12ನೇ ಶತಮಾನದ ಬಸವಾದಿ ಶರಣರು ಸಮಾಜದಲ್ಲಿ ನೆಲೆಯೂರಿದ ಅಸಮಾನತೆ ತೊಡೆದು ಹಾಕಿ, ಸಮಾನತೆ ಸಹೋದರತೆಯ ಸದ್ಭಾವನೆ ಬೆಳೆಸುವ ಮೂಲಕ ಮಾನವೀಯತೆ ಮೂಡಿಸಿದರು ಎಂದು ಔರಾದ್ ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ನುಡಿದರು.
ತಾಲೂಕಿನ ಎಕಲಾರ ಗ್ರಾಮದ ಶಿವಪಾರ್ವತಿ ದೇವಸ್ಥಾನದ ಆವರಣದಲ್ಲಿ ಈಚೆಗೆ ನಡೆದ ಬಸವ ಬಾಂಧವ್ಯ ಬಳಗದಿಂದ ಹಮ್ಮಿಕೊಂಡಿರುವ ʼವಚನ ವೈಭವʼ ಕಾರ್ಯಕ್ರಮದ ಮೆರವಣಿಗೆ ಉದ್ಘಾಟನೆ ಮಾತನಾಡಿ, ʼಮನುಷ್ಯ ನಿರ್ಮಿತವಾದ ಜಾತಿಯ ಸಂಕೋಲೆಯಿಂದ ಹೊರತಂದು, ಇವನಾರವ ಇವನಾರವ ಎನಿಸದೇ ಎಲ್ಲರು ನಮ್ಮವರೇ ಎಂದು ಅಪ್ಪಿಕೊಂಡು ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಿಸಿದರುʼ ಎಂದು ತಿಳಿಸಿದರು.
ಹಿರಿಯರಾದ ವೈಜಿನಾಥ ಬುಟ್ಟೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಮನೆಯಲ್ಲಿರುವ ಅಣ್ಣ ತಮ್ಮಂದಿರಲ್ಲಿಯೇ ವೈಮನಸು, ವಿರಸ, ಒಳಜಗಳ ಕಾಣುತ್ತೇವೆ. ನಮ್ಮ ನೆರೆಹೊರೆಯವರು ಒಬ್ಬರಿಗೊಬ್ಬರು ಸಮಯ ನೀಡದೇ ಇರುವಷ್ಟು ಒತ್ತಡದಲ್ಲಿರುವ ಈ ಸಂದರ್ಭದಲ್ಲಿ 70ಕ್ಕೂ ಅಧಿಕ ಕುಟುಂಬಗಳು ಒಂದೆಡೆ ಸೇರಿ ಆಯೋಜಿಸಿದ ಈ ಅಪರೂಪದ ಕಾರ್ಯಕ್ರಮ ಕಾರ್ಯ ಶ್ಲಾಘನೀಯ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಬಳಗದ ತಂದೆ ತಾಯಿ, ಅಜ್ಜ-ಅಜ್ಜಿ ಮೊಮ್ಮಕ್ಕಳು ಸೇರಿರುವುದು ಸಂಬಂಧಗಳ ಮೌಲ್ಯ ಹೆಚ್ಚಿಸಲಿದೆʼ ಎಂದು ಬಣ್ಣಿಸಿದರು.

ವಚನ ಚಾರಿಟೇಬಲ್ ಸೊಸೈಟಿ ಜಿಲ್ಲಾಧ್ಯಕ್ಷ ಶಿವಶಂಕರ ಟೋಕರೆ ಮಾತನಾಡಿ, ʼ ಇಂದಿನ ಆಧುನಿಕ ಕಾಲದಲ್ಲಿ ಮನುಷ್ಯ ಭೌತಿಕವಾಗಿ ಶ್ರೀಮಂತನಾಗಿದ್ದಾನೆ. ಐಷಾರಾಮಿ ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳು ಲಭಿಸುತ್ತಿವೆ, ಆದರೆ ನೆಮ್ಮದಿ ಬದುಕಿಗೆ ಅಗತ್ಯವಾಗಿರುವ ಶಾಂತಿ, ಮಾನವೀಯ ಮೌಲ್ಯಗಳ ಕೊರತೆ ಎದುರಾಗಿದೆ. ವಚನ ವೈಭವ ಕಾರ್ಯಕ್ರಮ ಕುಟುಂಬಗಳಲ್ಲಿ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡಿ ಸಂಬಂಧಗಳ ವೃದ್ಧಿಗೆ ಸಹಕಾರಿಯಾಗುತ್ತದೆ. ಬಸವಾದಿ ಶರಣ ವಿಚಾರಧಾರೆಗಳಂತೆ ವಿವಿಧ ಜಾತಿ, ಧರ್ಮ, ಎನ್ನುವ ಭೇದ ಮರೆತು ಒಂದೇ ಪರಿವಾರು ಎನ್ನುವ ಭಾವ ಮೂಡಲಿʼ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಗನ್ನಾಥ ಮೂಲಗೆ ಮಾತನಾಡಿ, ʼಬಸವ ಬಾಂಧವ್ಯ ಬಳಗ ತಾಲೂಕಿನಾದ್ಯಂತ ಬಸವಾದಿ ಶರಣರ ತತ್ವ ಪ್ರಸಾರದೊಂದಿಗೆ, ಪ್ರತಿವರ್ಷ ವಚನ ವೈಭವ ಕಾರ್ಯಕ್ರಮದ ಮೂಲಕ ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳಿಗೆ ಮನೋರಂಜನೆ ಒದಗಿಸುವ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕವಾಗಿ ಗಟ್ಟಿ ಬಾಂಧವ್ಯ ಬೆಸೆಯುವ ಕಾರ್ಯಮಾಡುತ್ತಿದೆʼ ಎಂದು ತಿಳಿಸಿದರು.
ಡಾ.ಚನ್ನಬಸವ ಪಟ್ಟದೇವರ ವಿದ್ಯಾರ್ಥಿ ನಿಧಿ : ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಬೆನ್ನೆಲುಬಾಗಿ ನಿಂತಿರುವ ಬಳಗದ ಸದಸ್ಯರು ಪ್ರತಿವರ್ಷ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾಗುವ ಹತ್ತು ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂಪಾಯಿ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ ವಚನ ಚಾರಿಟೇಬಲ್ ಸೊಸೈಟಿಯ ಸಹಕಾರದೊಂದಿಗೆ ಬಸವ ಬಾಂಧವ್ಯ ಬಳಗವು ಡಾ. ಚನ್ನಬಸವ ಪಟ್ಟದೇವರ ವಿದ್ಯಾರ್ಥಿ ನಿಧಿ ಸ್ಥಾಪಿಸಿದೆ.
ಇದೆ ಸಂದರ್ಭದಲ್ಲಿ ಬಸವ ಬಾಂಧವ್ಯ ಬಳಗದ ಸಕ್ಸಸ್ ಕ್ಲಬ್ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಿ.ಇ ವಿದ್ಯಾರ್ಥಿನಿ ನಂದಿನಿ ಶಿವರುದ್ರಪ್ಪ ನವರಿಗೆ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಎಕಲಾರ ಗ್ರಾಮದ ಬಸವ ಮಂಟಪದಿಂದ ಶಿವಪಾರ್ವತಿ ಮಂದಿರದವರೆಗೆ ಸಾಂಸ್ಕೃತಿಕ ನಾಯಕ ಗುರುಬಸವಣ್ಣವನರ ಭವ್ಯವಾದ ಮೆರವಣಿಗೆ ನಡೆಯಿತು. ಎಲ್ಲರೂ ವಚನ ಗೀತೆಗಳಿಗೆ ಹೆಜ್ಜೆ ಹಾಕಿದರು. ಶಿಕ್ಷಕರಾದ ಗುರುನಾಥ ದೇಶಮುಖರವರ ನೇತೃತ್ವದಲ್ಲಿ ವಿವಿಧ ಕ್ರೀಡಾ ಚಟುವಟಿಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಇದನ್ನೂ ಓದಿ : ಮಾಧವ ಗಾಡ್ಗೀಳ್ ಸಮಿತಿಯ ವರದಿಯಲ್ಲೇನಿತ್ತು? ಸರ್ಕಾರಗಳೇ ಅಪಪ್ರಚಾರ ನಡೆಸಿ ಕಲ್ಲು ಹೊಡೆದದ್ದು ಯಾಕೆ?
ಔರಾದ್ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಸರುಬಾಯಿ ಘೂಳೆ, ಎಕಲಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಿತಾ ಶಿವಶಂಕರ ಮಣಗೆಂಪೂರೆ ಕಸಾಪ ಅಧ್ಯಕ್ಷ ಬಿ.ಎಂ.ಅಮರವಾಡಿ ಸೇರಿದಂತೆ ಪ್ರಮುಖರಾದ ಶಿವಕುಮಾರ ಸಾಲಿ, ಡಿ.ಡಿ.ಬೋಳಿಗಾವೆ, ಕಲ್ಲಪ್ಪಾ ದೇಶಮುಖ, ಶಿವರಾಜ ಶೆಟಕಾರ, ಸೂರ್ಯಕಾಂತ ವಲ್ಲೇಪೂರೆ, ಪ್ರಭುರಾವ ಡಿಗ್ಗಿ, ಶರಣಪ್ಪಾ ನಾಗಲಗಿದ್ದಿ, ಗಜಾನನ್ ಮಳ್ಳಾ, ಡಾ.ನಾಗೇಶ ಕೌಟಗೆ, ಬಸವರಾಜ ಶೆಟಕಾರ, ವಿರೇಶ ಅಲ್ಮಾಜೆ, ಮಲ್ಲಿಕಾರ್ಜುನ ಹಿಪ್ಪಳಗಾಂವೆ. ಗಣಪತಿ ಜೀರ್ಗೆ ಹಾಗೂ ಬಸವ ಬಾಂಧವ್ಯ ಬಳಗದ ಸದಸ್ಯರು ಭಾಗವಹಿಸಿದ್ದರು. ಬಳಗದ ಪ್ರಮುಖರಾದ ಮಲ್ಲಿಕಾರ್ಜುನ ಟಂಕಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಸತೀಷ ಮಜಗೆ ನಿರೂಪಿಸಿದರು, ಶಿವಕುಮಾರ ಪಾರಾ ಸ್ವಾಗತಿಸಿದರು, ಮಹಾನಂದಾ ಬಾಲರಾಜ ಎಂಡೆ ವಂದಿಸಿದರು.





