ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮಾದರಿ ನೆರೆಹೊರೆ, ಮಾದರಿ ಸಮಾಜ ಎಂಬ ಶಿರ್ಷಿಕೆಯಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಇಂದಿನಿಂದ ನ.30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ ಆಸಿಫೋದ್ದಿನ್ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮಾಜದ ಮುಂದೆ ನೆರೆಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು, ನೆರೆಹೊರೆಯವರ ಮಧ್ಯೆ ಇರುವ ಅಂತರವನ್ನು ನೀಗಿಸಿ ಅವರ ಮಧ್ಯೆ ಸೌಹಾರ್ದತೆ ಸಂಬಂಧ ಬೆಳೆಯುವಂತೆ ಮಾಡುವುದು ಹಾಗೂ ದಾರಿಹೋಕರು, ಸಹೋದ್ಯೋಗಿಗಳು, ಪ್ರಯಾಣಿಕರು, ರಸ್ತೆಯ ನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ ಮಾಡುವುದಾಗಿದೆ’ ಎಂದರು.
‘ನ.30ರವರೆಗೆ ನಡೆಯಲಿರುವ ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿ, ಯುವಕರ ರ್ಯಾಲಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಕಳೆದ 77 ವರ್ಷಗಳಿಂದ ಯಾವುದೇ ಪಕ್ಷದೊಂದಿಗೆ ಸಂಬಂಧ ಇಲ್ಲದೆ ಸಮಾಜ ಸೇವೆ ಮಾಡುತ್ತಿರುವ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಇತ್ತೀಚೆಗೆ ಶಿವರುದ್ರ ಬೇಲಿಮಠ ಸ್ವಾಮಿಜಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ʼಮನುಷ್ಯ ಚಂದ್ರನ ಬಳಿಗೆ ಹೋಗುತಿದ್ದಾನೆ. ಆದರೆ ಪಕ್ಕದ ನೆರೆಹೊರಯವರ ಬಳಿ ಹೋಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೀಗಾಗಿ ನಮ್ಮ ರಾಷ್ಟ್ರ ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತುʼ ಎಂದು ಹೇಳಿದರು.
ʼಸಮಾಜದಲ್ಲಿ ಬದಲಾವಣೆ ತರುವ ಕೆಲಸಕ್ಕೆ ಜಮಾತೆ ಇಸ್ಲಾಮಿ ಹಿಂದ ಕೆಲಸ ಮಾಡುತ್ತಿದೆ. ಇಲ್ಲಿ ಯಾವುದೇ ಒಂದು ಧರ್ಮಕ್ಕೆ ಸಿಮಿತಗೊಂಡಿಲ್ಲ. ಸಮಾಜದಲ್ಲಿ ಅನೇಕ ಶಕ್ತಿಗಳು ಒಡೆಯುವ ಕೆಲಸ ಮಾಡುತ್ತಿವೆ. ಹೀಗಾಗಿ ಯುವಕರು, ಮಹಿಳೆಯರು, ಮಕ್ಕಳಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆʼ ಎಂದು ಆಸಿಫೋದ್ದಿನ್ ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ ಬೀದರಿನ ಸದಸ್ಯ ಮುಹಮ್ಮದ ನಿಝಾಮೋದ್ದಿನ್ ಮಾತನಾಡಿ, ʼರಾಷ್ಟ್ರ ಮಟ್ಟದಲ್ಲಿ ಈ ಅಭಿಯಾನ ಹಮ್ಮಿಕೊಂಡಿದ್ದು ಸದ್ಯ ಹೆಸರಿಗೆ ಮಾತ್ರ ನೆರೆ ಹೊರೆಯವರು ಎಂದು ಹೇಳಲಾಗುತ್ತಿದೆ. ಆದರೆ ಅವರ ಸುಖ-ದುಃಖ, ಮಾನ ಮರ್ಯಾದೆ ಬಗ್ಗೆ ಕೇಳುವವರಿಲ್ಲ. ನೆರೆ ಹೊರೆಯವರು ಸುಖ-ದುಃಖದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಜಾಗೃತಿ ಮೂಡಿಸುವ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆʼ ಎಂದರು.
ನ. 21 ಹಾಗೂ 28 ರಂದು ಶುಕ್ರವಾರದ ಕಾರಣ ಎಲ್ಲ ಮಸಿದಿಗಳಲ್ಲಿ ಈ ಅಭಿಯಾನ ಕುರಿತು ಪ್ರವಚನಗಳು ನಡೆಯಲಿವೆ. ನಾಳೆ (ನ.22 ರಂದು) ಸಂಜೆ ನಗರದ ಜಾಮಿಯಾ ಮಸಿದಿಯಲ್ಲಿ ಸಂಜೆ 6.30ಕ್ಕೆ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಅಮಿವುಲ್ ಹಸನ್ ಭಾಷಣ ಮಾಡುವರು. ನ.23ರಂದು ಬೆಳಿಗ್ಗೆ ಸಿಐಓ ವತಿಯಿಂದ ರ್ಯಾಲಿ ನಡೆದು ಡಿಸೆಂಟ್ ಫಂಕ್ಷನ್ ಹಾಲನಲ್ಲಿ ಕಾರ್ಯಕ್ರಮ ನಡೆಯಲಿದೆ.
ಅಂದು ರಾತ್ರಿ 8.30ಕ್ಕೆ ಇದಾರಾ ಅದಬ್ ಎ ಇಸ್ಲಾಮಿ ವತಿಯಿಂದ ಮುಷಾಯಿರಾ, ಜಿ.ಐ.ಓ. ಮತ್ತು ಸಿ.ಐ.ಓ. ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಡ್ರಾಯಿಂಗ್, ಗ್ರೇಟಿಂಗ್ ರ್ಡ, ಬೀದಿ ನಾಟಕ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳು ಜರುಗಲಿದ್ದು ನ.29ರಂದು ಯುವಕರ ಕಾರ್ಯಕ್ರಮ ಆಟದ ಮೈದಾನ ಮತ್ತು ಜಿಮ್ನಲ್ಲಿ ಜರುಗಲಿವೆ. ನ.30ರಂದು 12 ಝೋನಗಳಲ್ಲಿ ದೇಶ ಬಾಂಧವರಿಗೆ ಕಾರ್ಯಕ್ರಮಗಳಿದ್ದು ಆಸ್ರಾ ಪಬ್ಲಿಕ್ ಸ್ಕೂಲ್, ಅಲ್ ಅಮೀನ ಕಾಲೇಜ್, ವಿಜ್ಡಮ್ ಕಾಲೇಜ, ಡಿವೈನ್ ಕಾಲೇಜುಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆʼ ಎಂದು ನಿಝಾಮುದ್ದಿನ್ ವಿವರಿಸಿದರು.
ಜಮಾಅತೆ ಇಸ್ಲಾಮಿ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ತೌಹೀದ್ ಸಿಂಧೆ ಮಾತನಾಡಿ, ʼಬೀದರ್ ನಗರದ ಪಕ್ಕದ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ಡಿಸೆಂಬರ್ 7ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಕುರಾನ್ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಪಮಾ ಮ್ಯಾಜ್ನಿ ಸಂಪಾದಕಿ ಸಬೀಹಾ ಫಾತೀಮಾ, ತಸ್ಲಿಮಾ ಖಾನಂ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೇನ್ಜಿ ಸೇರಿದಂತೆ ಇನ್ನಿತರು ಪಾಲ್ಗೊಳ್ಳುವರುʼ ಎಂದರು.
ಇದನ್ನೂ ಓದಿ : ಬೀದರ್ | ರೈತರ ಹೋರಾಟಕ್ಕೆ ಜಯ : ಟನ್ ಕಬ್ಬಿಗೆ ₹2,950 ಬೆಲೆ ನಿಗದಿ : 8 ದಿನಗಳ ಧರಣಿ ಅಂತ್ಯ
ಮಹಿಳಾ ವಿಭಾಗದ ಸಂಚಾಲಕಿ ಅಸ್ಮಾ ಸುಲ್ತಾನ ಮಾತನಾಡಿ, ʼಅಭಿಯಾನದಡಿ ಮನೆ-ಮನೆಗೆ ಭೇಟಿ, ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಣೆ, ಸ್ಲಂ ಏರಿಯಾಗಳಲ್ಲಿ ವಾಸಿಸುವ ಜನರನ್ನು ಭೇಟಿ ಮಾಡುವುದಲ್ಲದೆ ನೆರೆ ಹೊರೆಯವರೊಂದಿಗೆ ಸೇರಿ ಗಿಡ ನೇಡುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆʼ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ನ ಸ್ಥಳೀಯ ಉಪಾಧ್ಯಕ್ಷ ಮಹಮ್ಮದ್ ಆರಿಫೋದ್ದಿನ್ ಹಾಗೂ ಇತರರು ಇದ್ದರು.





