ಲಿಂಗತ್ಯ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯಲ್ಲಿ ಸಕ್ರಿಯವಾಗಿರುವ ಬೆಂಗಳೂರು ಮೂಲದ 24 ವರ್ಷದ ಲಿಂಗತ್ವ ಅಲ್ಪಸಂಖ್ಯಾತ ಯುವತಿ ಸುಕನ್ಯಾ ಮೇಲೆ ಹಲ್ಲೆ ಎಸಗಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಮ್.ಜಿ.ಎಸ್.ಪಿ ಸಂಘಟನೆಯ ಸದಸ್ಯರಾದ ಭೀಮ ಆಗ್ರಹಿಸಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ‘ಇತ್ತಿಚೀಗೆ ರಾಜ್ಯ ರಾಜ್ಯಧಾನಿ ಬೆಂಗಳೂರಿನ ಕೃಷ್ಣರಾಜಪುರ ನಿವಾಸಿ ಸುಕನ್ಯಾ ಅವರ ಮೇಲೆ ನಡೆದ ಭೀಕರ ಹಲ್ಲೆ, ಅಪಹರಣ, ಅಕ್ರಮ ಬಂಧನ ಮತ್ತು ಬಲವಂತದ ತಲೆ ಬೋಳಿಸುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದರು.
‘ಅ.30ರಂದು ಸುಕನ್ಯಾ ಅವರನ್ನು ಬೆಂಗಳೂರಿನ ಕೃಷ್ಣರಾಜಪುರಂನಿಂದ ಅಪಹರಿಸಲಾಗಿದ್ದು, ಮರದ ಕಟ್ಟಿಗೆಯಿಂದ ಹೊಡೆದು ಕ್ರೂರವಾಗಿ ಹಿಂಸೆಗೆ ಒಳಪಡಿಸಿ ಬಲವಂತವಾಗಿ ತಲೆ ಬೋಳಿಸುವ ಮೂಲಕ ಮಹಿಳೆಯಾಗಿ ಅವರ ಲಿಂಗತ್ವ ಅಸ್ತಿತ್ವವನ್ನು ಅಳಿಸಿ ಹಾಕುವ ಉದ್ದೇಶಿತ ಪ್ರಯತ್ನ ಮಾಡಲಾಯಿತು. ಈ ಹಲ್ಲೆ, ಅವರು ಒಂದು ಹಿಜ್ರಾ ಫರಾಣಾಯಿಂದ ಮತ್ತೊಂದಕ್ಕೆ ಸ್ಥಳಾಂತರಗೊಳ್ಳಲು ಬಯಸಿದ್ದುದರಿಂದ ನಡೆದಿರುವುದಾಗಿ ಹೇಳಲಾಗಿದೆ. ಸುಕನ್ಯಾ ಅವರನ್ನು ಅವರ ಇಚ್ಚೆ ವಿರುದ್ಧವಾಗಿ ಅ.31ರಂದು ಮಧ್ಯಾಹ್ನದವರೆಗೆ ಬಂಧನದಲ್ಲಿಟ್ಟಿದ್ದರು’ ಎಂದರು.
‘ನಾಗರಿಕ ಸಮಾಜದ ಸಂಘಟನೆಗಳು ಮತ್ತು ಹೋರಾಟಗಾರರ ಸಮಯೋಚಿತ ಮಧ್ಯಸ್ಥಿಕೆಯಿಂದ ಪೊಲೀಸರು ಅವರನ್ನು ರಕ್ಷಿಸಿದರು. ಎಫ್ಐಆರ್ ದಾಖಲಾಗಿದೆ ಮತ್ತು ತನಿಖೆಗಳು ಪ್ರಗತಿಯಲ್ಲಿವೆ. ಈ ಕ್ರೂರ ಘಟನೆ ಹಿಜ್ರಾ ವ್ಯವಸ್ಥೆಯೊಳಗಿನ ಸದಸ್ಯರು ವಿಶೇಷವಾಗಿ ಎಷ್ಟೋ ಬಾರಿ ಪೊಲೀಸರಿಂದ, ಸಾರ್ವಜನಿಕರಿಂದ, ಕೆಲವೊಮ್ಮೆ ತಮ್ಮದೇ ಸಮುದಾಯದೊಳಗಿನಿಂದಲೂ ಹಿಂಸೆಗೆ ಒಳಗಾಗುವವರಾಗುತ್ತಾರೆ ಎಂಬ ಕಹಿ ವಾಸ್ತವತೆ ತಮ್ಮ ಮುಂದೆ ಇರಿಸಲಾಗುತ್ತಿದೆ’ ಎಂದರು.
‘ಹಿಂಸೆ ತಡೆಯಲು ಮತ್ತು ಪ್ರತಿಕ್ರಿಯಿಸಲು ಸಮುದಾಯದ ನೇತೃತ್ವದ ವ್ಯವಸ್ಥೆಗಳನ್ನು ಬಲಪಡಿಸುವುದು, ಪರಸ್ಪರ ಬೆಂಬಲವನ್ನು ಗಟ್ಟಿಗೊಳಿಸುವುದು, ಮತ್ತು ಎಲ್ಲರಿಗೂ ಸುರಕ್ಷತೆ, ಗೌರವ ಹಾಗೂ ಐಕ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸುವುದೇ ನಮ್ಮ ಉದ್ದೇಶ, ಸುಕನ್ಯಾ ಅವರು ಅನುಭವಿಸಿದ ಹಿಂಸೆ ಅವರ ಮಾನವ ಹಕ್ಕು ಮತ್ತು ಗೌರವದಿಂದ ಬದುಕುವ ಅವರ ಹಕ್ಕು ಉಲ್ಲಂಘನೆಯಾಗಿದೆ. ಯಾವುದೇ ಮೂಲದಿಂದಲಾದರೂ ನಡೆಯುವ ಹಿಂಸೆಯ ವಿರುದ್ಧ ಸುಕನ್ಯಾ ಮತ್ತು ಎಲ್ಲಾ ಲಿಂಗತ್ವ ಅಲ್ಪ ಸಂಖ್ಯಾತ ವ್ಯಕ್ತಿಗಳೊಂದಿಗೆ ದೃಢವಾಗಿ ನಿಂತಿದೆ ಮತ್ತು ಕರ್ನಾಟಕದಾದ್ಯಂತ ಸಮುದಾಯದ ಎಲ್ಲ ಸದಸ್ಯರ ನ್ಯಾಯ, ಸಮಾನತೆ ಮತ್ತು ಸುರಕ್ಷತೆಯ ಹೋರಾಟ ಮುಂದುವರೆಯಲಿದೆ’ ಎಂದು ತಿಳಿಸಿದರು.
ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, ‘ಸುಕನ್ಯಾ ಅವರಿಗೆ ನ್ಯಾಯ ದೊರಕುವಂತೆ ಮತ್ತು ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಸುರಕ್ಷತೆಯನ್ನು ಖಚಿತಪಡಿಸುವಂತೆ ಕರ್ನಾಟಕ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಂದ ತುರ್ತು ಮತ್ತು ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಪ್ರತಿ ಟನ್ ಕಬ್ಬಿಗೆ ₹3,300 ಬೆಲೆ ನಿಗದಿಗೆ ಆಗ್ರಹಿಸಿ ರಸ್ತೆಗಿಳಿದ ರೈತರು
ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದಾರ ಮಾತನಾಡಿ, ‘ಲಿಂಗತ್ಯ ಅಲ್ಪ ಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ನೇಮಕಾತಿ, ಉದ್ಯಮಶೀಲತೆ ಯೋಜನೆಗಳು, ಕೌಶಲ್ಯಾಭಿವೃದ್ಧಿ, ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸಬೇಕು, ಲಿಂಗತ್ಯ ಅಲ್ಪ ಸಂಖ್ಯಾತರಿಗೆ ಸುರಕ್ಷಿತ, ಒಳಗೊಂಡ ಮತ್ತು ಕೈಗೆಟುಕುವ ವಸತಿ ವ್ಯವಸ್ಥೆ ಒದಗಿಸಬೇಕು’ ಎಂದರು.
ಎಮ್.ಜಿ.ಎಸ್.ಪಿ ಸದಸ್ಯೆ ರೋಸ್ನಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು





