ಪ್ರಸಕ್ತ ವರ್ಷ ಕರ್ನಾಟಕ ರಾಜ್ಯ ಸರ್ಕಾರ ಆದಿಜಾಂಬವ ಅಭಿವೃದ್ದಿ ನಿಗಮಕ್ಕೆ ₹100 ಕೋಟಿ ಅನುದಾನ ನೀಡಬೇಕು. ಯಾವುದೇ ಕಾರಣಕ್ಕೂ ನಿಗಮದ ಅನುದಾನ ಹಿಂಪಡೆಯಬಾರದು ಎಂದು ಆಗ್ರಹಿಸಿ ಜಿಲ್ಲಾ ಮಾದಿಗ ದಂಡೋರ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಪ್ರೇಮಸಾಗರ ದಾಂಡೇಕರ್ ಅವರಿಗೆ ಸಲ್ಲಿಸಿದರು.
ʼರಾಜ್ಯ ಸರ್ಕಾರವು ಆದಿ ಜಾಂಭವ ಅಭಿವೃದ್ದಿ ನಿಗಮ ಹಿಂದೆ ನೀಡಿದ ಅನುದಾನವನ್ನು ಹಿಂಪಡೆದಿದ್ದು ಖಂಡಿನೀಯ. ಮಾದಿಗ ಮತ್ತು ಉಪಜಾತಿಗಳು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ 2018ರಲ್ಲಿ ಸ್ಥಾಪನೆಯಾದ ಆದಿಜಾಂಬವ ಅಭಿವೃದ್ದಿ ನಿಗಮಕ್ಕೆ ಸರಕಾರ ಅನುದಾನವನ್ನು ಪ್ರತಿ ವರ್ಷ ನೀಡುತ್ತದೆ. ಆದರೆ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ. ಇದು ಮಾದಿಗ ಮತ್ತು ಇತರ ಉಪಜಾತಿಗಳನ್ನು ಆರ್ಥಿಕವಾಗಿ ತುಳಿಯುವ ಹುನ್ನಾರ ಇದೆʼ ಎಂದು ಮುಖಂಡರು ದೂರಿದರು.
ʼಬೀದರ, ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2024-25 ಹಾಗೂ 2025-26ನೇ ಸಾಲಿನ ಆದಿ ಜಾಂಬವ ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಆ ಕ್ಷೇತ್ರಗಳ ಶಾಸಕರು ಇನ್ನೂ ಪೂರ್ಣಗೊಳಿಸಿಲ್ಲ, ಇನ್ನು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು ನಿಗಮದ ಸೌಲಭ್ಯಗಳ ಒಂದು ವರ್ಷದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಬಾಕಿ ಇದೆ. ಇದು ಖಂಡನಿಯ. ಆಯಾ ಕ್ಷೇತ್ರದ ಶಾಸಕರೇ ನಿಗಮದ ವಿವಿಧ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಿಯಮ ಕೈಬಿಟ್ಟು ನೇರವಾಗಿ ಸರ್ಕಾರವೇ ಮಾಡಬೇಕುʼ ಎಂದು ಒತ್ತಾಯಿಸಿದರು.
ಕೂಡಲೇ ಭಾಲ್ಕಿ ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ ಕ್ಷೇತ್ರದ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ನಿಗಮದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಶಾಸಕರಿಗೆ ನೀಡಿದ ಪ್ರತಿ ಯೋಜನೆಗಳಲ್ಲಿ ಓರ್ವ ಶಾಸಕರಿಗೆ 50 ಗುರಿ ನೀಡಬೇಕು. ಈ ಹಿಂದೆ ಇದ್ದ ಸರ್ಕಾರದ ಐರಾವತ ಮತ್ತು ಸಮೃದ್ದಿ ಯೋಜನೆಗಳನ್ನು ಪುನಾರಂಭಿಸಬೇಕು. ನಿಗಮಕ್ಕೆ ನೀಡುವ ಅನುದಾನವನ್ನು ಯಾವುದೆ ಕಾರಣಕ್ಕೂ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಬಾರದು. ಬೀದರನ ಆದಿ ಜಾಂಬವ ಅಭಿವೃದ್ದಿ ನಿಗಮ ಕಚೇರಿಯಲ್ಲಿ ಖಾಲಿಯಿರುವ ಸಿಬ್ಬಂದಿಗಳನ್ನು ಭರ್ತಿ ಮಾಡಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಜೀವಂತ ತಂದೆಗೆ ಶ್ರದ್ಧಾಂಜಲಿ ಏರ್ಪಡಿಸಿದ್ದ ಪುತ್ರ; ಸುದ್ದಿ ತಿಳಿದು ಗ್ರಾಮಕ್ಕೆ ಓಡಿಬಂದ ತಂದೆ
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ ಹಾಗೂ ಪ್ರಮುಖರಾದ ರವಿ ನಿಜಾಂಪುರೆ ಕಮಲಾಕರ ಎಲ್.ಹೆಗಡೆ, ಬಸವರಾಜ ಮಾಳಗೆ, ಹರೀಶ್ ಗಾಯಕವಾಡ, ವಿಶಾಲ ಜೋಶಿ, ಸ್ವಾಮಿದಾಸ ಮೇಘಾ, ದತ್ತಾತ್ರೇಯ ಜ್ಯೋತಿ, ಜೈಶೀಲ ಕಲವಾಡೆ, ಡೇವಿಡ್ ವಾಡೇಕರ, ಜೈಶೀಲ ಮೇತ್ರೆ, ವಿರಾ ಶೆಟ್ಟಿ, ರವಿ ಸೂರ್ಯವಂಶಿ, ಸ್ವಾಮಿದಾಸ ಚಂಡಿಕೆ, ಜಗನಾಥ ಕೌಠಾ, ಜಾನಸನ್ ಧೂಪತಮಹಾಗಾವ, ದಯಾನಂದ ರೆಕುಳಗಿ, ಅಶೋಕ ಚಾಂಗಲೆರಾ, ರಾಜು ಮುಸ್ತರಿ, ಸಿದ್ರಾಮ ಟೈಲರ್, ವಿನೋದ ಮಂಗಲಗಿ, ಸೋಮಶೇಖರ, ರೀತಿಕ ಕೋಟೆ, ನೀಲಕಂಠ, ಅಮೋಶ ಸೇರಿದಂತೆ ಅನೇಕರಿದ್ದರು.





