ಬೀದರ್: ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ರಸ್ತೆ, ಚರಂಡಿ, ಸೇತುವೆ ಮತ್ತು ಮನೆಗಳನ್ನು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪರಿಶೀಲಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಬೀದರ್ ತಾಲೂಕಿನ ತಡಪಳ್ಳಿ ಗ್ರಾಮದ ಸಮಸ್ಯೆಗಳನ್ನು ಆಲಿಸಿ, ಸಿಂದೋಲ ಭಂಗುರ ರಸ್ತೆ ನಡುವೆ ಇರುವ ಸೇತುವೆ, ಸಮಸ್ಯೆ ವೀಕ್ಷಿಸಿ ಮಾತನಾಡಿದ ಅವರು, “ಹಿಂದೆ ಏನಾಗಿದೆ ಎನ್ನುವುದು ಬೇಡ. ಈಗ ಸಮಸ್ಯೆ ಪರಿಶೀಲನೆ ಮಾಡಿದ್ದೇವೆ. ಕೂಡಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದು ಜನರಲ್ಲಿ ಮನವರಿಕೆ ಮಾಡಿದರು.
ಸೇತುವೆ ಬಳಿ ಸಾರ್ವಜನಿಕರು ಅಳಲು ತೋಡಿಕೊಂಡಿದ್ದು, “ರಾತ್ರಿ ಎರಡು ಗಂಟೆವರೆಗೂ ಕಷ್ಟ ಅನುಭವಿಸಿದ್ದೇವೆ” ಎಂದಾಗ ನೋವು ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದರು.
“ವಿಪರೀತ ಮಳೆಯಿಂದಾಗಿ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ಸಾಕಷ್ಟು ನಷ್ಟ ಸಂಭವಿಸಿದೆ. ಮಳೆಯಿಂದ ಹಾನಿಗೀಡಾಗಿರುವ ವಸ್ತುಗಳು ಹಾಗೂ ರಸ್ತೆ, ಸೇತುವೆ ಚರಂಡಿ ಇತರೆ ಮಾಹಿತಿಗಳನ್ನು ಕಲೆಹಾಕಿ, ನಷ್ಟದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು” ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಔರಾದ: ಶಾಸಕ ಪ್ರಭು ಚವ್ಹಾಣರಿಂದ ಮಳೆ ಹಾನಿ ಪರಿಶೀಲನೆ
ಶಾಸಕ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಹಾಗೂ ಕಮಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಚರಿಸಿ ಮಳೆಯಿಂದಾಗಿರುವ ಹಾನಿ ವೀಕ್ಷಿಸಿದರು.

ತಾಲೂಕು ಮಟ್ಟದ ಹಲವು ಅಧಿಕಾರಿಗಳ ತಂಡದೊಂದಿಗೆ ದಾಬಕಾ(ಸಿ), ಭಂಡಾರಕುಮಟಾ, ಚಿಮ್ಮೇಗಾಂವ, ಮದನೂರ, ಕಮಲನಗರ, ಹೊಳಸಮುದ್ರ, ಮುಧೋಳ(ಬಿ), ಹೆಡಗಾಪೂರ, ಸಂತಪೂರ, ಶೆಂಬೆಳ್ಳಿ, ವಡಗಾಂವ, ಚಿಂತಾಕಿ, ಯನಗುಂದಾ, ಕೊಳ್ಳೂರ, ಬೋರಾಳ, ಔರಾದ(ಬಾ) ಸೇರಿದಂತೆ ಹಲವೆಡೆ ಸಂಚರಿಸಿ ಮನೆ ಹಾನಿ ಮತ್ತು ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು.
ಭಂಡಾರ ಕುಮಟಾ, ಹೆಡಗಾಪೂರ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಮಳೆಯಿಂದಾಗಿ ಶಿಥಿಲಗೊಂಡ ಮನೆಗಳಿಗೆ ಭೇಟಿ ನೀಡಿದರು. “ತೀವ್ರ ಮಳೆಯಿಂದ ಕ್ಷೇತ್ರದ ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು” ಎಂದು ತಿಳಿಸಿದರು.
“ಬೆಳೆ ಹಾನಿಯ ಕುರಿತು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಅಗತ್ಯ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು” ಎಂದು ಭರವಸೆ ನೀಡಿದರು.
“ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದಾಗ, “ನಿರಂತರ ಸುರಿದ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿವೆ. ಇನ್ನೂ ಕೆಲವೆಡೆ ತಂತಿಗಳು ಕಡಿತಗೊಂಡಿವೆ. ಅವುಗಳನ್ನು ಕೂಡಲೇ ಸರಿಪಡಿಸಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು” ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಮದನೂರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಗ್ರಾಮದ ಪ್ರಮುಖ ರಸ್ತೆ ಕೆಸರಿನಿಂದ ಆವರಿಸಿ ಸಾರ್ವಜನಿಕರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ಮುಖಂಡರು ಶಾಸಕರಿಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸಂಬಂಧಿಸಿದ ಗುತ್ತಿಗೆದಾರರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಹಾಗೆಯೇ ಅಧಿಕಾರಿಗಳು ಕೂಡ ಮುತುವರ್ಜಿಯಿಂದ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಭಾರೀ ಮಳೆಯಿಂದ ರಸ್ತೆ, ಬೆಳೆ ಜಲಾವೃತ; ಜನಜೀವನ ಅಸ್ತವ್ಯಸ್ತ
ಈ ಸಂದರ್ಭದಲ್ಲಿ ತಹಶೀಲ್ದಾರರುಗಳಾದ ಮಲ್ಲಿಕಾರ್ಜುನ, ನಾಗರಾಜ ನಾಯಕ್, ಕಮಲನಗರ ತಾಲೂಕು ಪಂಚಾಯತ್ ಇಒ ಶಿವಕುಮಾರ ಘಾಟೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ, ಲೋಕೋಪಯೋಗಿ ಇಲಾಖೆಯ ವೀರಶೆಟ್ಟಿ ರಾಠೋಡ್, ಜೆಸ್ಕಾಂನ ರವಿ ಕಾರಬಾರಿ, ಮುಖಂಡರುಗಳಾದ ವಸಂತ ಬಿರಾದಾರ, ಸೂರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ ರಾಠೋಡ್, ಯೋಗೇಶ ಪಾಟೀಲ, ಪ್ರವೀಣ ಕಾರಬಾರಿ, ಕೇರಬಾ ಪವಾರ, ಅಮೃತರಾವ ವಟಗೆ, ಧನರಾಜ ಗುಡ್ಡಾ, ಅಶೋಕ ಮೇತ್ರೆ, ಧೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ ಸೇರಿದಂತೆ ಇತರರು ಇದ್ದರು.




