ಭಾಲ್ಕಿ, ಹುಮನಾಬಾದ ಮತ್ತು ಚಿಟಗುಪ್ಪಾ ತಾಲೂಕುಗಳ ವ್ಯಾಪ್ತಿಯ ಎಲ್ಲ ಖಾಸಗಿ ಶಾಲೆ ಕಾಲೇಜಿನ ವಾಹನಗಳಲ್ಲಿ ಅನುಮತಿಸಿದ ಆಸನ ವ್ಯವಸ್ಥೆಗಿಂತ ಹೆಚ್ಚಿನ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದು ಕಂಡು ಬಂದಲ್ಲಿ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೀದರ್ ಜಿಲ್ಲೆ ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶಿಸಿದ್ದಾರೆ.
ಖಾಸಗಿ ಒಡೆತನದಲ್ಲಿ ನಡೆಸುತ್ತಿರುವ ಬಹುತೇಕ ಶಾಲಾ ಕಾಲೇಜು ವಾಹನಗಳು ಸುರಕ್ಷತಾ ನಿಯಮ ಪಾಲಿಸುತ್ತಿಲ್ಲ. ಇದರಿಂದ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿದೆ. ಕೂಡಲೇ ಸಾರಿಗೆ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ನಿಯಮ ಪಾಲಿಸದ ಶಾಲಾ-ಕಾಲೇಜು ವಾಹನಗಳ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

“ತಮ್ಮ ಶಾಲಾ ಕಾಲೇಜಿನ ಹೆಸರಿನಡಿಯಲ್ಲಿ ನೊಂದಣೆಯಾಗಿ ಚಾಲನೆಯಾಗುತ್ತಿರುವ ಶಾಲಾ ವಾಹನಗಳಲ್ಲಿ ನಿಗದಿತ ಆಸನಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಪ್ರಯಾಣಿಸಲು ಅವಕಾಶ ನೀಡುತ್ತಿರುವದಾಗಿ ಮತ್ತು ಶಾಲಾ ವಾಹನ ಚಾಲಕರು ನಿಷ್ಕಾಳಜಿಯಿಂದ ವಾಹನ ಚಲಾಯಿಸುತ್ತಿರುವ ಕುರಿತು ಗ್ರಾಮಸ್ಥರಿಂದ ಆರೋಪ ವ್ಯಕ್ತವಾಗಿದೆ. ಹಾಗಾಗಿ ಈ ವಿಷಯವನ್ನು ಇಲಾಖೆಯು ತುಂಬಾ ಗಂಭೀರ ಪ್ರಕರಣವೆಂದು ಪರಿಗಣಿಸಿದೆ” ಎಂದು ಖಾಸಗಿ ಶಾಲೆ ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯಯವರಿಗೆ ತಿಳಿಸಿದ್ದಾರೆ.
“ತಮ್ಮ ಶಾಲಾ ಕಾಲೇಜಿನ ವಾಹನಗಳ ಚಾಲನೆಗೆ ಚಾಲನಾ ಅನುಜ್ಞಾಪತ್ರ ಹೊಂದಿರುವ ನುರಿತ ಅನುಭವಿ ಚಾಲಕರನ್ನು ನೇಮಿಸಿಕೊಂಡು ವಾಹನಕ್ಕೆ ಅನುಮತಿಸಿದ ಆಸನ ವ್ಯವಸ್ಥೆಗೆ ಇರುವಷ್ಟೇ ವಿದ್ಯಾರ್ಥಿಗಳನ್ನು ಕೂರಿಸಬೇಕು” ಎಂದು ಸೂಚನೆ ನೀಡಿದ್ದಾರೆ.
ಘಟನೆ ಹಿನ್ನೆಲೆ
“ಭಾಲ್ಕಿ ತಾಲೂಕಿನಾದ್ಯಂತ ಸಾವಿರಾರು ಮಕ್ಕಳು ಖಾಸಗಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಲಕ್ಷಾಂತರ ರೂ. ಶುಲ್ಕ ಪಾವತಿಸುತ್ತಿದ್ದಾರೆ. ಆದರೆ, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ವಾಹನಗಳಲ್ಲಿ ಸುರಕ್ಷತಾ ನಿಯಮ ಪಾಲನೆ ಮಾಡುತ್ತಿಲ್ಲ. ನಿಯಮಕ್ಕೂ ಮೀರಿ ಮಕ್ಕಳನ್ನು ಖಾಸಗಿ ಶಾಲಾ ವಾಹನದಲ್ಲಿ ಹೊತ್ತೊಯ್ಯಲಾಗುತ್ತಿದೆ. ಜತೆಗೆ ಅತಿವೇಗವಾಗಿ ವಾಹನ ಚಾಲನೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವ ಆತಂಕ ಎದುರಾಗಿದೆ” ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ
“ಕೆಲ ದಿನಗಳ ಹಿಂದೆ ಡೈಮಂಡ್ ಶಿಕ್ಷಣ ಸಂಸ್ಥೆಯ ಖಾಸಗಿ ವಾಹನ ಸಾರಿಗೆ ಬಸ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸುವ ಮೊದಲು ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಿಯಮ ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ” ಎಂದು ಮನವಿಯಲ್ಲಿ ಎಚ್ಚರಿಸಿದ್ದರು.
ಕರವೇ ದೂರಿನ ಹಿನ್ನೆಲೆಯಲ್ಲಿ ಭಾಲ್ಕಿ ಭಾಗದ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದು, ಆದೇಶ ಹೊರಡಿಸಿದ್ದಾರೆ.
ಸಂಘಟನೆಯ ಪ್ರಮುಖರುಗಳಾದ ಗಿರೀಶ್ ಬಿರಾದಾರ್, ಬಸವರಾಜ ಕಾರಬಾರಿ, ಕಾಶಿನಾಥ ಚಳಕಾಪೂರೆ, ಅನಿಕೇತ ಶೇರಿಕಾರ್, ಚೇತನ್ ಬಿರಾದಾರ್ ಸೇರಿದಂತೆ ಇತರರು ಇದ್ದರು.




