ಬೀದರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಡಿ.13 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಬೃಹತ್ ಲೋಕ ಅದಾಲತ್ ಹಮ್ಮಿಕೊಂಡಿರುವ ಪ್ರಯುಕ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ನಲ್ಲಿಯೂ ಲೋಕ ಅದಾಲತ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಬೃಹತ್ ಲೋಕ ಆದಾಲತ್ನಲ್ಲಿ ರಾಜಿ ಸಂಧಾನದಿಂದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಉತ್ತಮ ಅವಕಾಶವಿದ್ದು, ಕಕ್ಷಿದಾರರಿಗೆ ಯಾವುದೇ ಖರ್ಚು ವೆಚ್ಚ ಇರುವುದಿಲ್ಲ. ಹೀಗಾಗಿ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ʼತ್ವರಿತ ನ್ಯಾಯಕ್ಕಾಗಿ ದಿ.13.12.2025ರ ಲೋಕ ಆದಾಲತ್ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿರಿʼ ಎಂದು ಮುದ್ರಿಸಲಾಗಿದೆ.
ಜಿಲ್ಲೆಯ ಎಲ್ಲ ಘಟಕದ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ನೀಡುವ ಟಿಕೆಟ್ನಲ್ಲಿ ಲೋಕ ಅದಾಲತ್ನ ಮಾಹಿತಿ, ದಿನಾಂಕವನ್ನು ಉಚಿತವಾಗಿ ಮುದ್ರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ನಾವೂ ಕೈಜೋಡಿಸಿ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ಸಾರ್ವಜನಿಕರು ಲೋಕ ಅದಾಲತ್ನ ಸದುಪಯೋಗ ಪಡಿದುಕೊಳ್ಳಲಿʼ ಎಂದು ಕೆಕೆಆರ್ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ʼಈದಿನʼಕ್ಕೆ ತಿಳಿಸಿದ್ದಾರೆ.
ʼಈ ಬಾರಿ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಗೊಳಿಸಲು ಯೋಜನೆ ರೂಪಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 29,124 ಪ್ರಕರಣಗಳು ಪೆಂಡಿಂಗ್ ಇದ್ದು ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಿದ್ದು, ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 17 ಲೋಕ ಅದಾಲತ್ ಬೆಂಚ್ಗಳನ್ನು ರಚಿಸಲಾಗಿದೆʼ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ.ರಹಮಾನ್ ತಿಳಿಸಿದರು.
ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯ ಶುಲ್ಕ ವಾಪಸ್ ಸಿಗಲಿದೆ. ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ ಇಬ್ಬರೂ ಪಕ್ಷಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದುವ ಅವಕಾಶ ಇರುತ್ತದೆ. ಯಾವುದೇ ಖರ್ಚು ವೆಚ್ಚ ಇಲ್ಲದೆ ಶೀಘ್ರವಾಗಿ ಪ್ರಕರಣಗಳು ಇತ್ಯರ್ಥವಾಗುತ್ತವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ, ಸಿವಿಲ್ ಪ್ರಕರಣ, ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್ ಪ್ರಕರಣ, ರಾಜಿ ಆಗಬಹುದಾದ ಅಪರಾಧಿಕ ಪ್ರಕರಣ, ಕೌಟುಂಬಿಕ, ಕಂದಾಯ ಪ್ರಕರಣಗಳಲ್ಲಿ ರಾಜಿ ಪ್ರಕರಣ, ಕಾರ್ಮಿಕರ, ಬ್ಯಾಂಕ್ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ.





