ಲೋಕಾಯುಕ್ತ ಪೊಲೀಸರು ಗುರುವಾರ ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ವಿಜಯಕುಮಾರ ಎಂಬುವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಹಾಗೂ ಜಿಲ್ಲೆಯ ಹಲವೆಡೆ ದಾಳಿ ನಡೆಸಿದ್ದು, ₹1.80 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿರುವುದು ತಿಳಿದುಬಂದಿದೆ.
ಜಿಲ್ಲೆಯ ಹುಮನಾಬಾದ್ ಪಟ್ಟಣ, ಬೀದರ್ ತಾಲೂಕಿನ ಹೊಚಕನ್ನಳ್ಳಿ ಹಾಗೂ ಹಳ್ಳಿಕೇಡ್ (ಕೆ), ಚಿಟಗುಪ್ಪ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗಿನ ಜಾವ ಏಕಕಾಲಕ್ಕೆ ದಾಳಿ ನಡೆಸಿದರು. ರಾತ್ರಿ 9.30ರ ವರೆಗೂ ಶೋಧ ಕಾರ್ಯ, ದಾಖಲೆಗಳ ಪರಿಶೀಲನೆ, ಆಸ್ತಿಯ ಮೌಲ್ಯ ಲೆಕ್ಕ ಹಾಕುವ ಪ್ರಕ್ರಿಯೆ ಮುಂದುವರೆಸಿದರು.

ಬೀದರ್ ತಾಲೂಕಿನ ಹೊಚಕನ್ನಳ್ಳಿ ಹಾಗೂ ಹಳ್ಳಿಕೇಡ್ (ಕೆ) ಗ್ರಾಮದಲ್ಲಿ 15 ಎಕರೆ ಕೃಷಿ ಜಮೀನು, ಹುಮನಾಬಾದ್ ಪಟ್ಟಣದಲ್ಲಿ ಒಂದು ಬಂಗಲೆ, ಮೂರು ನಿವೇಶನ, ₹20 ಲಕ್ಷ ಮೌಲ್ಯದ ಜೀವ ವಿಮೆ, ಒಂದು ಕಾರು, ಮೂರು ದ್ವಿಚಕ್ರ ವಾಹನಗಳು, ₹10 ಲಕ್ಷ ಮೌಲ್ಯದ ಗೃಹ ಬಳಕೆಯ ವಸ್ತುಗಳು, ₹5 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಸೇರಿದಂತೆ ಇತರೆ ವಸ್ತುಗಳನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದಾರೆ.
ವಿಜಯಕುಮಾರ ಅವರಿಗೆ ಸೇರಿದ ಲಾಕರ್, ಅಲ್ಮೇರಾ, ಕಾರಿನಲ್ಲಿ ಅವರಿಗೆ ಸಂಬಂಧಿಸಿದ ದಾಖಲೆ ಪತ್ರಗಳು, ನೇಮಕಾತಿ ದಾಖಲೆ, ಸೇವಾ ಮಾಹಿತಿ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ಲೋಕಾಯುಕ್ತ ಡಿವೈಎಸ್ಪಿ ಎನ್ ಎಂ ಓಲೇಕಾರ್ ನೇತೃತ್ವದ ಮೂರು ಪ್ರತ್ಯೇಕ ತಂಡಗಳು ದಾಳಿ ನಡೆಸಿವೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕ್ರಮ ಆಸ್ತಿ ಆರೋಪ; ಕಾನ್ಸ್ಟೇಬಲ್ ಮನೆ ಮೇಲೆ ಲೋಕಾಯುಕ್ತ ದಾಳಿ
“ದಾಖಲೆಗಳ ಪರಿಶೀಲನೆ, ಆಸ್ತಿ ಲೆಕ್ಕ ಹಾಕುವ ಕೆಲಸ ಇನ್ನೂ ಪ್ರಗತಿಯಲ್ಲಿದೆ. ಸದ್ಯ ಮಾಹಿತಿ ಬಹಿರಂಗಪಡಿಸಲು ಆಗುವುದಿಲ್ಲ. ಆದರೆ, ಸರಿಸುಮಾರು 2 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಲೋಕಾಯುಕ್ತ ಪೊಲೀಸರೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಯೊಬ್ಬರು ಅಪಾರ ಮೌಲ್ಯದ ಆಸ್ತಿ ಹೊಂದಿರುವ ವಿಷಯ ಎಲ್ಲೆಡೆ ಹರಡಿ ತೀವ್ರ ಚರ್ಚೆಗೆ ಹುಟ್ಟು ಹಾಕಿದ್ದು, ದಿನವಿಡೀ ಎಲ್ಲೆಡೆ ಇದೇ ವಿಷಯದ ಕುರಿತು ಚರ್ಚೆ ನಡೆದಿರುವುದು ಕಂಡುಬಂದಿದೆ.




