ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ. ಅವರ ಜೀವನ ಮತ್ತು ವಚನಗಳ ಅಧ್ಯಯನ ಮಾಡಿದರೆ, ನಮ್ಮ ಬದುಕನ್ನು ಹೇಗೆ ಉನ್ನತೀಕರಿಸಿಕೊಳ್ಳಬೇಕು ಎಂಬುದು ತಿಳಿಯುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ʼವಚನ ದರ್ಶನʼ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ʼಮುಂಜಾನೆಯ ಮಂಜಿನಲ್ಲಿ ಮುಂದಿನ ದಾರಿ ಕಾಣುವುದಿಲ್ಲ, ಸೂರ್ಯನ ಕಿರಣಗಳು ಬಂದಾಗ ಮಂಜು ಸರಿದು ದಾರಿ ಸ್ಪಷ್ಟವಾಗಿ ಕಾಣುತ್ತದೆ. ಬದುಕಿನಲ್ಲಿ ಅನೇಕ ಜಂಜಡ ತೊಂದರೆಗಳು ಅಶಾಂತಿ ನೆಲೆ ಮಾಡಿ ಮುಂದಿನ ದಾರಿ ಕಾಣದಿದ್ದಾಗ,
ಪ್ರವಚನಗಳ ಮೂಲಕ ಜ್ಞಾನ ಸೂರ್ಯನ ಕಿರಣಗಳಿಂದ ಬದುಕಿನ ಮುಂದಿನ ದಾರಿ ಕಾಣುತ್ತದೆ. ಹಾಗಾಗಿ ಇಂತಹ ಪ್ರವಚನಗಳು ನಮ್ಮ ಬದುಕಿಗೆ ಅತ್ಯವಶ್ಯʼ ಎಂದು ತಿಳಿಸಿದರು.
ʼಡಿ.21ರ ವರೆಗೆ ಪ್ರಭುಲಿಂಗ ಸ್ವಾಮೀಜಿ ಅವರು ʼವಚನ ದರ್ಶನʼ ವಿಷಯದ ಮೇಲೆ ಬೆಳಕು ಚೆಲ್ಲಲ್ಲಿದ್ದು ಜಿಲ್ಲೆಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನದ ಸದುಪಯೋಗ ಪಡೆದು ಕೊಳ್ಳಬೇಕುʼ ಎಂದು ಕೋರಿದರು.
ಪ್ರವಚನಕಾರರಾದ ಪ್ರಭುಲಿಂಗ ದೇವರು ಮಾತನಾಡಿ, ʼಮನೆಯಲ್ಲಿ ಕಸ ಬಿದ್ದಾಗ ಪ್ರತಿದಿನ ಸ್ವಚ್ಛಪಡಿಸಿಕೊಳ್ಳುವಂತೆ, ಮನದ ಮೈಲಿಗೆಯನ್ನು ತೊಳೆಯಲು ಇಂತಹ ಪ್ರವಚನಗಳು ಪರಿಣಾಮಕಾರಿ ಕೆಲಸವನ್ನು ಮಾಡುತ್ತವೆʼ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂಗಮೇಶ ಗಾಮಾ ಮಾತನಾಡಿ, ʼಶರಣರ ಮಹಾತ್ಮರ ಬದುಕು ಅವರ ನಡೆ- ನುಡಿಗಳು ನಮ್ಮ ಬದುಕಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಆದ್ದರಿಂದ ಜನತೆ ಹೆಚ್ಚು ಇಂತಹ ಪ್ರವಚನಗಳನ್ನು ಆಲಿಸಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ವಚನ ಸಾಹಿತ್ಯದಿಂದ ಸಾಂಸ್ಕೃತಿಕ ಶಕ್ತಿ ಹೆಚ್ಚಳ : ದೀಪ್ತಾ ಭಾಸ್ತಿ
ಚನ್ನಬಸವಾಶ್ರಮ ಪರಿಸರದ ಸಂಚಾಲಕ ವಿಶ್ವನಾಥಪ್ಪ ಬಿರಾದರ್ಬ ಸವಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಮರೆ ಅವರು ಧರ್ಮ ಗ್ರಂಥ ಪಠಣ ಮಾಡಿದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಶಿವಕುಮಾರ ಕಮಠಾಣೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.





