ವಚನಾಮೃತ ಕನ್ನಡ ಸಂಘದಿಂದ ನ. 22, 23ರಂದು ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗಮಂದಿರದಲ್ಲಿ ʼವಚನ ಸಾಹಿತ್ಯೋತ್ಸವʼ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ತಿಳಿಸಿದರು.
ನ. 22ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾಗರ್ ಆಶಯ ನುಡಿ ಆಡುವರು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜನಪದ ಸಾಹಿತ್ಯದಲ್ಲಿ ಶರಣರು’, ‘ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದ ವೈಶಿಷ್ಟ’, ‘ಹರಿಹರನ ರಗಳೆಗಳಲ್ಲಿ ಶರಣರು’, ‘ ಶೂನ್ಯ ಸಂಪಾದನೆಗಳ ಸಾಂಸ್ಕೃತಿಕ ಪರಿಸರ’ ಸೇರಿದಂತೆ ಒಟ್ಟು ಆರು ಗೋಷ್ಠಿಗಳು ನಡೆಯಲಿವೆ. ಸಾಹಿತಿಗಳಾದ ಅಮರೇಶ ನುಗಡೋಣಿ, ವಿಕ್ರಮ್ ವಿಸಾಜಿ, ಶಿವಲಿಂಗ ಹೇಡೆ, ಜಯದೇವಿ ಜಂಗಮಶೆಟ್ಟಿ, ಕೆ.ರವೀಂದ್ರನಾಥ ಸೇರಿದಂತೆ ಹಲವು ಸಾಹಿತಿಗಳು ವಿಷಯ ಮಂಡಿಸುವರುʼ ಎಂದು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ಸಂಸದ ಸಾಗರ ಖಂಡ್ರೆ ವಹಿಸುವರು. ಮೈಸೂರಿನ ಹಿರಿಯ ಸಾಹಿತಿ ಶಶಿಕಲಾ ವಸ್ತ್ರದ ಸಮಾರೋಪ ಭಾಷಣ ಮಾಡುವರು. ವಿವಿಧ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಜಿ ಆಹ್ವಾನ
ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಸಂಘದ ಪದಾಧಿಕಾರಿಗಳಾದ ಸಂತೋಷ ಮಂಗಳೂರೆ, ಭಗವಂತಪ್ಪ ಅಣ್ಣೆಪ್ಪನೋರ, ನರಸಾರೆಡ್ಡಿ, ಕಲ್ಯಾಣರಾವ್ ಹೊಸಖಂಡೆ, ಸಂತೋಷ ಸೋಲಪುರೆ ಹಾಜರಿದ್ದರು.





