ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಗೆ ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬರು, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ಹಂತ-ಹಂತವಾಗಿ ಬರೋಬ್ಬರಿ ₹4.66 ಲಕ್ಷ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಮನಾಬಾದ್ ಪಟ್ಟಣದ ಮಾಣಿಕ ಪ್ರಭು ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹರಿಯಾಣ ಮೂಲದ ಸಂಗೀತ ಭಾರದ್ವಾಜ ಹಣ ಕಳೆದುಕೊಂಡವರು. ಈ ಕುರಿತು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ರ ಜನವರಿ 14ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ʼನಿಮಗೆ ಸಿಂಗಾಪುರದಲ್ಲಿ ಡೈರೆಕ್ಟರ್ ಡಿಪಾರ್ಟಮೆಂಟ್ ಏಜುಕೇಶನ್ ಪ್ರೋಗ್ರಾಮ್ ಹುದ್ದೆಯಿದ್ದು, ನೀವು ಇಚ್ಚಿಸಿದರೆ ನಿಮ್ಮ ಇಮೇಲ್ಗೆ ಮಾಹಿತಿ ಕಳಿಸುತ್ತೇವೆʼ ಎಂದು ಹೇಳಿ, ಶಿಕ್ಷಕನ ಇಮೇಲ್ಗೆ ಹುದ್ದೆಯ ದಾಖಲಾತಿ, ವೇತನ ಹಾಗೂ ರಜಿಸ್ಟ್ರರೇಶನ್ ಕಳುಹಿಸಿದ್ದಾರೆ. ವಿದೇಶದಲ್ಲಿ ಕೆಲಸ ಸಿಕ್ಕಿತೆಂಬ ಖುಷಿಯಲ್ಲಿ ನಂಬಿದ ಶಿಕ್ಷಕ ಇಮೇಲ್ಗೆ ಬಂದ ಲಿಂಕ್ ಮೂಲಕ ಜ.15ರಂದು ₹5 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.
ಅಷ್ಟಕ್ಕೆ ಬಿಡದ ವಂಚಕ ಬೇರೆ-ಬೇರೆ ಮೊಬೈಲ್ ಸಂಖ್ಯೆಗಳಿಂದ ಶಿಕ್ಷಕನಿಗೆ ಕರೆ ಮಾಡಿ, ಪ್ರೋಫೈಲ್ ವೇರಿಫಿಕೇಶನ್, ಎನ್ಓಸಿ ಡಿಪಾಜಿಟ್, ಐಡೆಂಟಿಟಿ ಚೆಕ್, ಜಾಬ್ ಕೋಡ್, ಪ್ರೋಫೈಲ್ ಕ್ಲೋಜಿಂಗ್, ಎಂಪ್ಲಾಯ್ಮೆಂಟ್ ಪಾಸ್, ಎಲ್ಎಂಐಎ ಅಂತ ಹೇಳಿ ಲಿಂಕ್ ಕಳುಹಿಸಿ 2025ರ ಜನವರಿ 15ರಿಂದ ಫೆಬ್ರವರಿ 13ರವರೆಗೆ ಹಂತಹಂತವಾಗಿ 9 ಬಾರಿ ಒಟ್ಟು ₹4,66,616 ಹಣ ವರ್ಗಾಯಿಸಿಕೊಂಡಿದ್ದಾರೆʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ʼಇದಾದ ನಂತರ ನಾನು ನಿರಂತರ ಕರೆ ಮಾಡಿದರೂ ಅವರು ಕರೆ ಸ್ವೀಕರಿಸದಿದ್ದಾಗ ನಾನು ಮೋಸ ಹೋಗಿದ್ದೇನೆ ಎಂಬುದು ಗೊತ್ತಾಗಿ ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದೇನೆ. ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಜಿಸ್ಟ್ರೇಶನ್ ಮಾಡಿಸಿ, ಸಂದರ್ಶನ, ದಾಖಲಾತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ. ಹಣ ಮರಳಿ ಬರಬಹುದೆಂದು ತಿಳಿದು ದೂರು ನೀಡಲು ವಿಳಂಬವಾಗಿದೆ. ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಶಿಕ್ಷಕ ಸಂಗೀತ ಭಾರದ್ವಾಜ ದೂರು ನೀಡಿದ್ದಾರೆ.
ಇದನ್ನೂ ಓದಿ : Breaking News | ಆಳಂದ ಮತದಾರರ ಪಟ್ಟಿ ಅಕ್ರಮ; ತನಿಖೆಗೆ ಎಸ್ಐಟಿ ರಚನೆ ಸಾಧ್ಯತೆ
ಈ ಕುರಿತು 2025ರ ಸೆಪ್ಟೆಂಬರ್ 19ರಂದು ಬೀದರ್ನ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 318(4), 319(2) ಬಿಎನ್ಎಸ್ ಮತ್ತು 66(ಸಿ) ಐಟಿ ಎಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





