ಬೀದರ್ ನಗರದ ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು ಅಲೆಮಾರಿ, ನಿರ್ಗತಿಕರಿಗೆ ಹಾಗೂ ಬಡವರಿಗೆ ಬೆಚ್ಚನೆಯ ಹೊದಿಕೆ ವಿತರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಬೀದರ್ ನಗರದ ನೌಬಾದ್ನ ಚೌಳಿ ಕಮಾನ್ ಸಮೀಪದಲ್ಲಿ ಗುಡಿಸಲಿನಲ್ಲಿ ವಾಸಿಸುವ ಸುಮಾರು 85ಕ್ಕೂ ಅಧಿಕ ಅಲೆಮಾರಿ ಕುಟುಂಬಗಳಿಗೆ ಹಾಗೂ ಪಾಪನಾಶ ದೇವಸ್ಥಾನ, ಕೆಇಬಿ ಬಳಿಯ ಹನುಮಾನ್ ಮಂದಿರ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಇರುವ ನಿರ್ಗತಿಕರಿಗೆ ಗೆಳೆಯರ ಬಳಗದ ಸದಸ್ಯರು ರಗ್ಗು ವಿತರಿಸಿದರು.
ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಚಂದ್ರಶೇಖರ ಪಡಶೆಟ್ಟಿ ಮಾತನಾಡಿ, ʼಜಿಲ್ಲೆಯಲ್ಲಿ ಕೆಲ ದಿನಗಳಿಂದ ವಿಪರೀತ ಚಳಿಗೆ ಜನರು ಕಂಗಾಲಾಗಿದ್ದಾರೆ. ಹೊತ್ತು ಮುಳುಗುವುದರೊಳಗಾಗಿ ಚಳಿ ಶುರುವಾದರೆ ಬೆಳಿಗ್ಗೆ 10 ಗಂಟೆಯಾದರೂ ಸಹ ಚಳಿಗೆ ಹೆದರಿ ಜನ ಮನೆಯಿಂದ ಹೊರಬರದಂತಹ ಪರಿಸ್ಥಿತಿ ಇದೆ. ಸ್ವಂತ ಸೂರು ಇಲ್ಲದೆ ಜೋಪಡಿಗಳಲ್ಲಿ ವಾಸಿಸುವ ಪುಟ್ಟ ಮಕ್ಕಳು, ವೃದ್ಧರು ಕೊರೆಯುವ ಚಳಿಯಲ್ಲಿ ಒದ್ದಾಡುತ್ತಿದ್ದಾರೆ. ಅವರ ಕಷ್ಟಕ್ಕೆ ನಮ್ಮ ತಂಡದ ಹೃದಯ ಮಿಡಿದಿದೆ. ಪ್ರತಿ ವರ್ಷವೂ ನಮ್ಮ ತಂಡದಿಂದ ಜಿಲ್ಲೆಯ ನಾನಾ ಕಡೆ ನಿರ್ಗತಿಕರಿಗೆ, ಬಡವರಿಗೆ ಹೊದಿಕೆ ವಿತರಿಸುವ ಕಾರ್ಯ ಮಾಡುತ್ತಿದ್ದೇವೆʼ ಎಂದರು.

ಉದ್ಯಮಿ ಮಡಿವಾಳಪ್ಪ ಗಂಗಶೆಟ್ಟಿ ಅವರು ಮಾತನಾಡಿ, ʼಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಳಿ ವಸತಿ ರಹಿತರಿಗೆ ಸಂಕಷ್ಟಕ್ಕೆ ದೂಡಿದೆ. ಸ್ವಾಭಿಮಾನಿ ಗೆಳೆಯರ ಬಳಗದವರ ಸಾಮಾಜಿಕ ಕಳಕಳಿಗೆ ಮೆಚ್ಚಿ ರಗ್ಗು ದೇಣಿಗೆ ನೀಡುವ ಸಣ್ಣ ಕಾರ್ಯ ಮಾಡಿದ್ದೇನೆ. ವಸತಿ ವಂಚಿತ ಕುಟುಂಬಗಳಿಗೆ ಸರ್ಕಾರ ಮೂಲಸೌಕರ್ಯ ಒದಗಿಸುವುದು ಅಗತ್ಯವಿದೆʼ ಎಂದರು.
ಇದನ್ನೂ ಓದಿ : ಬೀದರ್ | ರೈತರ ಹೋರಾಟಕ್ಕೆ ಜಯ : ಟನ್ ಕಬ್ಬಿಗೆ ₹2,950 ಬೆಲೆ ನಿಗದಿ : 8 ದಿನಗಳ ಧರಣಿ ಅಂತ್ಯ
ಈ ಸಂದರ್ಭದಲ್ಲಿ ಪ್ರಮುಖರಾದ ಸೊಮನಾಥ ಗಂಗಶೆಟ್ಟಿ, ಓಂಪ್ರಕಾಶ್ ರೊಟ್ಟೆ, ಬಾಲಾಜಿ ಕುಂಬಾರ, ಜಗದೀಶ್ವರ ಬಿರಾದಾರ, ಉಮಾಕಾಂತ ವಿಳಾಸಪುರೆ ಹಾಗೂ ಬಳಗದ ಸದಸ್ಯರಾದ ಶ್ರೀಕಾಂತ್ ರೆಡ್ಡಿ, ನಿಲಕಂಠ ಶೆಟಕಾರ, ವಿಶಾಲ ಘಾಳೆ, ಬಸವರಾಜ ಸ್ವಾಮಿ, ರವಿ ಬೆಳಕುಣೆ, ಭಾನುದಾಸ, ಉಮೇಶ್ ಈರಗೊಂಡೆ, ವಿನೋದ ಬಿರಾದಾರ, ದಿಗಂಬರ ಗುಮಟಾ, ವೀಣ್ ಮಾಜಿ, ಸಿದ್ದು ಸ್ವಾಮಿ, ಶಿವು ಸ್ವಾಮಿ, ಶ್ರೀಕಾಂತ ಸ್ವಾಮಿ, ನಾಗರಾಜ್ ಬಂಬುಳಗೆ, ಜೀವನ್, ವಿಲಾಸ್ ಮತ್ತು ತಂಡದ ಸದಸ್ಯರು ಹಾಜರಿದ್ದರು.





