ಜಿಲ್ಲೆಯ ರೈತರು ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ ನಾಲ್ಕೈದು ತಿಂಗಳು ಕಳೆದರೂ ಇಲ್ಲಿಯವರೆಗೆ ಕಬ್ಬಿನ ಬಿಲ್ ಪಾವತಿಯಾಗಿಲ್ಲ. ಏಪ್ರಿಲ್ 18ರ ವರೆಗೆ ಜಿಲ್ಲೆಯ ಎಲ್ಲ ರೈತರ ಕಬ್ಬಿನ ಬಿಲ್ಲು ಪಾವತಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ರೈತ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ಟನ್ ಕಬ್ಬಿಗೆ ₹27 ಸಾವಿರ ಠರಾವು ಪಾಸಾದರೂ ಇಲ್ಲಿಯವರೆಗೆ ಜಿಲ್ಲೆಯ ಯಾವುದೇ ಕಾರ್ಖಾನೆಯವರೂ ಹಣ ಪಾವತಿಸಿಲ್ಲ. ನಾರಂಜಾ ಸಕ್ಕರೆ ಕಾರ್ಖಾನೆ ಹಾಗೂ ಡಿಸಿಸಿ ಬ್ಯಾಂಕ್ ಸಾಲದ ವಿಷಯದ ಗುದ್ದಾಟದಲ್ಲಿ ಹೈಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು, ಈ ಸಂಬಂಧ ಜಿಲ್ಲೆಯ ರೈತರು ಆತಂಕಕ್ಕೆ ಈಡಾಗಿದ್ದಾರೆ. ಕಬ್ಬು ಸರಬರಾಜು ಮಾಡಿದ ರೈತರು ಕಾರ್ಖಾನೆಯಿಂದ ಕಬ್ಬಿನ ಬಿಲ್ಲು ಪಾವತಿಯಾಗುತ್ತದೋ ಅಥವಾ ಇಲ್ಲವೋ ಎಂದು ಗಾಬರಿಗೊಂಡಿದ್ದಾರೆʼ ಎಂದರು.
ʼಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರ ಬಿಲ್ಲು ಪಾವತಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿದೆ. 14 ದಿನಗಳಲ್ಲಿ ಕಬ್ಬಿನ ಬಿಲ್ಲು ಪಾವತಿಯಾಗದಿದ್ದಲ್ಲಿ ಅದಕ್ಕೆ ಬಡ್ಡಿ ಸೇರಿಸಿ ರೈತರಿಗೆ ಕೊಡಬೇಕೆಂದು ಕಾನೂನು ಇದೆ. ಹಾಗಿದ್ದರೂ ರೈತರಿಗೆ ಹಣ ಪಾವತಿಸುತ್ತಿಲ್ಲ. ಕೂಡಲೇ ಕಬ್ಬಿನ ಪಾವತಿಸಬೇಕು. ಇಲ್ಲಿದಿದ್ದರೆ ಏ.19ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದುʼ ಎಂದರು.
ʼಕಬ್ಬಿನ ಬಿಲ್ಲು ಪಾವತಿಯಾಗದಿದ್ದರೆ ಮುಂದಿನ ದಿನಗಳಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಅವರ ಶವವನ್ನು ಸಂಬಂಧಪಟ್ಟ ಕಾರ್ಖಾನೆ ಎದುರು ತಂದಿಟ್ಟು ಪ್ರತಿಭಟನೆ ನಡೆಸಲಾಗುವುದು. ಇಂತಹ ಆತ್ಮಹತ್ಯೆಗಳಿಗೆ ಸಂಬಂಧಪಟ್ಟ ಕಾರ್ಖಾನೆಗಳ ಆಡಳಿತ ಮಂಡಳಿ, ಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲಾಡಳಿತವೇ ನೇರ ಜವಾಬ್ದಾರರಾಗುತ್ತಾರೆʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮೊಬೈಲ್ ಹೆಚ್ಚು ಬಳಸಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾಣ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಸೇರಿದಂತೆ ಪ್ರಮುಖರಾದ ಶಂಕ್ರೆಪ್ಪಾ ಪಾರಾ, ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ಬಾಬುರಾವ ಜೋಳದಾಬಕಾ, ವೈಜಿನಾಥ ಬುಯ್ಯಾ, ನಾಗಯ್ಯಾ ಸ್ವಾಮಿ, ಮಲ್ಲಿಕಾರ್ಜುನ ಪಡಸಾಲೆ, ಬಸಪ್ಪಾ ಆಲೂರೆ, ಶಂಕರೆಪ್ಪಾ ಪಾಟೀಲ, ವೆಂಕಟ ಜಗದಾಳೆ, ವೀರಶೆಟ್ಟಿ ಕಮಠಾಣೆ, ಸಂತೋಷ ವಲ್ಲಪ್ಪೆ, ಸಂಜೀವ ವಲ್ಲಪ್ಪೆ ಮತ್ತಿತರರಿದ್ದರು.





