ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಅ.6ರಂದು ಶೂ ಎಸೆದು ಅಪಮಾನಿಸಿದ ವಕೀಲ ರಾಕೇಶ ಕಿಶೋರ್ ಕೃತ್ಯ ಖಂಡಿಸಿ ಬಸವಕಲ್ಯಾಣದಲ್ಲಿ ಬುಧವಾರ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಡಾ.ಅಂಬೇಡ್ಕರ್ ಅವರ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಪ್ರಮುಖರು ವಕೀಲ ರಾಕೇಶ ವಿರುದ್ಧ ಘೋಷಣೆ ಕೂಗಿದರು, ಬಳಿಕ ವಕೀಲ ರಾಕೇಶ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು. ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ʼಸಿಜೆಐ ಬಿ.ಆರ್ ಗವಾಯಿ ಅವರತ್ತ ಶೂ ಎಸೆದ ವಕೀಲ ರಾಕೇಶ ಕಿಶೋರ್ ಹಾಗೂ ಗ್ವಾಲಿಯರ್ನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ ಅನೀಲ್ ಮಿಶ್ರಾ ಎಂಬ ವಕೀಲನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ಇಬ್ಬರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಭಗವಾನ್ ಬುದ್ಧ ಹಾಗೂ ಡಾ.ಅಂಬೇಡ್ಕರ್ ಅವರ ಅನುಯಾಯಿ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರೂ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸಿಜೆಐ ಅವರ ಮೇಲೆ ಶೂ ಎಸೆದ ಘಟನೆ ವ್ಯಕ್ತಿ ಮೇಲೆ ನಡೆಸಿದ ದಾಳಿಯಲ್ಲ. ನ್ಯಾಯ, ಸಂವಿಧಾನದ ಮೇಲಿನ ದಾಳಿಯಾಗಿದೆ. ಇದ ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿಯಾಗಿದೆʼ ಎಂದು ಖಂಡಿಸಿದರು.
ʼಸಿಜೆಐ ಬಿ.ಆರ್.ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕಿವೆ. ಈ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಈ ಘಟನೆಯನ್ನು ಖಂಡಿಸಬೇಕು. ಡಾ.ಅಂಬೇಡ್ಕರ್, ಭಾರತೀಯ ಸಂವಿಧಾನ, ನ್ಯಾಯಮೂರ್ತಿ ಮತ್ತು ನ್ಯಾಯಾಲಯಕ್ಕೆ ಅವಮಾನಿಸುವ ವ್ಯಕ್ತಿಗಳ ಮೇಲೆ ಕಡ್ಡಾಯವಾಗಿ ದೇಶದ್ರೋಹದ ಪ್ರಕರಣ ದಾಖಲಿಸಲು ಹೊಸ ಕಾನೂನು ರೂಪಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ಗೆ ಜೀವಾವಧಿ ಶಿಕ್ಷೆ ವಿಧಿಸಿ
ದಸಂಸ ತಾಲೂಕು ಅಧ್ಯಕ್ಷ ಪಿಂಟು ಕಾಂಬಳೆ, ವಾಯ್ಸ್ ಆಫ್ ಅಂಬೇಡ್ಕರ್ ರಾಜ್ಯಾಧ್ಯಕ್ಷ ಸುರೇಶ್ ಮೋರೆ, ಬೌದ್ಧ ಮಹಾಸಭಾ ಅಧ್ಯಕ್ಷ ಮನೋಹರ್ ಮೈಸೆ ಹಾಗೂ ಪ್ರಮುಖರಾದ ಇಕ್ರಾಮ್ ಖಾದಿವಾಲಾ, ಆಕಾಶ ಖಂಡಾಳೆ, ದೀಪಕ್ ಗಾಯಕವಾಡ್, ಸಿಕಂದರ್ ಸಿಂಧೆ, ವಿಜಯಕುಮಾರ್ ಡಾಂಗೆ, ಸಂದೀಪ ಮುಕಿಂದೆ, ನಗರಸಭೆ ಸದಸ್ಯ ಗಫಾರ್ ಪೆಸ್ಮಾಮ್, ಸಂಜು, ಗೌತಮ್ ಜಾಂತೆ, ಅಶೋಕ್ ಮದಾಳೆ ಹಾಗೂ ಯುವರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.





