ಬಂಜಾರಾ ಸಮಾಜವು ಅನಕ್ಷರತೆ, ಅಂಧಶ್ರದ್ಧೆ ಮತ್ತು ಬಡತನದಂತಹ ನಾನಾ ಸಮಸ್ಯೆಗಳಿಂದ ಬಳಲಿತ್ತು. ಸಾಮಾಜಿಕ, ಆರ್ಥಿಕವಾಗಿ ತೀವ್ರ ಹಿಂದುಳಿದಿತ್ತು. ಅಂತಹ ಸಮಯದಲ್ಲಿ ಸಂತ ಸೇವಾಲಾಲ್ ಮಹಾರಾಜರು ಸಮಾಜದಲ್ಲಿ ಜಾಗೃತಿ ಮೂಡಿಸಿ, ಶಿಸ್ತು, ನೈತಿಕತೆ ಮತ್ತು ಸಮಾನತೆಯ ಸಂದೇಶ ಸಾರಿದರು ಎಂದು ಮಾಜಿ ಸಚಿವ, ಶಾಸಕ ಪ್ರಭು ಬಿ.ಚವ್ಹಾಣ ಹೇಳಿದರು.
ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಪ್ರಯುಕ್ತ ಭಾನುವಾರ ಘಮಸುಬಾಯಿ ತಾಂಡಾ ಬೋಂತಿಯ ಗೃಹ ಕಚೇರಿಯಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ʼಸಂತ ಸೇವಾಲಾಲ್ ಮಹಾರಾಜ ಅವರು ದೇಶ ಕಂಡ ಬಹುದೊಡ್ಡ ಸಂತ, ಮಹಾ ತಪಸ್ವಿ, ಬಂಜಾರಾ ಸಮುದಾಯದ ಧರ್ಮಗುರು, ಸಮಾಜ ಸುಧಾರಕರು. ವಿಶೇಷವಾಗಿ ಬಂಜಾರಾ ಸಮಾಜದ ಉನ್ನತಿಗೆ ಹುಟ್ಟಿ ಬಂದ ಅವತಾರ ಪುರುಷರಾಗಿದ್ದಾರೆʼ ಎಂದರು.
ʼದುಶ್ಚಟಗಳಿಗೆ ಸಿಲುಕಿದ್ದ ಅನೇಕರ ಜೀವನವನ್ನು ಅವರು ಸತ್ಸಂಗ, ಸನ್ಮಾರ್ಗ ಮತ್ತು ಉತ್ತಮ ಮೌಲ್ಯಗಳ ಮೂಲಕ ಪರಿವರ್ತಿಸಿದ್ದರು. ಸಮಾಜದಲ್ಲಿ ನೈತಿಕತೆ, ಸತ್ಯನಿಷ್ಠೆ, ಭಕ್ತಿ ಮತ್ತು ಶ್ರಮದ ಮಹತ್ವವನ್ನು ಸಾರಿದ್ದರು. ಅಂಧಶ್ರದ್ಧೆಗಳನ್ನು ತೊಲಗಿಸಿ, ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ಆತ್ಮಗೌರವದಿಂದ ಬದುಕುವಂತೆ ಕಲಿಸಿಕೊಟ್ಟ ಮಹಾನ್ ಗುರು ಅವರಾಗಿದ್ದರುʼ ಎಂದರು.
ʼಅನ್ಯಾಯ, ಶೋಷಣೆಯ ವಿರುದ್ಧ ಧೈರ್ಯವಾಗಿ ಹೋರಾಡಿ ಬಂಜಾರಾ ಸಮಾಜವನ್ನು ಸಂಘಟಿತಗೊಳಿಸಿದ್ದರು. ಅವರ ತತ್ವಾದರ್ಶಗಳು ಬಂಜಾರಾ ಸಮಾಜದಲ್ಲಿ ಒಗ್ಗಟ್ಟು ಮತ್ತು ಸ್ವಾವಲಂಬನೆಗೆ ದಾರಿದೀಪವಾಗಿವೆ. ಬಂಜಾರಾ ಸಮಾಜದ ಏಳಿಗೆಯಲ್ಲಿ ಸೇವಾಲಾಲ್ ಅವರ ಪಾತ್ರ ಪ್ರಮುಖವಾಗಿದೆ. ನನ್ನ ಊರಿನಲ್ಲಿ ಮಾತಾ ಜಗದಂಬಾ, ಸೇವಾಲಾಲ್ ಮಹಾರಾಜ ಮತ್ತು ಕುಲಗುರು ಡಾ.ರಾಮರಾವ ಮಹಾರಾಜರ ಮಂದಿರಗಳನ್ನು ನಿರ್ಮಿಸಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆʼ ಎಂದರು.
ʼಸೇವಾಲಾಲ್ ಮಹಾರಾಜರ ಜೀವನ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರ ತ್ಯಾಗ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಇನ್ನಷ್ಟು ಉನ್ನತಿಯಾಗಲು ಸಾಧ್ಯ. ಸೇವಾಲಾಲ್ ಅವರ ತತ್ವ ಸಿದ್ಧಾಂತಗಳು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆʼ ಎಂದು ನುಡಿದರು.
ಇದನ್ನೂ ಓದಿ : ಯಾದಗಿರಿ | ರಸ್ತೆ ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿ : ಸ್ಥಳದಲ್ಲಿಯೇ ಮೂವರು ಸಾವು
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಚಿನ ರಾಠೋಡ, ಸುಭಾಷ ರಾಠೋಡ, ಬಳವಂತ ಪವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





