ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಿಂದಿನ ಅನೇಕ ಸಭೆಗಳಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದ ಕಾರಣ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ನೀವು ಸುಧಾರಿಸಬೇಕು. ನಂತರ ಎಲ್ಲ ಅಧಿಕಾರಿಗಳು ತಾನಾಗಿಯೇ ಸುಧಾರಿಸುತ್ತಾರೆ. ನೀವು ಸರಿಯಾಗಿ ಎಚ್ಚರಿಕೆ ನೀಡದ ಕಾರಣ ಕೆಲವು ಅಧಿಕಾರಿಗಳು ಕೆಡಿಪಿ ಸಭೆಗೆ ಗೌರವ ಕೊಡುತ್ತಿಲ್ಲ. ಹೀಗೆಯೇ ಮುಂದುವರೆದಲ್ಲಿ ತಮ್ಮ ವಿರುದ್ಧವೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಸಿದರು.
ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಬಿ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜುಲೈ 15 ರಂದು ಮುಂಜಾನೆ 10.30ಕ್ಕೆ ನಿಗದಿಯಾಗಿದ್ದ ಕೆಡಿಪಿ ಸಭೆಗೆ ಹಲವು ಅಧಿಕಾರಿಗಳು ಗೈರಾಗಿದ್ದ ಕಾರಣ ಸಭೆ ಮುಂದೂಡಿದ್ದು, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಗದಿತ ವೇಳೆಗೆ ಸಭೆಗೆ ಆಗಮಿಸಿದ ಶಾಸಕರು ಅಧಿಕಾರಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಿಎಂಜಿಎಸ್ವೈ ಸಹಾಯಕ ಕಾರ್ಯನಿರ್ವಾಕ ಅಭಿಯಂತರರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅರಣ್ಯಾಧಿಕಾರಿಗಳು, ಕೈಗಾರಿಕಾ ವಿಸ್ತೀರ್ಣಾಧಿಕಾರಿಗಳು, ನಿರ್ಮಿತಿ ಕೇಂದ್ರ, ಕೆಆರ್ಐಡಿಎಲ್ ಅಧಿಕಾರಿಗಳು, ನಿಗಮ ಮಂಡಳಿಗಳ ಅಧಿಕಾರಿಗಳು, ಅಬಕಾರಿ, ಆಹಾರ ಮತ್ತು ನಾಗರಿಕ ಸರಬರಾಜು, ಉಪ ನೋಂದಣಾಧಿಕಾರಿ, ಭೂಮಾಪನಾ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳು ಗೈರು ಹಾಜರಾಗಿದ್ದರು.
ಉಪ ನೋಂದಣಾಧಿಕಾರಿ, ಕೆಎಸ್ಆರ್ಟಿಸಿ, ಕಂದಾಯ, ಅಬಕಾರಿ, ಎಪಿಎಂಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಟ್ಟಣ ಪಂಚಾಯಿತಿ ಒಳಗೊಂಡು ಬಹುತೇಕ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿರಲಿಲ್ಲ. ಇದರಿಂದ ಶಾಸಕ ಪ್ರಭು ಚವ್ಹಾಣ್ ಕೆಂಡಾಮಂಡಲವಾಗಿದ್ದು, ಸಭೆ ಮುಂದೂಡಲು ನಿರ್ಧರಿಸಿದರು.
ಪ್ರಗತಿ ವರದಿಯನ್ನೇ ಸಲ್ಲಿಸದ ಅಧಿಕಾರಿಗಳು:
“ಕೆಡಿಪಿ ಸಭೆ ನಿಗದಿಪಡಿಸಿದರೂ ಸಾಕಷ್ಟು ಅಧಿಕಾರಿಗಳು ಗೈರು ಹಾಜರಾದರೆ, ಹಲವರು ಪ್ರಗತಿ ವರದಿಯನ್ನೇ ಸಲ್ಲಿಸಿಲ್ಲ. ಹೀಗಾದರೆ ಸಭೆ ಹೇಗೆ ನಡೆಸಬೇಕು?. ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕೆಲಸಗಳು ನಡೆಯುತ್ತಿವೆ. ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಇಲ್ಲವೆಂದರೆ ಯಾರಿಗೆ ಮಾಹಿತಿ ಕೇಳಬೇಕು?. ಬಿತ್ತನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ರೈತರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಲ್ಲ” ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ:
ಶಾಸಕ ಪ್ರಭು.ಬಿ ಚವ್ಹಾಣ ಅವರು ಬೀದರ್ ಜಿಲ್ಲಾಧಿಕಾರಿ ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, “ಕೆಡಿಪಿ ಸಭೆಯಲ್ಲಿ ಗೈರು ಹಾಜರಾಗಿರುವ ಮತ್ತು ಪ್ರಗತಿ ವರದಿ ಸಲ್ಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನೇಮಕಾತಿಗಳಲ್ಲಿ ತಾರತಮ್ಯ; ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
“ಪ್ರತಿ ಕೆಡಿಪಿ ಸಭೆಯಲ್ಲಿ ಅನೇಕ ಅಧಿಕಾರಿಗಳು ಗೈರಾಗಿದ್ದರು. ಇನ್ನು ಸಭೆಯಲ್ಲಿ ಹಾಜರಾದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದಕ್ಕೆ ಈ ಮುಂದೂಡಿದ ಸಭೆಯೇ ತಾಜಾ ಉದಾಹರಣೆ ಎನ್ನಬಹುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ರೀತಿ ಪುನರಾವರ್ತನೆ ಆಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದರೂ ಶಾಸಕರು, ಮೇಲಾಧಿಕಾರಿಗಳು ಗೈರಾದ ಅಧಿಕಾರಿಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.




