ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಂದು ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಭಂತೆ ವರಜ್ಯೋತಿ ಅವರು ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಿಂದ ಎಪ್ರಿಲ್ 14ರವರೆಗೆ ನಡೆಯುವ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ನಡೆಯಲಿದೆ. ಈ ಅಭಿಯಾನವು ಜನರಿಗೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ವೈಚಾರಿಕ ಪ್ರಜ್ಞೆ ಮೂಡಿಸಲಿ. ಬುದ್ಧ ಭಾರತ ಸಮೃದ್ಧ ಭಾರತ ಇಂದು ಮನುವಾದಿಗಳಿಂದ ದ್ವೇಷ ಅಸೂಯೆ, ಅಂಧಕಾರ, ಅವೈಜ್ಞಾನಿಕತೆಯಿಂದ ನಾಶವಾಗುತ್ತಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಳಿದು ಹೋಗಿದ 2,500 ವರ್ಷಗಳ ಬುದ್ಧ ತತ್ವದ ಗತವೈಭವ ಅಧ್ಯಯನ ನಡೆಸಿ ಸಂವಿಧಾನದ ಮೂಲಕ ಮರಳಿ ತಂದಿದ್ದಾರೆ. ಎಲ್ಲ ಜಾತಿ-ಧರ್ಮದವರಿಗೂ ಸಂವಿಧಾನದ ಮೂಲಕ ಸಮಾನ ಅವಕಾಶಗಳನ್ನು ನೀಡಲಾಗಿದೆ. ದೇಶದ ಪ್ರತಿಯೊಬ್ಬರೂ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದನ್ನು ಸಹಿಸದವರು ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅಪಮಾನಕಾರಿಯಾದ ಮಾತನಾಡುತ್ತಿದ್ದಾರೆ. ಮನೆ-ಮನೆಗೆ ಅಂಬೇಡ್ಕರ್ ಅಭಿಯಾನವು ಜನರಿಗೆ ಸಂವಿಧಾನ ಜಾಗೃತಿ ಜೊತೆಗೆ ಬಾಬಾ ಸಾಹೇಬರ ಆದರ್ಶಗಳನ್ನು ಮುಟ್ಟಿಸುವ ಕೆಲಸ ಆಗಲಿʼ ಎಂದರು.
ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ ಮಾತನಾಡಿ, ʼ ಇಂದು ಯುವ ಜನಾಂಗ ದುಶ್ಚಟಕ್ಕೆ ಬಲಿಯಾಗುತ್ತಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ, ಆರೋಗ್ಯ, ಶಿಕ್ಷಣದ ಮಹತ್ವ ಕುರಿತು ಜಾಗೃತಿ ಮಾಡುವುದು ತುಂಬಾ ಅವಶ್ಯಕತೆವಿದೆ. ಹಳ್ಳಿಯಲ್ಲಿರುವ ಅಂಬೇಡ್ಕರ್ ಭವನಗಳನ್ನು ಗ್ರಂಥಾಲಯಗಳಾಗಿ ಪರಿವರ್ತಿಸುವ ಮಹತ್ವದ ಜವಾಬ್ದಾರಿ ಈ ಅಭಿಯಾನ ಹೊಂದಿದೆ. ಅಭಿಯಾನಕ್ಕೆ ಎಲ್ಲಾ ಸಂಘಟನೆಗಳು, ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಗಳು, ಬೆಂಬಲಿಸಿ ಸಹಕರಿಸಬೇಕುʼ ಎಂದು ಕೋರಿದರು.
ಇದನ್ನೂ ಓದಿ : ತೆಲಂಗಾಣ | ದೇವರ ಹೆಸರಲ್ಲಿ ನಡೆಯುವ ಪ್ರಾಣಿ ಬಲಿ ನಿಲ್ಲಲಿ : ಶಾಂತಮಯ ಸ್ವಾಮೀಜಿ
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಅಭಿಯಾನದ ಸಂಚಾಲಕ ಮಹೇಶ ಗೋರನಾಳಕರ್ ಸೇರಿದಂತೆ ಪ್ರಮುಖರಾದ ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ್, ಬಾಬುರಾವ ಪಾಸ್ವಾನ್, ದಶರಥ ಗುರು, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ರಮೇಶ ಸಾಗರ, ಶರಣು ಫುಲೆ, ಪ್ರಕಾಶ ರಾವಣ, ಹರ್ಷಿತ ದಾಂಡೆಕರ್, ಅಂಬಾದಾಸ ಗಾಯಕವಾಡ, ಉಲಾಸಿನಿ ಮುದಾಳೆ, ಲುಂಬಿಣಿ ಪರಂಜಪೆ, ಸಂಗೀತಾ ಕಾಂಬಳೆ, ಪ್ರದೀಪ್ ನಾಟೆಕರ್, ಸಂದೀಪ್ ಕಾಂಟೆ, ಸುನೀಲ್ ಸಂಗಮ, ರಮೇಶ ಪಾಸ್ವಾನ್ ಮತ್ತಿತರರಿ ಉಪಸ್ಥಿತರಿದ್ದರು.





