ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಿ.6ರಂದು ಶನಿವಾರ ಬೆಳಿಗ್ಗೆ 9ಕ್ಕೆ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನ ಪ್ರಯುಕ್ತ ಬುದ್ಧ ಭಾರತ ನಿರ್ಮಾಣ ಹಾಗೂ ಸಂಕಲ್ಪ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ದಲಿತ ಮುಖಂಡರಾದ ಅನಿಲಕುಮಾರ್ ಬೆಲ್ದಾರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼಅಂದು ಬೆಳಿಗ್ಗೆ 9 ಗಂಟೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಗೌರವ ನಮನ, ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಭೀಮಗೀತೆ ಗಾಯನ, ನಂತರ ಸಂಜೆ 5 ಗಂಟೆಗೆ ಬಹಿರಂಗ ಸಭೆ ಜರುಗಲಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಣದೂರ ವೈಶಾಲಿನಗರದ ಭಂತೆ ಜ್ಞಾನಸಾಗರ ಥೇರೊ, ಜಿಲ್ಲಾ ಉಸ್ತುವಾರಿ ಸಚಿರ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪುರ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಡಾ.ಗಿರೀಶ ಬದೋಲೆ ಹಾಗೂ ಎಸ್ಪಿ ಪ್ರದೀಪ ಗುಂಟಿ ಉಪಸ್ಥಿತರಿರುವರು.
ʼಕಲಬುರಗಿಯ ಪ್ರಗತಿಪರ ಚಿಂತಕಿ ಕೆ.ನೀಲಾ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಬೌದ್ಧ ಉಪಾಸಕ, ಉಪಾಸಕಿಯರು, ಸಮಾಜದ ಚಿಂತಕರು, ಅಂಬೇಡ್ಕರ್ ಅನುಯಾಯಿಗಳು, ದಲಿತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆʼ ಎಂದು ವಿವರಿಸಿದರು.
ʼ69ನೇ ಪರಿನಿಬ್ಬಾಣ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ʼಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಜನ ಸಮುದಾಯಗಳ ವಿಮೋಚನೆಗಾಗಿ, ತಮ್ಮ ಬದುಕಿನ ಕೊನೆ ಕ್ಷಣದವರೆಗೂ ಹೋರಾಡಿ, ತಮ್ಮ ಜೀವನವನ್ನೇ ಸಮರ್ಪಿಸಿದರು. ಅಸ್ಪ್ರಶ್ಯತೆ, ಅಪಮಾನ, ಕೀಳರಿಮೆ, ಜಾತಿ ಪದ್ಧತಿ, ಲಿಂಗಬೇಧ, ಧಾರ್ಮಿಕ ಮೌಢ್ಯ, ಭ್ರಷ್ಟಚಾರ, ಅಸಮಾನತೆಯಿಂದ ನೊಂದು ಬೆಂದ ಬಂಧುಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬುದ್ಧ ಭಾರತ ನಿರ್ಮಾಣ ಮಾಡುವುದಕ್ಕಾಗಿ 14ನೇ ಅಕ್ಟೋಬರ್ 1956ರಂದು ನಾಗಪುರದಲ್ಲಿ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದರುʼ ಎಂದರು.
ʼಡಾ.ಅಂಂಬೇಡ್ಕರ್ ಅವರು ಕಂಡ ಸಮಾನತೆಯ ಕನಸನ್ನು ನನಸು ಮಾಡಲು ನಾವೆಲ್ಲರೂ ಸೇರಿ ಸಂಕಲ್ಪ ಮಾಡೋಣ. ಈ ಕಾರ್ಯಕ್ರಮದಲ್ಲಿ ಪೂಜ್ಯ ಭಿಕ್ಕು ಸಂಘದವರು, ಸಚಿವರು, ಶಾಸಕರು ಹಾಗೂ ಎಲ್ಲಾ ಹಂತದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿಚಾರವಾದಿಗಳು ಭಾಗವಹಿಸಲಿದ್ದಾರೆ. ಅಂಬೇಡ್ಕರವರ ಅನುಯಾಯಿಗಳು, ದಲಿತ, ಶೋಷಿತ, ಹಿಂದುಳಿದ ವರ್ಗದವರು, ಧಾರ್ಮಿಕ ಅಲ್ಪಸಂಖ್ಯಾತರು, ಜನಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕುʼ ಎಂದು ಕೋರಿದರು.
ಇದನ್ನೂ ಓದಿ : ಬೀದರ್ | 2026ರ ಜನವರಿ ಒಳಗೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆಗೊಳಿಸಿ : ಲಕ್ಷ್ಮಣ ದಸ್ತಿ
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ ಗೋರನಾಳಕರ್ ಹಾಗೂ ಪದಾಧಿಕಾರಿಗಳಾದ ಬಾಬುರಾವ ಪಾಸ್ವಾನ್, ಡಾ.ಕಾಶಿನಾಥ ಚಲವಾ, ಶ್ರೀಪತರಾವ ದೀನೆ, ರಮೇಶ ಮಂದಕನಳ್ಳಿ, ಶಿವಕುಮಾರ ನೀಲಿಕಟ್ಟಿ, ಪ್ರಕಾಶ ಮಾಳಗೆ, ಸಂದೀಪ ಕಾಂಟೆ, ಪ್ರದೀಪ ನಾಟೇಕರ್ ಮತ್ತಿತರರಿದ್ದರು.





