ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ಗ್ರಾಮ ಕ್ರಾಂತಿ ಸೇನೆ ಟ್ರಸ್ಟ್ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ವಿಚಾರಗೋಷ್ಠಿ ಹಾಗೂ ಕಲಾ ಜಾಥಾ ಕಾರ್ಯಕ್ರಮ ಆಯೋಜಿಸಲಾಯಿತು.
ಭಾಲ್ಕಿಯ ಹಿರಿಯ ವಕೀಲ ಧನರಾಜ ಸೂರ್ಯವಂಶಿ ಮಾತನಾಡಿ, ʼಸಮಾಜದಲ್ಲಿ ಅಸ್ಪೃಶ್ಯರು ಅನುಭವಿಸಿದ ಪೀಡೆಗಳನ್ನು ಸ್ಮರಿಸಿ, ಇಂದಿನ ಕಾಲದಲ್ಲಿ ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಕಾನೂನಿನ ಮೂಲಕ ಹೇಗೆ ಶಿಕ್ಷೆ ವಿಧಿಸಬಹುದು ಎಂಬುದನ್ನು ವಿವರಿಸಿದರು. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕುರಿತು ಸರಳವಾಗಿ ತಿಳಿಹೇಳಿದರು.
ಬಸವಕಲ್ಯಾಣದ ವಕೀಲರಾದ ರಾಜೇಶ್ವರಿ ವರ್ಧನ ಮಾತನಾಡಿ, ದಲಿತರ ಪರವಾಗಿ ಇರುವ ವಿವಿಧ ಕಾನೂನುಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಹಾಗೂ ಉದ್ದೇಶಗಳನ್ನು ಸ್ಮರಿಸಿ, ಮಹಿಳೆಯರ ಪರವಾದ ಕಾನೂನುಗಳು ಹಾಗೂ ಮಹಿಳೆಯರ ಹಕ್ಕುಗಳ ಕುರಿತು ಮಹಿಳೆಯರಿಗೆ ವಿವರಿಸಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಬಸವಕಲ್ಯಾಣ ತಾಲೂಕ ಸಹಾಯಕ ನಿರ್ದೇಶಕ ದಿಲೀಪ ಉತ್ತಮ ಅಧ್ಯಕ್ಷತೆ ವಹಿಸಿದರು.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಉಪನಿರೀಕ್ಷಕ ಬಸವರಾಜ ಕೊಡಗೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇವಣಸಿದ್ಧ ಜಮಾದಾರ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೆಹಬೂಬ್, ಮಹದೇವ ಗಾಯಕ್ವಾಡ್, ಶಂಕರ ಫುಲೆ, ಸುರೇಶ್ ಜಮ್ಮು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗ್ರಾಮ ಕ್ರಾಂತಿ ಸೇನೆಯ ಅಧ್ಯಕ್ಷ ಸಂದೀಪ ಮುಕಿಂದೆ ವಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಪ್ರಮುಖ ಮುಖಂಡರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮ ಪಂಚಾಯತ್ ನೌಕರರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಆನಂದವಾಡಿ ಗ್ರಾಮದಲ್ಲಿ ದೌರ್ಜನ್ಯ ತಡೆ ಕುರಿತು ಜಾಗೃತಿ :
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಕ್ರಾಂತಿ ಸೇನೆ ಟ್ರಸ್ಟ್ (ರಿ) ಸಂಯುಕ್ತಾಶ್ರಯದಲ್ಲಿ ಪ.ಜಾತಿ / ಪ.ಪಂಗಡ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹುಲಸೂರು ತಾಲೂಕಿನ ಆನಂದವಾಡಿ (ಹು) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಬಸವಕಲ್ಯಾಣದ ಹಿರಿಯ ವಕೀಲರಾದ ಭಾಸ್ಕರ ಕಾಂಬ್ಳೆ ಅವರು ದೌರ್ಜನ್ಯ ತಡೆ ಕಾಯ್ದೆ ಕುರಿತು ಗ್ರಾಮಸ್ಥರಿಗೆ ಅರಿವು ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹುಲಸೂರು ಠಾಣೆಯ ಪೊಲೀಸ್ ಸಿಬ್ಬಂದಿ, ಮಿರಕಲ್ ಗ್ರಾಮ ಪಂಚಾಯತ್ ಸಿಬ್ಬಂದಿ, ಗ್ರಾಮ ಕ್ರಾಂತಿ ಸೇನೆಯ ಅಧ್ಯಕ್ಷ ಸಂದೀಪ್ ಮುಕಿಂದೆ ಹಾಗೂ ಗ್ರಾಮದ ಮುಖಂಡರು, ಮಹಿಳೆಯರು ಮತ್ತು ಯುವಕರು ಉಪಸ್ಥಿತರಿದ್ದರು.
ಇದನ್ನೂ ಓದಿ : ಚಿಟಗುಪ್ಪ | ಸಿಡಿಲು ಬಡಿದು ರೈತ ಸಾವು





