ಸಿದ್ಧರಾಮಯ್ಯ ಅವರು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸೂತ್ರ ಅಳವಡಿಸಿಕೊಂಡಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆಗಳಾಗುತ್ತವೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಮಾಳಗೆ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಮಂಗಳವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೋಷಿತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ಮೀಸಲಾತಿ ಸಿಗಬೇಕೆಂದು ಸಮೀಕ್ಷೆ ಮಾಡಿಸಲಾಗಿತ್ತು. ಸದ್ಯ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿ ಕಾಂತರಾಜು ವರದಿ ಮೂಲೆಗುಂಪು ಮಾಡುವ ಪ್ರಯತ್ನ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿದೆ. ಇದಕ್ಕೆಲ್ಲ ಡಿ.ಕೆ.ಶಿವಕುಮಾರ ಅವರೇ ಕಾರಣʼ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾದರೆ ಕಾಂತರಾಜು ವರದಿ ಜಾರಿಯಾಗುತ್ತೆ ಎನ್ನುವ ವಿಶ್ವಾಸ ನಮಗಿಲ್ಲ. ಶೋಷಿತರಿಗೆ, ದಲಿತರಿಗೆ, ಹಿಂದುಳಿದವರಿಗೆ ಮೇಲೆತ್ತುವ ಕಾರ್ಯ ಮಾಡುತ್ತಾರೆ ಎನ್ನುವ ಭರವಸೆಯಿಂದಲೇ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಬೆಂಬಲಿಸಿ ಮತ ಹಾಕಿದ್ದಾರೆ. 16 ಬಾರಿ ಬಜೇಟ್ ಮಂಡನೆ ಮಾಡಿ, ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದುʼ ಎಂದರು.
ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಮಾತನಾಡಿ, ʼರಾಜ್ಯದಲ್ಲಿ ಮನುವಾದಿಗಳ ಮತ್ತು ಸಂವಿಧಾನದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಐದು ವರ್ಷ ಸಿದ್ಧರಾಮಯ್ಯನವರೇ ಸಿಎಂ ಇರಬೇಕೆಂಬ ಇಚ್ಚೆಯನ್ನು ಒಪ್ಪಿ ಜನರು ಮತ ಹಾಕಿದ್ದಾರೆ. ಈಗ ಷಡ್ಯಂತ್ರದಿಂದ ಅವರನ್ನು ಕೆಳಗಿಳಿಸಿ ಅರಾಜಕತೆ, ಅಶಾಂತಿ ಮೂಡಿಸುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಸಿಎಂ ಬದಲಾವಣೆಯಾದರೆ ನಂತರ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಕಾಂಗ್ರೆಸ್ ಹೈಕಮಾಂಡ್ ಸದ್ಯ ನಡೆಯುತ್ತಿರುವ ಗೊಂದಲಕ್ಕೆ ತೆರೆ ಎಳೆಯಬೇಕುʼ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಮಾತನಾಡಿ, ʼ2028ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಸಿದ್ಧರಾಮಯ್ಯ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರೆಸಬೇಕು. ಇಲ್ಲದಿದ್ದರೆ ಬಿಹಾರದಲ್ಲಿ ಕಾಂಗ್ರೆಸ್ ಸೋಲುಂಡಂತೆ ರಾಜ್ಯದಲ್ಲಿಯೂ ಅದೇ ಸ್ಥಿತಿ ಬರುತ್ತದೆʼ ಎಂದರು.
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ್ ಮಾತನಾಡಿ, ʼಓಬಿಸಿ ನಾಯಕ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿದರೆ ಹೋರಾಟ ಮಾಡಲಾಗುವುದುʼ ಎಂದರು.
ಇದನ್ನೂ ಓದಿ : ನವೆಂಬರ್ ಕ್ರಾಂತಿ ಎಂದ ಮಾಧ್ಯಮಗಳಿಗೆ ಖಡಕ್ಎಚ್ಚರಿಕೆ ಕೊಟ್ಟ ಡಿಕೆಶಿ; ಸಿಎಂ ಬದಲಾವಣೆ ಆಗಬೇಕಿರೋದು ಯಾರಿಗೆ?
ಒಕ್ಕೂಟದ ಮುಖಂಡರಾದ ತಾನಾಜಿ ಸಗರ, ತುಕಾರಾಮ ಚಿಮಕೊಡೆ, ಸುಭಾಷ ಹಮಿಲಪುರೆ, ಶೈಲೇಂದ್ರ ಹಿಬಾರೆ, ಶಾಂತಕುಮಾರ, ರಾಜಕುಮಾರ, ಪುಂಡಲಿಕರಾವ, ಪ್ರದೀಪ ನಾಟೆಕಾರ್ ಸೇರಿದಂತೆ ಹಲವರಿದ್ದರು.






