ಅಪಾರ ಜ್ಞಾನದ ಸಾಮರ್ಥ್ಯವಿದ್ದರೂ ಸಹ ಅವೈಜ್ಞಾನಿಕ ಚಿಂತನೆ, ಮೌಢ್ಯಗಳನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ನಾವು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅಸಾಧ್ಯ ಎಂದು ಸಂಪನ್ಮೂಲ ಶಿಕ್ಷಕ ಶಾಮಸುಂದರ ಖಾನಾಪೂರೆ ಕಳವಳ ವ್ಯಕ್ತಪಡಿಸಿದರು.
ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಗುರುವಾರ ಬೀದರ್ನ ಬ್ರೇನ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಹಾಗೂ ಎತ್ತ ಸಾಗುತ್ತಿದೆ ಭಾರತ? ಎಂಬ ವಿಷಯ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ʼಶಿಕ್ಷಣದ ಮೂಲಕ ಜ್ಞಾನ ಪಡೆದು ಮೂರ್ಖರಂತೆ ಕೆಲ ಮೌಢ್ಯ ನಂಬಿಕೆಗಳ ಬೆನ್ಹತ್ತಿ ಹೋಗುತ್ತಿರುವುದು ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಲಿದೆ. ಭಾರತ ಎಂಬ ಪದ ದೇಶದಲ್ಲಿ ವಾಸಿಸುವ ಸಮಸ್ತ ಜನರ ಪ್ರತಿನಿಧಿತ್ವದ ಸಂಕೇತವಾಗಿ ನೋಡಬೇಕಿದೆ. ಇದನ್ನು ಒಂದು ನಕ್ಷೆಯಾಗಿ ನೋಡದೇ ಇಲ್ಲಿ ವಾಸಿಸುವ ಜನರ ಬದುಕು-ಬವಣೆಯ ಅರಿಯುವುದಾಗಿದೆ. ಹಲವು ಜಾತಿ, ಧರ್ಮ, ಮತಗಳನ್ನು ಹೊಂದಿರುವ ಭಾರತ ಬಹುತ್ವ ಸಂಸ್ಕೃತಿಯ ಪ್ರತಿಬಿಂಬದಂತಿದೆʼ ಎಂದರು.
ʼಪ್ರತಿಯೊಬ್ಬರೂ ಅನ್ಯ ಧರ್ಮ, ಅನ್ಯ ಜಾತಿಯ ಜನರಿಗೂ ಗೌರವಿಸಿ ನಾವೆಲ್ಲ ಭಾರತೀಯರು ಎಂದರಿತು ಬದುಕು ರೂಪಿಸಿಕೊಳ್ಳಬೇಕಿದೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕದ ಹೊರತು ಅಭಿವೃದ್ದಿ ಸಾಧ್ಯವಿಲ್ಲ. ಭಾರತದಲ್ಲಿ ಎಲ್ಲರಿಗೂ ಸಂವಿಧಾನದ ಪಾಲನೆ ಮುಖ್ಯ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆʼ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ ಮೂಲಗೆ ಮಾತನಾಡಿ, ʼದೇಶದಲ್ಲಿ ಜಾತಿಯತೆ ಎಂಬುದು ವಾಸ್ತವ. ದೇಶದ ಎಲ್ಲ ಬೆಳವಣಿಗೆಗಳು ಜಾತಿಯತೆ ಆಧಾರದಲ್ಲಿ ನಿರ್ಧರಗೊಳ್ಳುತ್ತಿವೆ. ಹೀಗಾಗಿ ಜಾತಿವಿನಾಶ ಮಾಡುವುದು ಅತ್ಯಂತ ಮುಖ್ಯವಾಗಿ. ದೇಶದ ಮಾಧ್ಯಮ ಮತ್ತು ರಾಜಕೀಯ ವ್ಯವಸ್ಥೆ ಸರಿಪಡಸದೇ ದೇಶದ ಅಭಿವೃದ್ಧಿ ಕನಸು ಕಾಣುವುದು ವ್ಯರ್ಥʼ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಶಿವರುದ್ರ ಕಾಂಬಳೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ನಿವೃತ್ತ ಶಿಕ್ಷಕ ಶಿವಾಜಿರಾವ ಪಾಟೀಲ್, ಶಿಕ್ಷಕ ಸೂರ್ಯಕಾಂತ ಸಿಂಗೆ, ಯುವ ಚಿಂತಕರಾದ ವಿನೋದ ರತ್ನಾಕರ್, ಪರಮೇಶ್ವರ ವಿಳಸಪೂರೆ, ಸುಧಾಕರ ಕೊಳ್ಳುರ್ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಆರ್ಎಸ್ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಶಿಕ್ಷಕರ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಆಗ್ರಹ
ಕಾರ್ಯಕ್ರಮದಲ್ಲಿ ನಂದಾದೀಪ ಬೋರಾಳೆ, ಮಲ್ಲಿಕಾರ್ಜುನ ಟಂಕಸಾಲೆ, ನಾಗಸೇನ ತಾರೆ, ಬಾಲಾಜಿ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





