ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲೆಯ ಎಲ್ಲ ಮೇಲ್ವಿಚಾರಕರು ಭೇಟಿ ನೀಡಿ ಕೇಂದ್ರಗಳಲ್ಲಿ ಲೋಪದೋಷಗಳನ್ನು ಪಟ್ಟಿ ಮಾಡಿ ಇಲಾಖೆಗೆ ವರದಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಂ. ಹೇಳಿದರು.
ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂಗನವಾಡಿ ಕೇಂದ್ರಗಳ ಪುನಶ್ಚೇತನಗೊಳಿಸುವ ಬಗ್ಗೆ ಔರಾದ್ ತಾಲೂಕಿನ ಸಂತಪುರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಸಮಾರೋಪಾದಿ ಭೇಟಿ ಹಾಗೂ ಮಿಂಚಿನ ಸಂಚಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ʼಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಆಹಾರ ಪದಾರ್ಥಗಳು, ಮಕ್ಕಳ ದಾಖಲಾತಿ, ಗರ್ಭಿಣಿಯರ ಮಾಹಿತಿ ಸೇರಿದಂತೆ ನಾನಾ ವರದಿಗಳನ್ನು ಪಡೆದುಕೊಂಡು ಸಿಬ್ಬಂದಿಗಳಿಗೆ ಹೆಚ್ಚಿನ ಸಲಹೆ ಸೂಚನೆಗಳನ್ನು ನೀಡಲು ಈ ಭೇಟಿ ಹಮ್ಮಿಕೊಳ್ಳಲಾಗಿದೆʼ ಎಂದರು.
ʼಸಂತಪುರ ಶಿಶು ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಔರಾದ್- ಕಮಲನಗರ ತಾಲೂಕಿನ 180ಕ್ಕೂ ಹೆಚ್ಚಿನ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳ ತಂಡದವರು ಭೇಟಿ ನೀಡಿ, ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಈ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಯಶಸ್ವಿಗೊಂಡು ರಾಜ್ಯ ವ್ಯಾಪ್ತಿಗೆ ಪ್ರಚಾರವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕುʼ ಎಂದು ಸೂಚನೆ ನೀಡಿದರು.
ʼಅಂಗನವಾಡಿ ಕೇಂದ್ರಗಳಲ್ಲಿ ಪೋಷಣ ಟ್ರ್ಯಾಕರ್ನ ಬಳಕೆ, ದಾಖಲಾತಿಗಳ ನಿರ್ವಹಣೆ, ಶಾಲಾ ಪೂರ್ವ ಶಿಕ್ಷಣದ ಅನುಷ್ಠಾನ, ಪೂರಕ ಪೌಷ್ಠಿಕ ಆಹಾರ ಸದ್ಬಳಕೆ ಹಾಗೂ ವಿವಿಧ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿರುವವರ ಮನೆ ಭೇಟಿ ಸೇರಿದಂತೆ ಇತರೆ ಯೋಜನೆಗಳು ಅನುಷ್ಠಾನವನ್ನು ಪರಿಶೀಲನೆ ಮಾಡಿ ಸುಧಾರಣೆಗೆ ಸೂಕ್ತ ಸಲಹೆಗಳನ್ನು ನೀಡಿದರು.
ಇದನ್ನೂ ಓದಿ : ಬೀದರ್ | ಸೈಬರ್ ವಂಚನೆ : 3 ವರ್ಷದಲ್ಲಿ ₹8.18 ಕೋಟಿ ದೋಖಾ
ಔರಾದ್ ತಾಲೂಕು ಸಿಡಿಪಿಒ ಇಮಾಲಪ್ಪ ಡಿಕೆ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೂಪಾ ಎಸ್. ಕೋಟೆಗೌಡರ್, ಭಾಲ್ಕಿ ಸಿಡಿಪಿಒ ಎಂ.ಡಿ ಅಬ್ದೂಲ್ ಖಲೀಲ್ ಸೇರಿದಂತೆ ಪ್ರಮುಖರಾದ ಗೌತಮ್ ಸಿಂಧೆ, ಶಾರದಾ, ಶಿವಪ್ರಕಾಶ ಹಿರೇಮಠ, ಮಂಜೂರ್ ಖಾನ್ ,ಯೋಗೇಶ್ವರಿ, ರಾಜೇಶ್ರೀ, ಸುರೇಖಾ, ಶೋಭಾ, ವಿಜಯಲಕ್ಷ್ಮಿ, ನಾಗಮ್ಮ, ಆರತಿ ಮತ್ತಿತರರಿದ್ದರು.





