ಔರಾದ್ ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿರುವ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಲೋಕಾರ್ಪಣೆ ಮಾಡಿದರು.
ಪಟ್ಟಣದ ಸರ್ಕಾರಿ ಆದರ್ಶ ಶಾಲೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ʼಫೆಬ್ರವರಿ 4ರಂದು ಗಡಿ ತಾಲೂಕಿನಲ್ಲಿ ನಡೆಯಲಿರುವ ಸಮ್ಮೇಳನವು ಮಾದರಿಯಾಗುವ ರೀತಿಯಲ್ಲಿ ರೂಪಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ಸಮ್ಮೇಳನ ಯಶಸ್ವಿಯಾಗಲಿʼ ಎಂದು ಹಾರೈಸಿದರು.

ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ʼನಾಡಿನ ಭಾಷೆ, ಜನಪದ ಪರಂಪರೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಜೀವಾಳವಾಗಿವೆ. ಔರಾದ್ ಸಾಹಿತ್ಯ ಸಮ್ಮೇಳನವು ಹೊಸ ಚಿಂತನೆ, ವಿನೂತನ ಕಾರ್ಯಕ್ರಮಗಳು ಮತ್ತು ಸಾಹಿತ್ಯಾಸಕ್ತರ ವಿಶಾಲ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆʼ ಎಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, ʼಔರಾದ್ ತಾಲೂಕಿನ ಏಳನೇ ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗುವ ರೀತಿಯಲ್ಲಿ ಯಶಸ್ವಿಗೊಳಿಸೋಣ. ಈಗಾಗಲೇ ಶೇ.70ರಷ್ಟು ಸಮ್ಮೇಳನದ ಸಿದ್ಧತೆ ಮಾಡಲಾಗಿದೆ. ಆಹ್ವಾನ ಪತ್ರಿಕೆ ಸಿದ್ದಗೊಳ್ಳುತ್ತಿದೆ. ಸಮ್ಮೇಳನದ ವಿವಿಧ ಸಮಿತಿಗಳು ರಚನೆಯಾಗಿದ್ದು, ಆಯಾ ಸಮಿತಿಗಳನ್ನು ಹಂಚಿಕೆ ಮಾಡಲಾಗಿದೆ. ಸಮ್ಮೇಳನ ನಡೆಯುವ ಸ್ಥಳ ಗೊತ್ತು ಮಾಡಲಾಗಿದೆ. ಶಾಸಕ ಪ್ರಭು ಚವ್ಹಾಣ ಅವರನ್ನು ಸರ್ವಾನುಮತದಿಂದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುತ್ತಿದೆʼ ಎಂದು ಮಾಹಿತಿ ನೀಡಿದರು.
ಈ ವೇಳೆ ಡಿಡಿಪಿಐ ಎಸ್.ಜಿ ಸುರೇಶ, ಬಿಇಒ ಬಿಜೆ ರಂಗೇಶ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ, ಎಸ್ಸಿ ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಡೋಂಗರೆ ಸೇರಿದಂತೆ ಪ್ರಮುಖರಾದ ಗುರುನಾಥ ದೇಶಮುಖ, ಸಂಜೀವಕುಮಾರ ಶೆಟಕಾರ, ಬಸವರಾಜ ಶೆಟಕಾರ, ಮಾದೇವ ಚಿಟಗೀರೆ, ಅಶೋಕ ಶೆಂಬೆಳ್ಳಿ, ಅಂಬಾದಾಸ ನಳನೆ, ಸಂಜುಕುಮಾರ ಬಿರಾದಾರ್, ಮಹಾದೇವ ಶಿಂಧೆ, ಫೈಯಾಜ್, ಲೋಕೇಶ, ರಾಜಕುಮಾರ ಹಲ್ಮಡಗೆ, ರವಿ ಡೋಳೆ ಸೇರಿದಂತೆ ಮತ್ತಿತರರಿದ್ದರು.
ಇದನ್ನೂ ಓದಿ : ಬೀದರ್ | ಸೂರಿಗಾಗಿ ಈ ಅಲೆಮಾರಿ ಜನಾಂಗ ಇನ್ನೆಷ್ಟು ವರ್ಷ ಹೋರಾಟ ನಡೆಸಬೇಕು?





