ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ ಕಿಶೋರ್ ಶೂ ಎಸೆದಿರುವ ಘಟನೆಯನ್ನು ಖಂಡಿಸಿ ಹುಲಸೂರ ಪಟ್ಟಣದಲ್ಲಿ ಸೋಮವಾರ ದಲಿತ ಸೇನೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಭೀಮನಗರದ ಡಾ.ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಮುಖಾಂತರ ತಹಸೀಲ್ದಾರ್ ಕಚೇರಿಗೆ ತಲುಪಿದರು. ಬಳಿಕ ತಹಸೀಲ್ ಕಚೇರಿ ಎದುರುಗಡೆ ಮುಖ್ಯರಸ್ತೆ ಮೇಲೆ ವಕೀಲ ರಾಕೇಶ್ ಕಿಶೋರ್ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಿದರು.
ಪ್ರತಿಭಟನಾಕಾರರು ಮಾತನಾಡಿ, ʼಸಂವಿಧಾನಾತ್ಮಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವುದು ಅತ್ಯಂತ ಹೇಯ ಮತ್ತು ರಾಷ್ಟ್ರವಿರೋಧಿ ಕೃತ್ಯವಾಗಿದೆ. ಇಂತಹ ವರ್ತನೆಗೆ ಯಾವುದೇ ರೀತಿಯ ಸಹಾನುಭೂತಿ ತೋರಬಾರದು. ವಕೀಲ ರಾಕೇಶ್ ಕಿಶೋರ್ ಅವರನ್ನು ಬಂಧಿಸಿ, ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ʼಸಿಜೆಐ ಬಿ.ಆರ್ ಗವಾಯಿ ಅವರತ್ತ ಶೂ ಎಸೆದ ವಕೀಲ ರಾಕೇಶ ಕಿಶೋರ್ ಹಾಗೂ ಗ್ವಾಲಿಯರ್ನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ ಅನೀಲ್ ಮಿಶ್ರಾ ಎಂಬ ವಕೀಲನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ಇಬ್ಬರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ʼಭಗವಾನ್ ಬುದ್ಧ ಹಾಗೂ ಡಾ.ಅಂಬೇಡ್ಕರ್ ಅವರ ಅನುಯಾಯಿ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರೂ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸಿಜೆಐ ಅವರ ಮೇಲೆ ಶೂ ಎಸೆದ ಘಟನೆ ವ್ಯಕ್ತಿ ಮೇಲೆ ನಡೆಸಿದ ದಾಳಿಯಲ್ಲ. ನ್ಯಾಯ, ಸಂವಿಧಾನದ ಮೇಲಿನ ದಾಳಿಯಾಗಿದೆ. ಇದ ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿಯಾಗಿದೆʼ ಎಂದು ಖಂಡಿಸಿದರು.
ʼಸಿಜೆಐ ಬಿ.ಆರ್.ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕಿವೆ. ಈ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಈ ಘಟನೆಯನ್ನು ಖಂಡಿಸಬೇಕು. ಡಾ.ಅಂಬೇಡ್ಕರ್, ಭಾರತೀಯ ಸಂವಿಧಾನ, ನ್ಯಾಯಮೂರ್ತಿ ಮತ್ತು ನ್ಯಾಯಾಲಯಕ್ಕೆ ಅವಮಾನಿಸುವ ವ್ಯಕ್ತಿಗಳ ಮೇಲೆ ಕಡ್ಡಾಯವಾಗಿ ದೇಶದ್ರೋಹದ ಪ್ರಕರಣ ದಾಖಲಿಸಲು ಹೊಸ ಕಾನೂನು ರೂಪಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಔರಾದ್ ಪುರಸಭೆ ಕಾಂಗ್ರೆಸ್ ಸರಕಾರದ ಕೊಡುಗೆ : ಸಚಿವ ಈಶ್ವರ ಖಂಡ್ರೆ
ಪ್ರತಿಭಟನೆಯಲ್ಲಿ ದಲಿತ ಸೇನೆ ತಾಲ್ಲೂಕಾಧ್ಯಕ್ಷ ಅಶೋಕ ಸಿಂಧೆ, ಉಪಾಧ್ಯಕ್ಷ ಸತೀಷ ಗಾಯಕವಾಡ, ಕಾರ್ಯದರ್ಶಿ ಅಶೋಕ ಕಾಂಬಳೆ, ರಾಜು ಲಾಖೆ, ಸಂಭಾಜಿ ಬ್ರಿಗೇಡ್ ತಾಲ್ಲೂಕಾಧ್ಯಕ್ಷ ಜ್ಞಾನೋಬಾ ನಿಟ್ಟೂರೆ, ಆಲ್ ಇಂಡಿಯಾ ಬಹುಜನ್ ಸಮಾಜ ಪಕ್ಷದ ತಾಲ್ಲೂಕಾಧ್ಯಕ್ಷ ಸಂತೋಷ ಮೇಘಶಾಮ, ಆಲ್ ಇಂಡಿಯಾ ದಲಿತ ಪ್ಯಾಂಥರ್ ಸೇನೆ ಜಿಲ್ಲಾ ಕಾರ್ಯದರ್ಶಿ ಪ್ರಫುಲ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಶಂಕರ ಫುಲೆ, ಮನೋಜ ಬನಸೂಡೆ, ಸುನೀಲ ಹಂದಿಕೇರೆ, ಅರುಣ ಗಾಯಕವಾಡ, ಈರಪ್ಪಾ ಧುಮ್ಮನಸೂರ, ಯಶವಂತ ಕಾಂಬಳೆ, ಅನೀಲ್ ಒಡೆಯಾರ್, ವಿದ್ಯಾಸಾಗರ, ರತನ್ ಸೂರ್ಯವಂಶಿ ಹಾಗೂ ಮತ್ತಿತರರಿದ್ದರು.





