ಕೀರ್ತನೆಗಳ ಮೂಲಕ ವಿಶ್ವಪ್ರೇಮ ಸಾರಿದ ಕನಕದಾಸರು ಸಮಾಜದಲ್ಲಿ ಬೇರೂರಿದ ಮೌಢ್ಯಕ್ಕೆ ಕೊಳ್ಳಿ ಇಟ್ಟ ವೈಚಾರಿಕ ಸಂತ ಎಂದು ಸಾಹಿತಿ, ಕಥೆಗಾರ್ತಿ ಪಾರ್ವತಿ ಸೋನಾರೆ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ ಕಛೇರಿಯಲ್ಲಿ ಶನಿವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ ಕನಕ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ʼಕನಕದಾಸರ ಕೀರ್ತನೆಗಳಲ್ಲಿ ಮಾನವೀಯತೆ, ಸರ್ವಧರ್ಮ ಸಮಾನತೆಯ ವಿಚಾರಗಳಿವೆʼ ಎಂದರು.
ʼಕನಕದಾಸರು ಕನ್ನಡ ನಾಡು ಕಂಡ ಶ್ರೇಷ್ಠ ಚಿಂತಕ ಎಂದ ಅವರು, ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆಯ ವಿರುದ್ಧ ಬಂಡಾಯವೆದ್ಧ ಕನಕದಾಸ ಅನಿಷ್ಠ ಪದ್ದತಿ, ಆಚರಣೆಗಳಿಂದ ಕೂಡಿದ ಭಕ್ತಿ ಮನುಕುಲಕ್ಕೆ ಮಾರಕ ಎಂಬುದನ್ನು ಎಚ್ಚರಿಸಿದರು. ಸಾಹಿತ್ಯದ ದೃಷ್ಟಿಯಿಂದ ನೋಡಿದರೂ ಕನಕದಾಸ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಂತೆ ಕಾಣುತ್ತದೆ. ಕೀರ್ತನೆ, ಸುಳಾದಿ, ಉಗಾಭೋಗಗಳು, ಮುಂಡಿಗೆಗಳು, ಕಾವ್ಯ ಕೃತಿಗಳ ಮೂಲಕ ಕನ್ನಡವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದಾರೆʼ ಎಂದರು.
ತಹಸೀಲ್ದಾರ್ ಮಹೇಶ ಪಾಟೀಲ್ ಮಾತನಾಡಿ, ʼಕನ್ನಡ ಸಾಹಿತ್ಯದ ತೂಕ ಹೆಚ್ಚಿಸಿದ ಕನಕದಾಸರು ಬರೆದ ʼರಾಮಧಾನ್ಯ ಚರಿತೆʼ ಕೃತಿ ಮೇಲು-ಕೀಳು ಎಂಬ ಮನಸ್ಥಿತಿಗೆ ಉತ್ತರಿಸಿದಂತಿದೆ. ಶ್ರಮಿಕ ವರ್ಗದವರೇ ದೇವರಿಗೆ ಪ್ರೀಯವಾಗಿರುತ್ತಾರೆ, ಬದುಕಿನಲ್ಲಿ ಗಟ್ಟಿಯಾಗಿರುತ್ತಾರೆʼ ಎಂದರು.
ಕನಕದಾಸ ಜಯಂತಿ ನಿಮಿತ್ತ ಪಟ್ಟಣದ ಬಸ್ ನಿಲ್ದಾಣ ಬಳಿ ಕನಕ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಪಪಂ ಅಧ್ಯಕ್ಷೆ ಸರುಬಾಯಿ ಘುಳೆ ಚಾಲನೆ ನೀಡಿದರು. ಮೆರವಣಿಗೆಯು ಕನಕದಾಸ ವೃತ್ತದಿಂದ ಬಸವೇಶ್ವರ ವೃತ್ತ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ನ್ಯಾಯಾಲಯ ರಸ್ತೆಯಿಂದ ತಹಸೀಲ್ ಆವರಣಕ್ಕೆ ತೆರಳಿತು. ಮೆರವಣಿಗೆಯಲ್ಲಿ ಮಕ್ಕಳು, ಕಳಸ ಹೊತ್ತ ಮಹಿಳೆಯರು, ತಾಲೂಕು ಅಧಿಕಾರಿಗಳು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ಪಪಂ ಮುಖ್ಯಾಧಿಕಾರಿ ಸರುಬಾಯಿ ಘುಳೆ, ಖಜಾನೆ ಅಧಿಕಾರಿ ಮಾಣಿಕ ನೇಳಗಿ, ಬಿಇಒ ರಂಗೇಶ, ಎಡಿ ಶಿವಕುಮಾರ ಘಾಟೆ, ಪಪಂ ಸದಸ್ಯ ಗುಂಡಪ್ಪ ಮುದಾಳೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ರಾಮಣ್ಣ ವಡೆಯರ್, ಡಾ.ವೈಜಿನಾಥ ಬುಟ್ಟೆ ಹಾಗೂ ಪ್ರಮುಖರಾದ ಶಿವಕುಮಾರ್ ಮೇತ್ರೆ, ಶಿವರಾಜ ಅಲಮಾಜೆ, ಶಿವಾಜಿರಾವ ಪಾಮುದಾಳೆ, ಶ್ರಾವಣಕುಮಾರ ಭಂಡೆ, ರಾಜಕುಮಾರ ಮುದಾಳೆ, ಅರ್ಜುನ ಭಂಗೆ, ಸಂತೋಷ ಮುದಾಳೆ, ಕೃಷ್ಣ ಸಾಗಾವೆ, ಬೀರಪ್ಪ ರಕ್ಷಾಳೆ, ಧನರಾಜ ಮಾನೆ ಸೇರಿದಂತೆ ಇನ್ನಿತರರಿದ್ದರು.





