾಂಕ್ರೀಟ್ ಮಹಡಿ ಮೇಲೆ 228 ಚದರ ಅಡಿ ಜಾಗದಲ್ಲಿ ಸಾಲು ಸಾಲಾಗಿ ಕಾಣುವ ಕುಂಡಗಳು. ಪ್ರತಿ ಕುಂಡದಲ್ಲೂ ತರಹೇವಾರಿ ಡ್ರ್ಯಾಗನ್ ಫ್ರೂಟ್ ಗಿಡ, ವೈವಿಧ್ಯಮಯ ಬಣ್ಣದ ಹೂವು ಹಾಗೂ ಹಣ್ಣುಗಳು.
ಬೀದರ್ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸ ಸಮೀಪದ ಗೌಳಿಗಲ್ಲಿ ಬಡಾವಣೆಯಲ್ಲಿರುವ ಸಂತೋಷ ಗಿರಿ ಚಂದ್ರಕಾಂತ ಮೈಲೂರಕರ್ ಅವರು ಹಸಿರು ಪಸರಿಸುವ ಉದ್ದೇಶದಿಂದ ತಮ್ಮ ಮನೆ ಮಹಡಿ ಮೇಲೆ ಡ್ರ್ಯಾಗನ್ ಕೈತೋಟವನ್ನು ಅಂದವಾಗಿ ಬೆಳೆದು ಗಮನ ಸೆಳೆದಿದ್ದಾರೆ.
ವೃತ್ತಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಆಗಿರುವ ಸಂತೋಷ ಗಿರಿ ತಮ್ಮ ಮನೆ ತಾರಸಿ ಮೇಲೆ ಸುಮಾರು 228 ಚದರ ಅಡಿ ಜಾಗದಲ್ಲಿ ಒಟ್ಟು 17 ಕುಂಡಗಳಲ್ಲಿ 12 ಜಾತಿಗಳ ಡ್ರ್ಯಾಗನ್ ಸಸಿ ನೆಟ್ಟು ಸಾವಯವ ಪದ್ಧತಿ ಅಳವಡಿಸಿಕೊಂಡು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ಯಶಸ್ವಿಯಾಗಿದ್ದಾರೆ.

ಸಂತೋಷ ಅವರ ಮನೆಯ ತಾರಸಿಗೆ ಕಾಲಿಟ್ಟರೆ ಸಾಕು, ಡ್ರ್ಯಾಗನ್ ಹಣ್ಣಿನ ಸಸಿ ಕುಂಡಗಳ ಜೊತೆಗೆ ಕಮಲ, ವಾಟರ್ ಲಿಲ್ಲಿ ಇತ್ಯಾದಿ ಹೂವುಗಳು ಸ್ವಾಗತಿಸುತ್ತವೆ. ಪುಟ್ಟ ಕುಂಡದಲ್ಲಿ ಬೆಳೆದು ನಿಂತ ಪೇರಳೆ, ಬಾರೇಹಣ್ಣು, ಮೊಸಂಬಿ, ವಾಟರ್ ಆ್ಯಪಲ್ ಇತರೆ ಬಗೆಯ ಹಣ್ಣಿನ ಸಸಿ ಮುದ ನೀಡುತ್ತವೆ. ಮನೆ ಆವರಣದಲ್ಲಿ ಖಾಲಿ ಇರುವ ಜಾಗದಲ್ಲಿ ಹೂದೋಟ, ತರಕಾರಿ, ಹಲವು ಬಗೆಯ ಸಸ್ಯರಾಶಿ ನೋಡುಗರ ಗಮನ ಸೆಳೆಯುತ್ತದೆ.
ಡ್ರ್ಯಾಗನ್ ಬೆಳೆಯಲು ಕಾರಣವೇನು?
2017ರಲ್ಲಿ ನಾನು ಕಲಬುರಗಿಯ ಬಿಗ್ ಬಜಾರ್ ತೆರಳಿದ್ದಾಗ ಡ್ರ್ಯಾಗನ್ ಅಪರೂಪದ ಹಣ್ಣು ಕಂಡು ಇದು ನಮ್ಮ ಬೀದರ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸಿಗುವುದಿಲ್ಲ. ನಮ್ಮ ಭಾಗದಲ್ಲಿಯೂ ಈ ಹಣ್ಣು ಬೆಳೆಯಬೇಕು ಎಂಬ ಕುತೂಹಲ ಮೂಡಿತು. 2018ರಲ್ಲಿ ತೀವ್ರ ಅನಾರೋಗ್ಯದಿಂದ ರಕ್ತದಲ್ಲಿನ ಪೇಟ್ಲೆಟ್ ಪ್ರಮಾಣ ಕುಸಿದಿದೆ ಎಂದು ವೈದ್ಯರು ತಿಳಿಸಿದರು. ಆವಾಗ ವೈದ್ಯರ ಸಲಹೆಯಂತೆ ಕಿವಿ, ಡ್ರ್ಯಾಗನ್ ಹಣ್ಣು ಸೇವಿಸಿದೆ. ಈ ದುಬಾರಿ ಬೆಲೆಯ ಹಣ್ಣು ಮನೆಯಲ್ಲಿಯೇ ಏಕೆ ಬೆಳೆಯಬಾರದು ಎಂದು ಯೋಚಿಸಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಅಂದೇ ನಿರ್ಧಾರ ಮಾಡಿದ್ದೆ ಎನ್ನುತ್ತಾರೆ ಸಂತೋಷ ಗಿರಿ.

‘2020ರಲ್ಲಿ ಮಹಾರಾಷ್ಟ್ರದ ನಾಸಿಕ್ ಮೂಲದ ರೈತರೊಬ್ಬರಿಂದ ಮೊದಲಿಗೆ ನಾಲ್ಕು ಸಸಿ ಖರೀದಿಸಿ ಮಹಡಿ ಮೇಲೆ ಕುಂಡದಲ್ಲಿ ನೆಟ್ಟಿದ್ದೇನೆ. ಅದರಲ್ಲಿ ಒಂದು ಸಸಿ ನಾಶವಾಯಿತು. ತದನಂತರ 2021ರಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಸೇರಿದ ಬಳಿಕ ನನ್ನ ಮೊದಲ ಸಂಬಳದಿಂದ ಕಬ್ಬಿಣದ ಫ್ರೇಮ್ ನಿರ್ಮಿಸಿದ್ದೇನೆ. ಕಬ್ಬಿಣದ ಫ್ರೇಮ್ ಮೇಲೆ ಎರಡು ಅಡಿ ಅಂತರದಲ್ಲಿ ಕುಂಡಗಳಿಟ್ಟು ಅದರಲ್ಲಿ ಸಸಿ ನೆಟ್ಟು ಪೋಷಿಸಿದ್ದೇನೆ. ತದನಂತರ 2023 ಬೇರೆ ರಾಜ್ಯದ ರೈತರು, ಸಾಮಾಜಿಕ ಜಾಲತಾಣದಿಂದ ಪರಿಚಯವಾದ ಸ್ನೇಹಿತರಿಂದ ಹೆಚ್ಚಿನ ಮಾಹಿತಿ ಪಡೆದು ಒಟ್ಟು 12 ಜಾತಿಯ ಡ್ರ್ಯಾಗನ್ ಹಣ್ಣಿನ ಸಸಿ ನೆಟ್ಟು ಬೆಳೆದಿದ್ದು, ಈಗ ನಮ್ಮಲ್ಲಿ ಹಳದಿ, ಕೆಂಪು ಹಾಗೂ ಬಿಳಿ ಬಣ್ಣದ ಡ್ರ್ಯಾಗನ್ ಹಣ್ಣು ಸಿಗುತ್ತದೆ’ ಎಂದು ವಿವರಿಸಿದರು.
ಸಾವಯುವ ಗೊಬ್ಬರ ಬಳಕೆ :
ʼಈ ಅಪರೂಪದ ಡ್ರ್ಯಾಗನ್ ಹಣ್ಣು ಒಮ್ಮೆ ನಾಟಿ ಮಾಡಿದರೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಫಸಲು ನೀಡುತ್ತದೆ. ವರ್ಷಕ್ಕೆ ಸುಮಾರು ಐದು ಬಾರಿ ಹಣ್ಣು ಕಟಾವು ಮಾಡಬಹುದು. ಸಸಿಗೆ ಹೆಚ್ಚು ನೀರುಣಿಸುವ ಅಗತ್ಯವಿಲ್ಲ. ಪ್ರಾಣಿಗಳ ಹಾವಳಿ ಇಲ್ಲ. ಅಲ್ಪ ಪ್ರಮಾಣದಲ್ಲಿ ನೀರು, ಸೆಗಣಿ ಗೊಬ್ಬರ, ಕುರಿ ಗೊಬ್ಬರ ಮತ್ತು ಆಗಾಗ ಸಣ್ಣಪುಟ್ಟ ನಿರ್ವಹಣೆ ಮಾಡಿದರೆ ಸಾಕು. ಉತ್ತಮ ಹಣ್ಣು ಪಡೆಯಬಹುದುʼ ಎನ್ನುತ್ತಾರೆ ಸಂತೋಷಗಿರಿ.
‘ಸಸಿ ನಾಟಿ ಮಾಡಿದ ಒಂದು ವರ್ಷಕ್ಕೆ ಫಸಲು ಬರಲು ಶುರುವಾಗುತ್ತದೆ. ಪ್ರತಿ ಬಾರಿ ಕಟಾವು ಮಾಡಿದಾಗ ಸರಾಸರಿ 100 ರಿಂದ 350 ಕೆಜಿ ವರೆಗೆ ಹಣ್ಣು ಬರುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ 1ಕೆಜಿ ಡ್ರ್ಯಾಗನ್ ಹಣ್ಣಿನ ದರ 100-150 ರೂಪಾಯಿ ಇದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಫಸಲು ಬರಲಿದ್ದು, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಲು ಡ್ರ್ಯಾಗನ್ ಕೃಷಿ ಉತ್ತಮವಾಗಿದೆ. ಇಲ್ಲಿತನಕ ನಾನು ಬೆಳೆದ ಹಣ್ಣು ಮಾರುಕಟ್ಟೆಯಲ್ಲಿ ಮಾರಾಟ ಮಾಡಿಲ್ಲ. ಸ್ನೇಹಿತರಿಗೆ, ಸಂಬಂಧಿಕರಿಗೆ ಕೊಟ್ಟಿದ್ದೇನೆʼ ಎಂದು ತಿಳಿಸಿದರು.

ವಿವಿಧ ಕಾಲೇಜುಗಳಲ್ಲಿ ಬೋಧನೆ ವೃತ್ತಿಯಲ್ಲಿರುವ ಸಂತೋಷ ಗಿರಿ ಅವರು, ದೈನಂದಿನ ಕೆಲಸಗಳ ಜತೆಗೆ, ತಾರಸಿ ತೋಟದ ನಿರ್ವಹಣೆ ಉತ್ತಮವಾಗಿ ಮಾಡುತ್ತಾರೆ. ‘ತೋಟದ ನಿರ್ವಹಣೆ ಒತ್ತಡ ನಿವಾರಿಸುತ್ತದೆ, ನನ್ನ ಬೋಧನಾ ವಿಷಯಕ್ಕೆ ಸಂಬಂಧಿಸಿದ್ದು, ಸಂಶೋಧನೆಗೂ ಇದು ಅತ್ಯಂತ ಉಪಯುಕ್ತವಾಗಿದೆ’ ಎಂಬುದು ಅವರ ಅಭಿಪ್ರಾಯ. ಬೆಳಿಗ್ಗೆ ಬಿಸಿ ಬಿಸಿ ಕಾಫಿಯೊಟ್ಟಿಗೆ ತಾರಸಿಗೆ ಬಂದು, ಗಿಡಗಳಿಗೆ ನೀರು ಗೊಬ್ಬರ ಉಣಿಸುತ್ತಾರೆ. ರೋಗ–ರುಜಿನ ಬಂದಿರುವ ಗಿಡಗಳನ್ನು ಮೈದಡವಿ ಮಾತನಾಡಿಸಿ, ಔಷಧೋಪಚಾರ ಮಾಡುತ್ತಾರೆ. ಇವರಿಗೆ ಹೂವು-ಹಣ್ಣಿನ ಗಿಡಗಳ ಒಡನಾಟವೇ ಬೆಳಗಿನ ವಾಕಿಂಗ್, ವ್ಯಾಯಾಮ, ಯೋಗ, ಧ್ಯಾನ ಎಲ್ಲ ಎಂಬಂತಿದೆ.
ಇದನ್ನೂ ಓದಿ : ಬೀದರ್ | 35 ಗುಂಟೆಯಲ್ಲಿ ʼಡ್ರ್ಯಾಗನ್ ಫ್ರೂಟ್ʼ ಬೆಳೆದ ರೈತ; ವರ್ಷಕ್ಕೆ ಲಕ್ಷ ಲಕ್ಷ ಆದಾಯ
ನಿತ್ಯ ಒಂದು ಗಂಟೆ ತಾರಸಿ ತೋಟದ ಗಿಡಗಳ ಜತೆ ಒಡನಾಟ. ರಜೆ ದಿನಗಳಲ್ಲಿ ಹೆಚ್ಚು ಸಮಯ ಕೊಡುತ್ತಾರೆ. ಸಾವಯುವ ಗೊಬ್ಬರ ಹಾಕುವುದು, ಗಿಡಗಳ ಬುಡಕ್ಕೆ ಮಣ್ಣು ಹಾಕುವುದು, ಕಳೆ ತೆಗೆಯುವುದು ಎಲ್ಲವನ್ನೂ ತಾವೇ ಮಾಡುತ್ತಾರೆ.
ಮನೆ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಇನ್ನಷ್ಟು ಹೂವು, ಗಿಡ ಹಾಗೂ ತರಕಾರಿ ಕೈತೋಟ ನಿರ್ಮಿಸುವುದು ಹಾಗೂ ತಮ್ಮ ಜಮೀನಿನಲ್ಲಿ ಫಾರ್ಮ್ ಹೌಸ್ ನಿರ್ಮಿಸುವ ಕನಸಿದೆ. ವಿವಿಧ ಬಗೆಯ ಸಸ್ಯರಾಶಿ ಬೆಳೆಯುವುದರಲ್ಲಿ ನನಗೆ ಮೊದಲಿನಿಂದಲೂ ತುಂಬಾ ಆಸಕ್ತಿ….ಅಷ್ಟೇ ಸಂತೃಪ್ತಿಯೂ ಆಗುತ್ತದೆ ಎಂದು ಸಂತೋಷ ಗಿರಿ ಖುಷಿಯಿಂದ ತಮ್ಮ ಅನುಭವವನ್ನು ʼಈದಿನʼದೊಂದಿಗೆ ಹಂಚಿಕೊಂಡರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




