ಬೆಂಗಳೂರಿನಲ್ಲಿ 2026ರ ಜ.18 ರಂದು ನಡೆಯಲಿರುವ ನಮ್ಮ ಕರ್ನಾಟಕ ಸೇನೆಯ ಮೂರನೇ ವಾರ್ಷಿಕೋತ್ಸವದ ಭಿತ್ತಿ ಪತ್ರವನ್ನು ಬೀದರ್ ನಗರದ ಸೇನೆಯ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
ʼಬೆಂಗಳೂರಿನಲ್ಲಿ ಸೇನೆಯ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಲಿದೆʼ ಎಂದು ಭಿತ್ತಿ ಪತ್ರ ಬಿಡುಗಡೆ ಮಾಡಿದ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ತಿಳಿಸಿದರು.
ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾಯಕಯೋಗಿ ಬಸವಣ್ಣ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ, ನಾಡಪ್ರಭು ಕೆಂಪೇಗೌಡ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶ್ವರಯ್ಯ, ದ.ರಾ.ಬೇಂದ್ರೆ, ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಬಿ.ಆರ್ ರಾಮಣ್ಣ, ವೀರೇಂದ್ರ ಪಾಟೀಲ, ಡಾ.ರಾಜಕುಮಾರ, ಸಿ.ಅಶ್ವಥ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸಚಿವರು, ಮುಖ್ಯಮಂತ್ರಿ, ರಾಜ್ಯದ ಸಚಿವರು, ಸಾಹಿತಿಗಳು, ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಸೇನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಡಾ. ಪಟ್ಟದ್ದೇವರಿಗೆ ಕಾಯಕ ಯೋಗಿ ಬಸವಣ್ಣ ಪ್ರಶಸ್ತಿ :
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರಿಗೆ ನಮ್ಮ ಕರ್ನಾಟಕ ಸೇನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಯಕ ಯೋಗಿ ಬಸವಣ್ಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ ಎಂದು ಎಂದು ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ತಿಳಿಸಿದರು.
ಪದಾಧಿಕಾರಿಗಳ ಆಯ್ಕೆ:
ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ: ಉದಯಕುಮಾರ ಅಷ್ಟೂರೆ, ರಾಜಕುಮಾರ ಜಮಾದಾರ್ (ಉಪಾಧ್ಯಕ್ಷರು), ರಾಕೇಶ್ ಕುರುಬಖೇಖಗಿ (ಸಂಘಟನಾ ಕಾರ್ಯದರ್ಶಿ). ಕಮಲನಗರ ತಾಲ್ಲೂಕು ಘಟಕ: ಸಂತೋಷ್ ಬಿರಾದಾರ (ಅಧ್ಯಕ್ಷ). ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ರಾಜಕುಮಾರ ಪಾಟೀಲ, ಪ್ರದೀಪ್ ಪಾಟೀಲ, ರವಿ ಪಾಟೀಲ, ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕಾರಬಾರಿ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಾಜಿ ದಾಮ, ಬೀದರ್ ನಗರ ಘಟಕದ ಅಧ್ಯಕ್ಷ ಸಂತೋಷ್ ಪಾಟೀಲ ಮತ್ತಿತರರು ಇದ್ದರು.





