ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಜನೋಪಯೋಗಿಯಾದ ‘ಜೀವವೈವಿಧ್ಯ ಉದ್ಯಾನ’ ನಿರ್ಮಾಣ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿ, ಅಗತ್ಯ ಹಣಕಾಸು ಮಂಜೂರು ಮಾಡಿರುವುದು ಅತ್ಯಂತ ಹರ್ಷ ತಂದಿದೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ʼ12ನೆಯ ಶತಮಾನದಲ್ಲಿ ಮಹಾ ದಾರ್ಶನಿಕ, ಜಗತ್ತು ಕಂಡ ಮೇರು ಚಿಂತಕ ಅಪ್ಪ ಬಸವಣ್ಣನವರು ‘ಮನುಷ್ಯನಿಂದ ಮನುಷ್ಯನ ಶೋಷಣೆ ಇಲ್ಲದ ಸಮಾನತೆ ಮತ್ತು ಸ್ವಾಭಿಮಾನಿ ಸಮಾಜ ಕಟ್ಟಲು’ ಶ್ರಮಿಸಿದರು. ಅವರ ಹೋರಾಟ, ಆಶಯ, ಚಿಂತನೆಗಳು ಸಾರ್ವಕಾಲಿಕವಾಗಿವೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಬಸವಣ್ಣನವರ ಮೇರು ವ್ಯಕ್ತಿತ್ವ ಹಾಗೂ ಚಿಂತನೆಯನ್ನು ಚಿರಸ್ಥಾಯಿಯಾಗಿಸಲು ಸಮಾಜವಾದಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಅನೇಕಾನೇಕ ಕಾರ್ಯಗಳು ಮಾಡಿದೆ, ಮಾಡುತ್ತಲೇ ಇದೆ. ಈಗ ಜನಪರ-ಜನಪ್ರಿಯ ಸಚಿವ ಈಶ್ವರ ಖಂಡ್ರೆಯವರ ಕಾಳಜಿ, ಒತ್ತಾಸೆಯ ಫಲದಿಂದಾಗಿ ಬಸವಣ್ಣನವರ ಹೆಸರಿನಲ್ಲಿ ‘ಜೀವವೈವಿಧ್ಯ ಉದ್ಯಾನ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ ಕಾರ್ಯಕ್ಕೆ ಇಡೀ ನಾಡೇ ಖುಷಿ ಪಟ್ಟಿದೆʼ ಎಂದು ತಿಳಿಸಿದ್ದಾರೆ.
ಈ ಉದ್ಯಾನವನ ಅಭಿವೃದ್ಧಿಪಡಿಸಲು ₹50 ಕೋಟಿ ಅನುದಾನ ಮಂಜೂರಾಗಿದೆ. ಐತಿಹಾಸಿಕವಾದ ಈ ಯೋಜನೆ ರೂಪಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಅಭಿನಂದನೆಗಳು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಗೋಲ್ಡನ್ ಸ್ಕಾಲರಶಿಪ್ ಪ್ರವೇಶ ಪರೀಕ್ಷೆ : 1,207 ಮಕ್ಕಳು ಪರೀಕ್ಷೆಗೆ ಹಾಜರು
ಬೆಂಗಳೂರಿನಲ್ಲಿ 1760ರಲ್ಲಿ ನಿರ್ಮಾಣವಾದ ಲಾಲ್ಬಾಗ್ ಮತ್ತು 1870ರ ಕಬ್ಬನ್ ಪಾರ್ಕ್ ನಂತರ, ಬಹುತೇಕ ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿಇದೀಗ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣವಾಗುತ್ತಿದೆ.





