ಆರ್ಎಸ್ಎಸ್ ಕೂಸು ಭಾರತ ದೇಶವನ್ನು ಆಳುತ್ತಿದ್ದು, ಆರ್ಎಸ್ಎಸ್ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಜನರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ʼಸುಪ್ರಿಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆದ ವಕೀಲನನ್ನು ಬಂಧಿಸಿ ಬಿಡುಗಡೆ ಮಾಡುವ ಮೂಲಕ ಈ ದೇಶದಲ್ಲಿ ಉನ್ನತ ಸ್ಥಾನದಲ್ಲಿರುವ ದಲಿತರನ್ನು ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಆರ್ಎಸ್ಎಸ್ ಪೋಷಿತ ಪ್ರಧಾನಿ ಮೋದಿಯವರ ಅಧಿಕಾರದಲ್ಲಿ ನಡೆಯುತ್ತಿದೆ ಅಂದರೆ ಸಾಮಾನ್ಯ ದಲಿತರ ಪಾಡೇನುʼ ಎಂದು ಪ್ರಶ್ನಿಸಿದರು.
ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವರೂ ಆದ, ದಲಿತ ಮುಖಂಡರಾದ ಪ್ರಿಯಾಂಕ್ ಖರ್ಗೆ ಅವರಿಗೆ ಸೋಲಾಪುರ ಮೂಲದ ವ್ಯಕ್ತಿ ದಾನಪ್ಪ ಎಂಬಾತ ಕರೆ ಮಾಡಿ ಅವಾಚ್ಯ ಪದ ಬಳಕೆ ಮಾಡಿ ಬೆದರಿಕೆ ಹಾಕಿದ್ದನ್ನು ಜನರ ಧ್ವನಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆʼ ಎಂದರು.
1940ರಲ್ಲಿ ಗೋಲ್ವಾಕರ್ ಎಂಬ ವ್ಯಕ್ತಿಯು ಒಬ್ಬ ನಾಯಕ, ಒಂದು ಸಿದ್ದಾಂತ, ಒಂದು ಭಾಷೆ ಹಾಗೂ ಒಂದು ಧರ್ಮ ಎಂದು ಹೇಳುವ ಮೂಲಕ ಮತಿಯ ಹಿಂಸೆಗೆ ಪ್ರಚೋದನೆ ನೀಡಿದ್ದರು. ವಿ.ಡಿ.ಸಾವರ್ಕರ್ ವೇದದ ನಂತರ ಎಲ್ಲಕ್ಕಿಂತ ಪೂಜ್ಯನಿಯವಾದದ್ದು ಮನಸ್ಮೃತಿ ಎಂದು ತಮ್ಮ ʼಉಮೆನ್ ಇನ್ ಮನುಸ್ಮೃತಿʼ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆರ್ಎಸ್ಎಸ್ ಒಂದು ನೋಂದಣಿ ಇಲ್ಲದ ಸಂಘಟನೆಯಾಗಿದೆʼ ಎಂದರು.
ʼಆರ್ಎಸ್ಎಸ್ ಸಂಘಟನೆಯು ಎಸ್.ಸಿ, ಎಸ್.ಟಿ, ಓಬಿಸಿ ಸಮುದಾಯದ ಯುವಜನರನ್ನು ಸಂಘಟನೆ ಹೆಸರಲ್ಲಿ ಸೇರಿಸಿಕೊಂಡು ಅವರಿಗೆ ಜಾತಿಯತೆಯ ತರಬೇತಿ ನೀಡುತ್ತಿದ್ದಾರೆ. ಈಚೆಗೆ ಗ್ವಾಲಿಯರ್ ಮೂಲದ ನಿವಾಸಿ ವಕೀಲ ಅನಿಲ ಮಿಶ್ರಾ ಎಂಬುವವರು ಡಾ.ಅಂಬೇಡ್ಕರ್ ಅವರನ್ನು ಬ್ರಿಟಿಷರ ಏಜೆಂಟ್ ಎಂದು ಕರೆಯುವ ಮೂಲಕ ಬಹುತ್ವವಿರುವ ಈ ದೇಶದ ಸಂವಿಧಾನಕ್ಕಿಂತ ಮನುಸ್ಮೃತಿ, ಹಿಂದುತ್ವ ದೊಡ್ಡದು ಎಂಬುದನ್ನು ಸಾಬೀತು ಮಾಡಲು ಹೊರಟು ಬಸವಣ್ಣನವರ ತತ್ವಾದರ್ಶಗಳಿಗೆ ತಿಲಾಂಜಲಿ ಇಡಲು ಆರ್ಎಸ್ಎಸ್ ಕೂಸುಗಳು ಮುಂದಾಗಿರುವುದು ದೊಡ್ಡ ದುರಂತʼ ಎಂದರು.
ʼರಾಜ್ಯ ಸರ್ಕಾರ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಆರ್ಎಸ್ಎಸ್ ನಿಷೇಧಿಸದೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಕಡ್ಡಾಯ ಎಂದು ಹೇಳುವ ಮೂಲಕ ಮೃದು ಧೋರಣೆ ತಾಳಿರುವುದು ನೋಡಿದರೆ ಕಾಂಗ್ರೆಸ್ನಲ್ಲೂ ಸಹ ಆರ್ಎಸ್ಎಸ್ ಕೂಸುಗಳಿವೆ ಎಂಬುದು ಸಾಬೀತಾಗಿದೆʼ ಎಂದರು.
ಪ್ರಜಾಪ್ರಭುತ್ವ ಹಾಗೂ ಬಹುತ್ವಕ್ಕೆ ತದ್ವಿರುದ್ದವಾದ ಆರ್ಎಸ್ಎಸ್ ಸಂಘಟನೆಯನ್ನು ಕೂಡಲೇ ಸಂಪೂರ್ಣ ನಿಷೇಧಿಸುವ ಜೊತೆಗೆ ಸಿಜೆಯ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ, ಗ್ವಾಲಿಯರ್ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ ಅನೀಲ ಮಿಶ್ರಾ ಹಾಗೂ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆಯೊಡ್ಡಿದ ವ್ಯಕ್ತಿಗೆ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ʼಹಸಿ ಬರಗಾಲʼ ಘೋಷಣೆಗೆ ಆಗ್ರಹ : 6ನೇ ದಿನಕ್ಕೆ ಕಾಲಿಟ್ಟ ಧರಣಿ
ಪತ್ರಿಕಾಗೋಷ್ಠಿಯಲ್ಲಿ ಜನರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ಶಿಂಧೆ, ಮುಖಂಡರಾದ ತಿಪ್ಪಣ್ಣ ವಾಲಿ, ಎಮ್.ಡಿ ಜಮೀಲಖಾನ್, ರವಿ ಕೋಟೇರ್, ಮಾರುತಿ ಕಾಂಬಳೆ, ದತ್ತಾತ್ರಿ ನಾಗವಂಶಿ, ಬಾಬಾ ಪಟೇಲ ಮತ್ತಿತರರಿದ್ದರು.





