ಸಹೋದರತ್ವದ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಕಾರ್ಮಿಕರು ತಾವು ಕೈಗೊಂಡ ಕಾಮಗಾರಿ ಸ್ಥಳದಲ್ಲಿಯೇ ವಿಶೇಷವಾಗಿ ಆಚರಿಸಿದರು.
ಬೀದರ್ ಜಿಲ್ಲಾ ಪಂಚಾಯತ್, ಭಾಲ್ಕಿ ತಾಲೂಕು ಪಂಚಾಯತ್, ಗ್ರಾಮ ಸ್ವರಾಜ್ಯ ಅಭಿಯಾನ ಮತ್ತು ಸಂಯೋಗ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮ ಪಂಚಾಯತ್ ಹಾಗೂ ಬ್ಯಾಲಹಳ್ಳಿ(ಕೆ) ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲಹಳ್ಳಿ ಗ್ರಾಮಗಳಲ್ಲಿ ಸಾಮಾಜಿಕ ಅರಣ್ಯ ವಲಯ ಪ್ರದೇಶದಲ್ಲಿ ನಡೆಯುತ್ತಿರುವ ಮನರೇಗಾ ಕಾಮಗಾರಿ ಸ್ಥಳದಲ್ಲಿ ಪರಸ್ಪರ ಮಹಿಳೆಯರು ಪುರುಷರಿಗೆ ರಾಖಿ ಕಟ್ಟುವುದರ ಮೂಲಕ ಸಹೋದರತ್ವ ಭಾವ ಸಾರಿದರು.
ಮಹಿಳೆಯರ ಘನತೆ ಎತ್ತಿ ಹಿಡಿಯುವ, ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪ ಮಾಡುವುದು ರಕ್ಷಾಬಂಧನ ಉದ್ದೇಶ. ಅಷ್ಟೇ ಅಲ್ಲದೆ, ಆರೋಗ್ಯ, ಆಯಸ್ಸಿಗಾಗಿ ಸಹೋದರಿ ಬಯಸಿದರೆ, ಸಹೋದರಿಯನ್ನು ಸದಾ ಕಾಲ ರಕ್ಷಿಸುವ, ನೋವು-ನಲಿವುಗಳಲ್ಲಿ ಭಾಗಿಯಾಗುವ ಭರವಸೆ ಸಹೋದರ ನೀಡುತ್ತಾನೆ. ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಇಂತಹ ವಿಶಿಷ್ಟ ಹಬ್ಬಕ್ಕೆ ಹೊಸ ಸೊಬಗು ತಂದುಕೊಟ್ಟರು.
ಮನರೇಗಾ ಯೋಜನೆಯಡಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಇದೆ. ಕಾಮಗಾರಿ ಸ್ಥಳದಲ್ಲಿ ಪರಸ್ಪರ ಸೌಹಾರ್ದತೆಯಿಂದ, ಒಬ್ಬರಿಗೊಬ್ಬರು ಆಸರೆಯಾಗಿ ದುಡಿದು ಬದುಕು ನಿರ್ವಹಿಸುವ ಕಾರ್ಮಿಕರು ಜಾತಿ-ಧರ್ಮದ ಗೋಡೆ ಮುರಿದು ಸಹೋದತ್ವ ಬಾಂಧವ್ಯಕ್ಕೆ ಸಾಕ್ಷಿಯಾದರು.

ಮಹಿಳೆಯರು ರಾಖಿ ಕಟ್ಟುವಾಗ ಪುರುಷರ ಹಣೆಗೆ ತಿಲಕವಿಟ್ಟು, ನೂಲೆಳೆಯ ರಾಖಿ ಕಟ್ಟಿ, ಸಿಹಿ ತಿನಿಸಿ, ಆರತಿ ಮಾಡಿದಾಗ ಏನೋ ಸಂಭ್ರಮ ಮೂಡುತ್ತದೆ. ನಾವು ಅವರಿಗೆ ರಕ್ಷಣೆ ಕೊಡುತ್ತೇವೆ ಎನ್ನುವುದಕ್ಕಿಂತ ಹೆಣ್ಣು ಮಕ್ಕಳ ಆಶೀರ್ವಾದವೇ ನಮ್ಮನ್ನು ಕಾಯುತ್ತದೆ ಎಂಬುದು ಪುರುಷರಲ್ಲಿ ಭಾವ ಮೂಡಿತು.
ಗ್ರಾಮದಿಂದ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ನರೇಗಾ ಕಾಮಗಾರಿಯಲ್ಲಿ ಮಹಿಳೆಯರು ಕೆಲಸ ಮಾಡುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಪುರುಷರು ಕೆಲಸದಲ್ಲಿ ನೆರವಾಗುವುದು ಮಾತ್ರವಲ್ಲದೇ, ಅವರನ್ನು ಸುರಕ್ಷಿತವಾಗಿ ಮನೆ ಸೇರುವವರೆಗೂ ವಿಶೇಷ ಕಾಳಜಿ ವಹಿಸುತ್ತಾರೆ. ಕೂಡು ಕುಟುಂಬದಂತೆ ಜೊತೆಯಾಗಿರುತ್ತಾರೆ. ಹೀಗಾಗಿ ಇಂತಹ ವಿಶಿಷ್ಟ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧೆಡೆ ಕಾಮಗಾರಿ ಸ್ಥಳಗಳಲ್ಲಿ ಭಾಲ್ಕಿ ತಾಲೂಕು ಪಂಚಾಯತಿ ವತಿಯಿಂದ ರಕ್ಷಾ ಬಂಧನ ಹಬ್ಬ ಆಚರಿಸಲಾಗಿದೆʼ ಎಂದು ಸಂಯೋಗ ಸಂಸ್ಥೆಯ ತರಬೇತಿದಾರ ನೀಲಕಂಠ ಮಾಳಚಾಪುರ ಹೇಳಿದರು.
ಇದನ್ನೂ ಓದಿ : ಬೀದರ್ | ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಹುದ್ದೆ ಖಾಲಿ : ಸಚಿವರಿಗೆ ಮನವಿ ಸಲ್ಲಿಸಿದ ನಿಯೋಗ
ಕಾರ್ಯಕ್ರಮದಲ್ಲಿ ರೇಣುಕಾ, ಪುಷ್ಪವತಿ, ಗುಂಡಮ್ಮ, ಚಿನ್ನಮ್ಮ, ಶರಣಪ್ಪ, ಇಂದುಮತಿ ಸೇರಿದಂತೆ 30ಕ್ಕೂ ಅಧಿಕ ಮಹಿಳೆಯರು. 20 ಪುರುಷರು ಸೇರಿದಂತೆ ಕಾಯಕ ಬಂಧುಗಳಾದ ಜೀವನ್, ಕವಿತಾ ಹಾಗೂ ಮಾಲಾಶ್ರೀ ಆರ್ ಉಪಸ್ಥಿತರಿದ್ದರು.





