ಮಹಾತ್ಮ ಗಾಂಧೀಜಿ ಅವರು ಜನತೆಯ ಎಲ್ಲ ವಿಷಯಗಳಿಗೂ ಸ್ಪಂದಿಸುತ್ತಿದ್ದರು. ಅವರ ಈ ಬೆಳವಣಿಗೆಯನ್ನು ಅರಿತ ಅವರು ತಮ್ಮ ವಿಚಾರ ಪ್ರಸರಣಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಆಶ್ರಯಿಸಿದರು ಎಂದು ಹುಮನಾಬಾದ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೀರಾಂತರೆಡ್ಡಿ ಜಂಪಾ ಹೇಳಿದರು.
ಹುಮನಾಬಾದ ಪಟ್ಟಣದಲ್ಲಿ ಶನಿವಾರ ಎಸ್.ಬಿ.ಸಿ.ಎಸ್. ಕಲಾ ಮತ್ತು ಎಸ್.ವಿ. ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜಿ ಅವರ ಸರ್ವೋದಯ ತತ್ವದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೀರಾಂತರೆಡ್ಡಿ ಜಂಪಾ ಮಾತನಾಡಿ, ʼಗಾಂಧೀಜಿ ಅವರು ʼಇಂಡಿಯನ್ ಒಪೀನಿಯನ್’ ಎಂಬ ಇಂಗ್ಲಿಷ್ ಪತ್ರಿಕೆ ದಕ್ಷಿಣ ಆಫ್ರಿಕಾ ಹೋರಾಟ ಕಾಲದಲ್ಲಿ ಆರಂಭವಾಗಿತ್ತು. ಭಾರತದಲ್ಲಿ ‘ಹರಿಜನ’ ಪತ್ರಿಕೆ ಅವರ ಮುಖವಾಣಿಯಾಯಿತು. ಗಾಂಧೀಜಿ ಅವರು ತಮ್ಮ ಭಾವನೆ, ಅನಿಸಿಕೆ, ತಾತ್ವಿಕ ಚಿಂತನೆ, ಹೋರಾಟ ಮಾರ್ಗ, ಎಲ್ಲವನ್ನೂ ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್ನಲ್ಲಿ ಪತ್ರಿಕೆಗಳ ಮೂಲಕ ತಿಳಿಸುತ್ತಿದ್ದರು. ಆ ಕಾರಣದಿಂದ ಅವರ ವಿಚಾರದೆಳೆಗಳು ಅನಂತವಾಗಿ ಇಂದಿಗೂ ಅಚ್ಚಿನ ಪ್ರತಿಗಳಲ್ಲಿ ಲಭ್ಯವಾಗಿವೆʼ ಎಂದರು.
ʼಗಾಂಧೀಜಿಯವರು ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳನ್ನು ಅನುಯಾಯಿಗಳಿಗೆ ನೈತಿಕ ಹೊಣೆಗಾರಿಕೆಯ ಸೂತ್ರಗಳು, ಹೋರಾಟ ಮಾರ್ಗ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗೆ ಪರಿಹಾರ ನೀಡಿದ್ದರು. ಅಸ್ಪ್ರಶ್ಯತೆಯನ್ನು ಖಂಡಿಸುತ್ತಿದ್ದರು. ಧಾರ್ಮಿಕ ಸಾಮರಸ್ಯ, ಗ್ರಾಮಾಭಿವೃದ್ಧಿ, ನೈರ್ಮಲ್ಯ ಅವರ ಪ್ರಧಾನ ಉದ್ದೇಶವಾಗಿತ್ತು. ಅಹಿಂಸಾ ಮನೋಧರ್ಮದ ತಾತ್ವಿಕತೆಯನ್ನು ಗಾಂಧೀಜಿ ಅವರ ಬರಹಗಳಲ್ಲಿ ಕಾಣಬಹುದುʼ ಎಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ಎಸ್.ಬಿ.ಸಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ.ರವೀಂದ್ರನಾಥಪ್ಪ ಕೆ. ಮಾತನಾಡಿ, ʼಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನ ಇಂದಿನ ಯುವ ಜನತೆಗೆ ತಿಳಿಸುವುದು ಅಗತ್ಯವಾಗಿದೆ. ಗಾಂಧೀಜಿ ಅವರ ಸತ್ಯ, ಅಹಿಂಸೆ, ಸಾಮರಸ್ಯ ತತ್ವಗಳನ್ನು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆʼ ಎಂದು ಹೇಳಿದರು.
ಸಾಹಿತಿ ಶಕೀಲ್ ಐ.ಎಸ್. ಅವರು ವಿಶೇಷ ಉಪನ್ಯಾಸ ನೀಡಿ, ʼನಮಗೆ ಗಾಂಧಿಯುಗದ ಯಾವುದೇ ಹಿರಿತಲೆಯನ್ನು ಕಂಡಾಗ ಬರುವ ಭಾವನೆಯೇ ಪ್ರೀತಿ, ದ್ವೇಷರಹಿತ ಭಾವ, ಕರ್ತವ್ಯನಿರತ ವ್ಯಕ್ತಿ ಸ್ವರೂಪಗಳು. ಗಾಂಧಿಯವರ ಚಿಂತನ ಮಂಥನದ ಪರಿಣಾಮವಾಗಿ ಸರ್ವಜನ ಒಳಿತಿನ ಸಿದ್ಧಾಂತ: ಸರ್ವೋದಯ ಸಮಾಜ ನಿರ್ಮಾಣ ಸಾಧ್ಯ. ಗಾಂಧೀಜಿ ಅವರ ಗ್ರಾಮ ಪುನಾರಚನೆ, ಗ್ರಾಮ ಸ್ವಪರಿಪೂರ್ಣ ಉತ್ಪಾದನಾ ಘಟಕ, ನೂಲುವ, ನೇಯುವ ಕಾಯಕ, ಗ್ರಾಮ ನೈರ್ಮಲ್ಯ ಧೋರಣೆ, ಬದುಕಿನಾಶ್ರಯದ ವೃತ್ತಿಕಲಿಕೆಯ ಶಿಕ್ಷಣ, ಸ್ಥಳೀಯ ಮಾರುಕಟ್ಟೆಯ ಕೊಂಡು-ಕೊಳ್ಳುವ ಉದ್ದೇಶ, ಕುಡಿತ ನಿಷೇಧ ಮುಂತಾದವುಗಳು ಗಾಂಧಿ ಜೀವನ ದೃಷ್ಟಿಯ ಮೂಲತತ್ವಗಳಾಗಿವೆʼ ಎಂದು ತಿಳಿಸಿದರು.
ಹುಮನಾಬಾದ ತಾಲೂಕು ಕಸಾಪ ಮಾಜ ಅಧ್ಯಕ್ಷ ರವೀಂದ್ರಕುಮಾರ ಭಂಡಾರಿ ಮಾತನಾಡಿ, ʼಗಾಂಧಿಯವರು ವರ್ಧಾ ಮತ್ತು ಸಾಬರಮತಿ ಆಶ್ರಮಗಳಲ್ಲಿ ಎಲ್ಲ ಜಾತಿ, ಧರ್ಮಗಳ ಅನುಯಾಯಿಗಳಿಗೆ ಸಹಬಾಳ್ವೆಯ ತರಬೇತಿ ದೊರೆಯುವಂತೆ ಮಾಡಿದರುʼ ಎಂದರು.
ಚಕೋರ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ. ಮಾತನಾಡಿ, ʼಮಕ್ಕಳಲ್ಲಿ ಸ್ವಚ್ಚತಾ ಆಂದೋಲನದಡಿಲ್ಲಿ ಅರಿವು ಮೂಡಿಸಬೇಕು. ಗಾಂಧೀಜಿಯವರ ಆದರ್ಶಗಳಿಂದ ಸಮಾಜದಲ್ಲಿ ಬೇರೂರಿರುವ ಅಂಧಕಾರ, ದುಶ್ಚಟಗಳ ನಿರ್ಮೂಲನೆ ಸಾಧ್ಯʼ ಎಂದರು.
ಇದನ್ನೂ ಓದಿ : ಬೀದರ್ | ಸಾಲದ ಹೊರೆ : ರೈತ ನೇಣಿಗೆ ಶರಣು
ಸಂಜೀವಿನಿ, ಭಾಗ್ಯಶ್ರೀ ಪ್ರಾರ್ಥನೆ ನೆರವೇರಿಸಿದರು. ಪ್ರೊ.ದೀಪ ನಿರೂಪಿಸಿದರು. ಪ್ರೊ.ಪ್ರವೀಣ ಈಶ್ವರ ಕಲಬುರಗಿ ಸ್ವಾಗತಿಸಿದರು. ಡಾ.ಸಂಗಪ್ಪ ತೌಡಿ ವಂದಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.





