ಕಮಲನಗರ ತಾಲೂಕು ಪ್ರಜಾ ಸೌಧ ಕಾಮಗಾರಿಯ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಂಗಳವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ʼಜಿಲ್ಲೆಯಲ್ಲಿ ಹೊಸ ತಾಲೂಕುಗಳು ಸ್ಥಾಪನೆಯಾದ ಹಿನ್ನೆಲೆಯಲ್ಲಿ ಜನರಿಗೆ ಸುಗಮ ಮತ್ತು ಪರಿಣಾಮಕಾರಿ ಆಡಳಿತ ಒದಗಿಸಲು ನೂತನ ಆಡಳಿತ ಸೌಧಗಳ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ₹8.60 ಕೋಟಿ ಅನುದಾನದಡಿ ಪ್ರಜಾಸೌಧ ನಿರ್ಮಾಣವಾಗಲಿದೆʼ ಎಂದರು.
ಕಮಲನಗರ, ಹುಲಸೂರ ಹಾಗೂ ಚಿಟ್ಟಗುಪ್ಪ ತಾಲೂಕುಗಳಲ್ಲಿ ಆಡಳಿತ ಭವನಗಳ ಅಗತ್ಯವನ್ನು ಮನಗಂಡು, ಈ ಕುರಿತು ನಾನು ಸಚಿವ ಸಂಪುಟದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಕಂದಾಯ ಸಚಿವರೊಂದಿಗೆ ಚರ್ಚಿಸಿ ಈ ಮೂರು ಹೊಸ ತಾಲೂಕುಗಳ ಆಡಳಿತ ಭವನ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜನಸೇವೆಗೆ ಸಮರ್ಪಿಸುವ ಉದ್ದೇಶವಿದೆ ಎಂದರು.
ಕಮಲನಗರ ಹೊಸ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕಾಗಿ ಭೂಮಿಯನ್ನು ದಾನವಾಗಿ ನೀಡಿರುವ ರಾಜಕುಮಾರ್ ಪೊಲೀಸ್ ಪಾಟೀಲ್ ಹಾಗೂ ಶೇಷೇರಾವ್ ಪಾಟೀಲ್ ಕುಟುಂಬದವರು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಔರಾದ ಶಾಸಕ ಪ್ರಭು ಚವ್ಹಾಣ್, ಮುಖಂಡರಾದ ಭೀಮಸೇನರಾವ್ ಶಿಂಧೆ, ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಭಾತಂಬ್ರಾ ಗ್ರಾಮದಲ್ಲಿ ₹5.21 ಕೋಟಿ ಅನುದಾನದ ವಿವಿಧ ಕಾಮಗಾರಿಗೆ ಚಾಲನೆ :
ಭಾಲ್ಕಿ ತಾಲೂಕಿನಲ್ಲಿ ಕಳೆದೆರಡು ದಶಕಗಳಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಮಂಗಳವಾರ ₹5.21 ಕೋಟಿ ಅನುದಾನದ ಡಾಂಬರೀಕರಣ, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣ ಸೇರಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಕೋಟಿಗಟ್ಟಲೇ ಅನುದಾನ ನೀಡಿ ರಸ್ತೆಗಳನ್ನು ಗುಣಮಟ್ಟದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

‘ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಗೆ ಮುಂಗಾರಿನ ಹಂಗಾಮಿನಲ್ಲಿ ಬಿತ್ತನೆಯಾದ ಬಹುತೇಕ ಬೆಳೆಗಳು ಜಲಾವೃತಗೊಂಡಿದ್ದವು. ಹಾಗಾಗಿ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವ
ಭರವಸೆ ನೀಡಿದ್ದೆ. ಹೆಚ್ಚುವರಿ ಪರಿಹಾರ ಒದಗಿಸಲು ಸಿಎಂ ಅವರನ್ನು ಆಹ್ವಾನಿಸಿ ವೈಮಾನಿಕ ಸಮೀಕ್ಷೆ ನಡೆಸಲಾಗಿತ್ತು.
ಅದರಂತೆ ಇದೀಗ ರಾಜ್ಯ ಮತ್ತು ಕೇಂದ್ರ ಸರಕಾರ ದಿಂದ ಸೇರಿ ಜಿಲ್ಲೆಗೆ ₹300 ಕೋಟಿ ಬೆಳೆಹಾನಿ ಪರಿಹಾರ ಒದಗಿಸಲಾಗಿದೆ. ಭಾಲ್ಕಿ ತಾಲೂಕಿಗೆ ₹60 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆಗೊಂಡಿದೆ’ ಎಂದರು.
‘ಕೆಲ ಕಡೆಗಳಲ್ಲಿ ಬೆಳೆಹಾನಿ ಸಮೀಕ್ಷೆ ಅಂತಿಮ ಹಂತದಲ್ಲಿದ್ದು ಸಮೀಕ್ಷೆ ಪೂರ್ಣಗೊಳ್ಳುತ್ತಲೇ ಮುಂದಿನ ಎರಡ್ಮೂರು ದಿನಗಳಲ್ಲಿ ರೈತರ ಖಾತೆಗೆ ಬೆಳೆಹಾನಿ ಪರಿಹಾರ ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
ಲೋಕೋಪಯೋಗಿ ಇಲಾಖೆಯ ಇಇ ಶಿವಶಂಕರ ಕಾಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಶಾಲಾ ಅವ್ಯವಸ್ಥೆ ಸುಧಾರಣೆಗೆ ಮನೆ-ಮನೆಗೆ ಭಿಕ್ಷೆ ಬೇಡಿದ ಕೆಆರ್ಎಸ್ ಕಾರ್ಯಕರ್ತರು
ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್, ಉಪಾಧ್ಯಕ್ಷೆ ಗೋದಾವರಿ ಬೀರಗೆ, ಸದಸ್ಯ ವಿಶ್ವ ಹೂಗಾರ, ಪ್ರಮುಖರಾದ ಶಂಕರ ಭೋರಾಳೆ, ಕಾಶಿನಾಥ ಲದ್ದೆ, ಭಯ್ಯ, ಅಂಬಾದಾಸ ಕೋರೆ, ಸಂತೋಷ ಬಿರಾದಾರ್, ಮುಸ್ತಾಕ ಅಹ್ಮೇದ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ಇಒ ಸೂರ್ಯಕಾಂತ ಬಿರಾದಾರ್, ಲೋಕೋಪಯೋಗಿ ಎಇಇ ಅಲ್ತಾಫ್ ಸೇರಿದಂತೆ ಹಲವರು ಇದ್ದರು. ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.





