ಸಮೂಹ ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ. ಅವುಗಳ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದಲೆ ಸಮಾಜದ ಏಳಿಗೆ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಪ್ರಹ್ಲಾದ ಚೆಂಗಟಿ ಹೇಳಿದರು.
ಬಸವಕಲ್ಯಾಣ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈದಿನ.ಕಾಮ್, ಐಕ್ಯುಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮ ಮತ್ತು ಯುವಜನತೆ’ ಕುರಿತ ವಿಶೇಷ ಉಪನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼಮಾಧ್ಯಮದವರಲ್ಲಿ ಇರುವ ಸಾಮಾಜಿಕ ಕಳಕಳಿ, ಕಾಳಜಿಗಳಿಂದ ಜಗತ್ತಿನ ಆತಂಕ, ಸಮಸ್ಯೆ ಕಳೆಯಲು ಸಾಧ್ಯʼ ಎಂದರು.
ಪತ್ರಕರ್ತ ಬಾಲಾಜಿ ಕುಂಬಾರ ಅವರು ವಿಶೇಷ ಉಪನ್ಯಾಸ ನೀಡಿ, ʼಈ ಕಾಲದಲ್ಲಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನೋಡಲು ಕಲಿತಿದ್ದೇವೆ. ಆದರೆ, ಗ್ರಾಮೀಣ ಭಾರತದ ಹಲವಾರು ಸಮಸ್ಯೆ ಮತ್ತು ಸವಾಲುಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಹಳ್ಳಿಗಳು ಮತ್ತು ನಗರಗಳು ಎದುರಿಸುವ ವಿಭಿನ್ನ ಸಮಸ್ಯೆಗಳಿಗೆ ಪರಿಹರಿಸು ಕೆಲಸ ಮಾಧ್ಯಮಗಳಿಂದ ಸಾಧ್ಯʼ ಎಂದು ಹೇಳಿದರು.
ʼಮಾಧ್ಯಮ ಎಲ್ಲವೂ, ಎಲ್ಲರನ್ನೂ ಒಳಗೊಳ್ಳುವ ಮೂಲಕ ಚಲನಶೀಲತೆ ಪಡೆದಿದೆ. ಅದು ಏಕಕಾಲದಲ್ಲಿ ಓದುಗ ಮತ್ತು ಬರಹಗಾರರನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಹಲವು ಬರಹಗಾರರು ಪತ್ರಿಕೆಗಳಲ್ಲಿ ಬರೆಯುವ ಮೂಲಕ ಸಮಾಜವನ್ನು ಕಟ್ಟಿದ್ದಾರೆʼ ಎಂದರು.
ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಲೋಕದ ಹಲವು ಬಿಕ್ಕಟ್ಟುಗಳಿಂದ ಬಿಡುಗಡೆಯಾಗಲು ಸಾಹಿತ್ಯ ಕೃತಿಗಳು ಮತ್ತು ಮಾಧ್ಯಮಗಳು ಪ್ರಮಾಣುಗಳಾಗಿವೆ. ಬೌದ್ಧಿಕ ಮತ್ತು ವೈಚಾರಿಕ ನಿಲುವುಗಳನ್ನು ಮಂಡಿಸುವ ಮೂಲಕ ಮಾಧ್ಯಮಗಳಿಂದ ಹೊಸ ಜಗತ್ತು ಕಟ್ಟಲು ಸಾಧ್ಯ. ಲೋಕದ ಗ್ರಹಿಕೆಗೆ, ಸಮಾಜವನ್ನು ನೋಡುವ ನೋಟಕ್ರಮ ನೀಡುವ ಸಾಧನ ಮಾಧ್ಯಮಗಳಾಗಿವೆʼ ಎಂದು ನುಡಿದರು.

ʼಚರಿತ್ರೆ ಅರಿಯುವಲ್ಲಿ, ವರ್ತಮಾನ ಗ್ರಹಿಸುವಲ್ಲಿ, ಭವಿಷ್ಯತ್ತನ್ನು ರೂಪಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತದೆ. ಮಾಧ್ಯಮ ಸತ್ಯ ಶೋಧನೆಗೆ ದಾರಿಯಾಗಬೇಕು. ಕೃಷಿಕರು, ಶ್ರಮಿಕರು ಎದುರಿಸುವ ಬಿಕ್ಕಟ್ಟಗಳು ಅಧಿಕಾರದಲ್ಲಿ ಇದ್ದವರಿಗೆ ತೋರಿಸಿ, ಪರಿಹಾರ ಕಂಡುಕೊಳ್ಳುವ ದಾರಿಯಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿವೆʼ ಎಂದರು.
ಇದನ್ನೂ ಓದಿ : ಬೀದರ್ | ಅ.30ರೊಳಗೆ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ : ಸಚಿವ ಈಶ್ವರ ಖಂಡ್ರೆ
ಪ್ರಾಧ್ಯಾಪಕರಾದ ಶರಣಬಸಪ್ಪ ಜನ್ನಾ, ಸುಭಾಷ ಮಚಕುರಿ, ಡಾ. ಪೀರಪ್ಪ ಸಜ್ಜನ್, ಬಸವರಾಜ ಬಿರಾದಾರ, ಚಿನ್ನಮ್ಮ, ಮಹೇಶ ಮಂಠಾಳೆ, ಫರೀದ್, ಅನಿಲ ಚಾಂದೆ, ಅಂಜಲಿ ಗಜರೆ, ಭಾಗ್ಯಶ್ರೀ, ನರೇಂದ್ರ, ಸುಸ್ಮೀತಾ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ಐಕ್ಯುಎಸಿ ಸಂಯೋಜಕ ಡಾ.ಚಂದ್ರಕಾಂತ ಗಾಯಕವಾಡ ಸ್ವಾಗತಿಸಿದರು. ಪ್ರೊ.ಮೀನಾಕ್ಷಿ ಬಿರಾದಾರ ನಿರೂಪಿಸಿದರು. ಡಾ.ಶ್ರೀಕಾಂತ ಚೌಹಾಣ್ ವಂದಿಸಿದರು.





