ಡಾ.ಸಿದ್ರಾಮ ಕಾರಣಿಕ ಅವರ ರಚನೆಯ ʼರಮಾಬಾಯಿ ಅಂಬೇಡ್ಕರ್ʼ ನಾಟಕ ರವಿವಾರ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಪ್ರದರ್ಶನ ಕಂಡಿತು.
ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ರಂಗಾಯಣ ಕಲಬುರಗಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ʼರಂಗಗೀತೆಗಳ ಗಾಯನ ಹಾಗೂ ʼರಮಾಬಾಯಿ ಅಂಬೇಡ್ಕರ್ʼ ನಾಟಕ ಪ್ರೇಕ್ಷಕರ ಮನಸೂರೆಗೊಳಿಸಿತು.

ಈ ನಾಟಕವನ್ನು ಡಾ.ಮಲ್ಲಿಕಾರ್ಜುನ ದೊಡ್ಡಮನಿ ನಿರ್ದೇಶಿಸಿದ್ದಾರೆ. ಕಲಬುರಗಿಯ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘದ ತಂಡದವರಿಂದ ಮೂಡಿ ಬಂದ ನಾಟಕ ನೋಡುಗರ ಮೆಚ್ಚುಗೆ ಗಳಿಸಿತು.
ಗ್ರಾಮೀಣ ಕಲಾವಿದರಿಗೆ ಅವಕಾಶ ಸಿಗಲಿ : ಅಪರ ಜಿಲ್ಲಾಧಿಕಾರಿ ಸುರೇಖಾ
ಗ್ರಾಮೀಣ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಪದ ಕಲಾವಿದರಿದ್ದಾರೆ. ಅಂಥವರಿಗೂ ಸೂಕ್ತ ವೇದಿಕೆ ಮತ್ತು ಅವಕಾಶಗಳು ಸಿಗಬೇಕು. ಈ ನಿಟ್ಟಿನಲ್ಲಿ ರಂಗಾಯಣ ಜಾಗೃತಿ ಕಾರ್ಯಕ್ರಮಗಳು ಆಯೋಜಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸುರೇಖಾ ತಿಳಿಸಿದರು.
ಇಂದು ನಗರದ ರಂಗಮಂದಿರದಲ್ಲಿ 2021-22ನೇ ಸಾಲಿನ ರಂಗಗೀತೆಗಳ ಗಾಯನ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ʼಕಲೆ ಮತ್ತು ಸಾಹಿತ್ಯ ಪೋಷಣೆಯಲ್ಲಿ ಬೀದರ ಅಗ್ರಪಂಕ್ತಿಯಲ್ಲಿದೆ. ಬಹಿರಂಗದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಂಡರೂ ಅಂತರಂಗದಲ್ಲಿ ಜನಪದ ಸಂಸ್ಕೃತಿ ಹಾಸುಹೊಕ್ಕಾಗಿದೆ. ಜಿಲ್ಲೆಯ ಕಲಾವಿದರು ದೇಶ-ವಿದೇಶಗಳಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದಾರೆ. ಈ ಹಿಂದೆ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣಗಳ ಮುಖಾಂತರ ಕಲಾವಿದರಿಗೆ ಹೆಚ್ಚಿನ ಅವಕಾಶ ದೊರಕುತ್ತಿದ್ದು, ಕಲಾವಿದರು ಇದರ ಸದುಪಯೋಗಪಡಿದುಕೊಳ್ಳಬೇಕುʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಂಗಾಯಣ ಕಲಬುರಗಿ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ʼಗಡಿಯಲ್ಲಿ ಏನೇ ಸಮಸ್ಯೆಗಳಿದ್ದರೂ ಕೂಡಾ ಕಲಾ ಪ್ರದರ್ಶನದಲ್ಲಿ ಯಾವುದೇ ಕೊರತೆಯಿಲ್ಲ. ಇಂತಹ ಉತ್ಸಾಹ ಕಂಡು ಬೀದರ ಜಿಲ್ಲಾ ಕಲಾವಿದರಿಗೆ
ಪ್ರೋತ್ಸಾಹಿಸುತ್ತೇನೆ. ದಕ್ಷಿಣ ಕರ್ನಾಟಕದಲ್ಲಿ ಕೆಲವೇ ಜನರಿದ್ದರೂ ಇಡೀ ರಾಜ್ಯದ ತುಂಬಾ ಪ್ರಚಾರ ಮಾಡಿಕೊಳ್ಳುತ್ತಾರೆ. ಆದರೆ, ಬೀದರನಲ್ಲಿ ಸಾವಿರಾರು ಜನರು ಸೇರಿ ನಾಟಕ ಪ್ರದರ್ಶನಗೈದರೂ ರಾಜಧಾನಿಗೆ ತಲುಪುವುದಿಲ್ಲ. ಹೀಗಾಗಿ ಇಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಪ್ರತಿಭಾವಂತ ಕಲಾವಿದರನ್ನು ಗುರುತಿಸುವ ಕೊರತೆಯಿದ್ದು, ಅದನ್ನು ಸರಿಪಡಿಸುತ್ತಿದ್ದೇವೆʼ ಎಂದು ತಿಳಿಸಿದರು.

ʼಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾವಿದರ ಸಹಕಾರದೊಂದಿಗೆ ಶಾಲಾ-ಕಾಲೇಜುಗಳಲ್ಲಿ ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಶಾಲಾ ಮಟ್ಟದಿಂದಲೇ ಮಕ್ಕಳಲ್ಲಿ ದೇಶಿ ಸಂಸ್ಕೃತಿಯನ್ನು ಬಿಂಬಿಸುವ ನಾಟಕ, ರಂಗಗೀತೆ ಮತ್ತು ಜನಪದ ಸಾಹಿತ್ಯದ ಕುರಿತು ಅಭಿರುಚಿ ಹುಟ್ಟಿಸುವ ಕಾರ್ಯ ಮಾಡಲಿದ್ದೇವೆʼ ಎಂದರು.
ಹಿರಿಯ ರಂಗಕರ್ಮಿ ಪ್ರೊ.ಸಂಗ್ರಾಮ ಎಂಗಳೆ ವಿಶೇಷ ಉಪನ್ಯಾಸ ನೀಡಿ, ʼಇಂದಿನ ಜಾಗತಿಕರಣ, ಆಧುನಿಕರಣ ಯುಗದಲ್ಲಿ ಕಲೆ ಮತ್ತು ಕಲಾವಿದರು ಅಳಿವಿನಂಚಿನಲ್ಲಿದ್ದಾರೆ. ಹೆಚ್ಚಿನ ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಜನಪದ ಕಲೆ ಉಳಿಸಬೇಕಿದೆ. ರಂಗಾಯಣ ಹೊಸ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆʼ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಪ್ರಮುಖರಾದ ವಿಷ್ಣುಕಾಂತ ಬಿಜೆ, ಕಾಶಿನಾಥ ಚಲ್ವಾ, ಎಂ.ಎಸ್.ಮನೋಹರ, ಮಾರುತಿ ಬೌದ್ಧೆ ಸೇರಿದಂತೆ ಹಲವರು
ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಆ.1ರಂದು ಅರೆಬೆತ್ತಲೆ ಮೆರವಣಿಗೆ; ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಹಿರಿಯ ಕಲಾವಿದ ಶಂಭುಲಿಂಗ ವಾಲದೊಡ್ಡಿ ರಂಗಗೀತೆಗಳ ಗಾಯನ ನಡೆಸಿಕೊಟ್ಟರು. ಕಲಾವಿದ ಮಲ್ಲಿಕಾರ್ಜುನ ಸ್ವಾಮಿ ನಾಡಗೀತೆ ಮತ್ತು ವಚನ ಸಂಗೀತ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಸ್.ಜೋಶಿ ನಿರೂಪಿಸಿದರು.





