ಔರಾದ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಸ್ವಚ್ಛ ಭಾರತ ಮಿಷನ್ (ನಗರ) 2.0 ಯೋಜನೆಡಿಯಲ್ಲಿ ಮಂಜೂರಾದ ವೈಯಕ್ತಿಕ, ಸಾರ್ವಜನಿಕ, ಸಮುದಾಯ, ಅಸಪಿರೇಷ್ನಲ್ ಹಾಗೂ ಮೂತ್ರಾಲಯ ನಿರ್ಮಾಣದಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಔರಾದ್ ಪಟ್ಟಣ ಪಂಚಾಯತ್ ಸದಸ್ಯ ಶಿವಾಜಿ ರಾಠೋಡ್ ಆರೋಪಿಸಿದ್ದಾರೆ.
ಈ ಸಂಬಂಧ ಗುರುವಾರ ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ್ ಅವರಿಗೆ ಸಂಬಂಧಪಟ್ಟ ದಾಖಲೆ ಸಮೇತ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಅವರು, ಅದರ ಪ್ರತಿಗಳನ್ನು ಸಿಎಂ, ರಾಜ್ಯಪಾಲ ಪೌರಾಡಳಿತ ನಿರ್ದೇಶನಾಲಯ ಮುಖ್ಯ ನಿರ್ದೇಶಕರಿಗೆ, ಬೀದರ್ ಜಿಲ್ಲಾಧಿಕಾರಿ ಮತ್ತಿತರರಿಗೆ ಸಲ್ಲಿಸಿದ್ದಾರೆ.
ʼಸ್ವಚ್ಛ ಭಾರತ ಮಿಷನ್ (ನಗರ) 2.0 ಯೋಜನೆಯಡಿ 2023ರ ನವೆಂಬರ್ 23ರಂದು ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹1.14 ಕೋಟಿಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಈ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿಗಳನ್ನು ಕರೆಯಲಾಗಿತ್ತು. ಆದರೆ ಫಲಾನುಭವಿಗಳಿಂದ ಅರ್ಜಿ ಪಡೆದು ಶೌಚಾಲಯ ನಿರ್ಮಿಸದೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅವರು ಹಣ ದುರ್ಬಳಕೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದಲ್ಲದೆ ಫಲಾನುಭವಿಗಳಿಗೆ ಅನ್ಯಾಯ ಎಸಗಿದ್ದಾರೆʼ ಎಂದು ದೂರಿದ್ದಾರೆ.
ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ 170 ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅನುದಾನ ನೀಡಬೇಕು. ವಾರದಲ್ಲಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ ಅಮಾನತುಗೊಳಿಸಬೇಕು. ವಿಳಂಬ ಮಾಡಿದರೆ ಅಧಿಕಾರಿ ಹಾಗೂ ಸರ್ಕಾರದ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬೀದರ್ | ₹6.46 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಜಪ್ತಿ
ಈ ಸಂದರ್ಭದಲ್ಲಿ ಭೀಮ ಪವಾರ್, ಸುಧಾಕರ ರಾಠೋಡ್, ಮಾರುತಿ ಜಾಧವ್, ಶಾರುಬಾಯಿ ರಾಜು ರಾಠೋಡ್, ರಾಜು ರಾಠೋಡ್ ಇದ್ದರು.





