ಪತ್ರಕರ್ತ ರವಿ ಸ್ವಾಮಿ ಅವರ ಸಮಯ ಪರಿಪಾಲನೆ ಹಾಗೂ ಪ್ರಾಮಾಣಿಕತೆ ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಹೇಳಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತಿಚೀಗೆ ಹೃದಯಘಾತಕ್ಕೆ ತುತ್ತಾಗಿ ನಮ್ಮನ್ನಗಲಿದ ರವಿ ಸ್ವಾಮಿ (ರೇವಣಸಿದ್ದಯ್ಯ ಸ್ವಾಮಿ ಹೆಡಗಾಪುರ) ಅವರ ಶೃದ್ದಾಂಜಲಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ರವಿ ಸ್ವಾಮಿ ತನ್ನ ಮೂರುವರೆ ದಶಕಗಳ ಸುಧೀರ್ಘ ಪತ್ರಿಕಾ ರಂಗದ ಸೇವೆಯಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದ್ದರು. ಸ್ವಾಭಿಮಾನ, ಮಿತ ಭಾಷೆ, ಸಹಕಾರ ಮನೋಭಾವ ಅವರ ಜೀವನದ ಬಂಡವಾಳವಾಗಿದ್ದವು. ಕಿರಿಯರಿಗೆ ಮಾರ್ಗದರ್ಶನ ಹಾಗೂ ಹಿರಿಯರಿಗೆ ಸಹಾಯ ಮಾಡುವುದು ಅವರ ನಿತ್ಯದ ಕಾರ್ಯವಾಗಿತ್ತು. ದೊಡ್ಡವರು, ಚಿಕ್ಕವರು ಎಂಬುದನ್ನು ಲೆಕ್ಕಸಿದೆ ಎಲ್ಲರಿಗೂ ದೈನ್ಯತಾ ಭಾವದಿಂದ ಮಾತನಡಿಸುವ ಸ್ವಭಾವ ಅವರದ್ದಾಗಿತ್ತು. ಇಂಥ ಅಪರೂಪದ ಪತ್ರಕರ್ತನನ್ನು ಕಳೆದುಕೊಂಡು ಜಿಲ್ಲಾ ಪತ್ರಿಕಾ ಬಳಗ ಬಡವಾಗಿದೆʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನಂದ ದೇವಪ್ಪ ಮಾತನಾಡಿ, ‘ಕಳೆದ 38 ವರ್ಷಗಳಿಂದ ಜನದನಿ ಪರಿವಾರದ ಸದಸ್ಯನಾಗಿ ಗುರ್ತಿಸಿಕೊಂಡಿದ್ದ ರವಿ ಸ್ವಾಮಿ ಹಿಡಿದ ಕಾಯಕ, ಬಿಡದೆ ಅದನ್ನು ಚಾಚೂ ತಪ್ಪದೇ ಮುಗಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಿಗೆ ತಾನು ಇಹಲೋಕ ತ್ಯಜಿಸುತ್ತೇನೆಂಬ ಅರಿವಿನೊಂದಿಗೆ ಭವಿಷ್ಯದಲ್ಲಿ ಎಲ್ಲರಿಗೆ ಅನುಕುಲ ಆಗುವ ರೀತಿಯಲ್ಲಿ ನೀಟಾಗಿ ತಿಳಿಯುವಂತೆ ಬರೆದಿಟ್ಟಿರುವುದು ನಿಜಕ್ಕೂ ಆಶ್ಚರ್ಯ ತಂದಿದೆʼ ಎಂದರು.
ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿದರು. ಪತ್ರಕರ್ತರಾದ ಬಸವರಾಜ ಪವಾರ, ಅಬ್ದುಲ್ ಖದೀರ್, ವಿಜಯಕುಮಾರ ಸೋನಾರೆ, ಭೀಮರಾವ ಬಿದರಕರ್, ಉಮೇಶ ಉಂಡೆ, ಸುಧಾರಾಣಿ, ಎಂ.ಪಿ ಮುದಾಳೆ ಹಾಗೂ ಇತರರು ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ : ಬೀದರ್ | ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ : ಗುರುಬಸವ ಪಟ್ಟದ್ದೇವರು
ಪತ್ರಕರ್ತರಾದ ಸುನಿಲಕುಮಾರ ಕುಲಕರ್ಣಿ, ಆಧೀಶ ವಾಲಿ, ಸಂತೋಷ ಚಟ್ಟಿ, ವಿಜಯಕುಮಾರ ಸೂರ್ಯನ್, ಸಂಜುಕುಮಾರ ಸ್ವಾಮಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು. ಪತ್ರಕರ್ತ ಶಿವಕುಮಾರ ಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ನಾಗಶೆಟ್ಟಿ ಧರಂಪುರ ವಂದಿಸಿದರು.





