ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶಾಸಕರ ನಿಧಿ ಮತ್ತು ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಬರುವ ಡಿ.18ರೊಳಗೆ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲು ಶೇ 50ರಷ್ಟು ಶಾಸಕರ ಮತ್ತು ಸಂಸದರ ಅನುದಾನ ಬಳಕೆ ಮಾಡಿಕೊಳ್ಳಬೇಕುʼ ಎಂದರು.
ʼಅಗತ್ಯ ಇರುವ ಕಡೆಗಳಲ್ಲಿ ಶಾಲಾ ಕೋಣೆ, ಶೌಚಾಲಯ, ಅಂಗನವಾಡಿ ನವೀಕರಣ, ಸುತ್ತುಗೋಡೆ ನಿರ್ಮಾಣ ಸೇರಿದಂತೆ ಮುಂತಾದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನಮೋದನೆ ಪಡೆದು ಹೊಸ ವರ್ಷ ಆರಂಭದ ಜನವರಿ ತಿಂಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಿಬೇಕು. ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಹಂಚಿಕೆ ಮಾಡಬೇಕು. ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಬೋಗಸ್ ಕಾಮಗಾರಿ ಕಂಡುಬಂದರೆ ಮತ್ತು ಬಿಡುಗೆಯಾದ ಅನುದಾನ ಬಳಕೆಯಲ್ಲಿ ವಿಫಲರಾದರೇ ಸಂಬಂಧಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಮಳೆಯಿಂದ ಎಷ್ಟು ವಿದ್ಯುತ್ ಕಂಬಗಳು ನೆಲಕ್ಕರುಳಿವೆ. ಕಂಡಕ್ಟರ್ ಮತ್ತು ಟ್ರಾನ್ಸ್ಫಾರ್ಮರ್ ಸ್ಥಿತಿಗತಿ ಬಗ್ಗೆ ಸಚಿವ ಖಂಡ್ರೆ ಮಾಹಿತಿ ಕೇಳಿದರು. ಜೆಸ್ಕಾಂ ಅಧಿಕಾರಿ ಮಾತನಾಡಿ ವಿದ್ಯುತ್ ಕಂಬಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಕೆಲ ಟ್ರಾನ್ಸ್ಫಾರ್ಮರ್ ದುರಸ್ತಿ ಆಗಬೇಕಿವೆ ಎಂದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ʼಟ್ರಾನ್ಸ್ಫಾರ್ಮರ್ ಕೆಟ್ಟು ಇಷ್ಟು ದಿವಸಗಳಾಗಿವೆ. ಇನ್ನೂ ದುರಸ್ತಿ ಆಗಲಿಲ್ಲ ಅಂದರೆ ಹೇಗೆ? ಮನೆಯಲ್ಲಿ ಕೂತರೇ ಟ್ರಾನ್ಸ್ ಫಾರ್ಮರ್ ರಿಪೇರಿ ಆಗುತ್ತಾ ಫಾಲೋಪ್ ಮಾಡಿ ಕೆಲಸ ಮಾಡಿ ಜನರಿಗೆ ಉತ್ತಮ ಸೇವೆ ಒದಗಿಸಬೇಕುʼ ಎಂದರು.
ʼಜಿಲ್ಲೆಯ ವಿವಿಧೆಡೆ ಅನಧಿಕೃತ ಲೇಔಟ್ ತಲೆಯೆತ್ತುತ್ತಿವೆ. ಸರಕಾರಿ ನಿವೇಶನ, ಫುಟ್ ಪಾತ್ ಒತ್ತುವರಿ ಆಗುತ್ತಿವೆ. ರಸ್ತೆಗಳ ಮಧ್ಯದಲ್ಲಿ ಮಹಾತ್ಮರ ಪುತ್ಥಳಿ ಸ್ಥಾಪನೆ ನೆಪದಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಅಧಿಕಾರಿಗಳು ಇವುಗಳ ಮೇಲೆ ನಿಗಾ ಇಟ್ಟು ಅಂಥದ್ದು ಕಂಡು ಬಂದರೆ ಸಂಬಂಧಿತರ ವಿರುದ್ಧ ದೂರು ದಾಖಲಿಸಿ ಸರಕಾರದ ಆಸ್ತಿಪಾಸ್ತಿ ರಕ್ಷಣೆ ಮಾಡಬೇಕುʼ ಎಂದರು.
ʼಜಿಲ್ಲೆಯಲ್ಲಿ ಹಸಿರೀಕರಣ ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 5 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಹಾಗಾಗಿ ಜಿಲ್ಲೆಯಲ್ಲಿ 183 ಗ್ರಾಮ ಪಂಚಾಯತಿಗಳಿದ್ದು ತಲಾ ಒಂದು ಗ್ರಾಮ ಪಂಚಾಯತಿ ವತಿಯಿಂದ ಕನಿಷ್ಠ ಮೂರು ಸಾವಿರ ಸಸಿಗಳನ್ನು ತಯಾರಿಸಬೇಕು. ನರೇಗಾ ಯೋಜನೆಯ ಸಹಾಯ ಪಡೆದು ಈಗಿನಿಂದಲೇ ಸಸಿಗಳನ್ನು ತಯಾರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಬರುವ ಜೂನ್ನಲ್ಲಿ ಜಿಲ್ಲೆಯಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದುʼ ಎಂದು ತಿಳಿಸಿದರು.
ಬಯಲು ಬಹಿರ್ದೆಸೆ ಜೀವಂತ : ಪಿಡಿಓ ವಿರುದ್ಧ ಕಿಡಿ
ಭಾಲ್ಕಿ ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಆದರೆ, ಇಂದಿಗೂ ಬಯಲು ಬಹಿರ್ದೆಸೆ ಜೀವಂತವಾಗಿವೆ. ಅಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸಚಿವ ಖಂಡ್ರೆ ಕಿಡಿಕಾರಿದರು.
ʼತಾಲೂಕಿನ ಕೋನಮೇಳಕುಂದಾ, ನೀಲಮನಳ್ಳಿ, ಜೋಳದಾಪಕಾ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಇಂದಿಗೂ ಬಯಲು ಬಹಿರ್ದೆಸೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾರ್ಯನಿರ್ವಾಹಕ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೀದರ್ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ಸಂಕಲ್ಪ ನನ್ನದಿದ್ದು ಮುಂಬರುವ ದಿನಗಳಲ್ಲಿ ಬೃಹತ್ ಪ್ರಾಮಾಣದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲ ಅಧಿಕಾರಿಗಳು ಸಾಥ್ ನೀಡಬೇಕುʼ ಎಂದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ಭಾರತದ ಹೃದಯ’ವೇ ಸೆಕ್ಯುಲರಿಸಂ, ಸೋಷಿಯಲಿಸಂ; ಬುದ್ಧನೇ ಇವುಗಳ ಪ್ರವರ್ತಕ
ಈ ಸಂದರ್ಭದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರೆ, ಯೋಜನಾಧಿಕಾರಿ ಸೂರ್ಯಕಾಂತ ಬಿರಾದಾರ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.





