ಹೊಸ ಓದುಗರಿಗೆ, ಯುವ ಪೀಳಿಗೆಗೆ ಕುವೆಂಪು ಅವರ ವೈಚಾರಿಕ ನಿಲುವು ತುಂಬಾ ಅಗತ್ಯವಿದೆ. ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳಾಗಿ ಎಂದು ಯುವಕರಿಗೆ ಕರೆ ಕೊಟ್ಟ ಕುವೆಂಪು ಶತಮಾನದ ಬಹುದೊಡ್ಡ ವಿಚಾರವಾದಿ ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಜನ್ಮದಿನ ಮತ್ತು ಕುವೆಂಪು ಸಾಹಿತ್ಯದ ತಾತ್ವಿಕತೆ ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ʼಕುವೆಂಪು ಕನ್ನಡ ನುಡಿ ಪ್ರೇಮದ ಬಗೆಗೆ ಎಷ್ಟು ಕವಿತೆ ಬರೆದಿದ್ದಾರೆಯೋ ಅಷ್ಟೇ ಮಹತ್ವ ನೀಡಿದ್ದು ಪ್ರಕೃತಿ ಮತ್ತು ಪರಿಸರದ ವಿಸ್ಮಯಕ್ಕೆ. ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಬರುವ ಕಾಡಿನ ಕಥನ ಹಾಗೂ ವಿಶ್ಲೇಷಣೆ ಓದುಗರಿಗೆ ಕಾಡಿನ ಪಯಣದ ಅನುಭವ ನೀಡುತ್ತದೆʼ ಎಂದು ಹೇಳಿದರು.
ʼಕುವೆಂಪು ಅವರ ಸಾಹಿತ್ಯ ಕಳೆದ ಐವತ್ತು ವರ್ಷಗಳಲ್ಲಿ ಹಲವು ನೆಲೆಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಅನುಸಂಧಾನಕ್ಕೆ ಒಳಪಡುತ್ತಲಿವೆ. ʼಕುವೆಂಪು ಬರಹ ಆರಂಭಿಸಿದ ಕಾಲದಿಂದಲೇ ಟೀಕೆ, ಟಿಪ್ಪಣಿ, ಪ್ರತಿಕ್ರಿಯೆ ರೂಪದಲ್ಲಿ ಅವರ ಬರಹದ ಕುರಿತು ಕನ್ನಡದಲ್ಲಿ ವಿಮರ್ಶೆ ಪ್ರಾರಂಭವಾಗಿದೆʼ ಎಂದರು.
ʼಕಾಡು, ಕಾಡುಪ್ರಾಣಿಗಳು, ನಾಯಿ, ಮನುಷ್ಯ ಸಂಬಂಧಗಳ ಬಗ್ಗೆ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಹೆಗ್ಗಡತಿ’ ಕಾದಂಬರಿಗಳಲ್ಲಿ ಕಟ್ಟಿಕೊಟ್ಟ ಬಗ್ಗೆ ಅಚ್ಚರಿ ಮೂಡಿಸುತ್ತದೆ. ಈ ಕಾದಂಬರಿಗಳಲ್ಲಿ ಬರುವ ಮಲೆನಾಡಿನ ತಳಸಮುದಾಯದ ಬದುಕು, ಶೂದ್ರ ತಪಸ್ವಿ ನಾಟಕಗಳು ಸಬಾಲ್ಟರ್ನ್ ಓದಿಗೆ ಒಡ್ಡುತ್ತವೆʼ ಎಂದರು.

ಕಲಬುರಗಿಯ ನಾಗಾಂಬಿಕಾ ಮಹಿಳಾ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಜಗದೀಶ್ ಬಡಿಗೇರ ಮಾತನಾಡಿ, ʼಕುವೆಂಪು ಈ ಶತಮಾನದ ಬಹುದೊಡ್ಡ ಲೇಖಕರು. ಮಕ್ಕಳ ಸಾಹಿತ್ಯ, ವಿಚಾರ, ವಿಮರ್ಶೆ, ನಾಟಕ, ಕತೆ, ಕಾದಂಬರಿ, ಮಹಾಕಾವ್ಯ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದಿದ್ದಾರೆ. ರಾಷ್ಟ್ರೀಯತೆ, ನುಡಿ ಪ್ರೇಮ ಕುವೆಂಪು ಸಾಹಿತ್ಯದ ಸತ್ವವಾಗಿದೆʼ ಎಂದರು.
ಕನ್ನಡ ಅಧ್ಯಾಪಕ ಚನ್ನಬಸಪ್ಪ ಗೌರ ಮಾತನಾಡಿ, ʼಕುವೆಂಪು ಅವರು ಕನ್ನಡ ಭಾಷೆ ಮತ್ತು ಕನ್ನಡಿಗರ ಅಭಿಮಾನದ ಬಗೆಗೆ ಹೆಚ್ಚು ಕವಿತೆಗಳು ಬರೆದಿದ್ದಾರೆ. ಅವರು ಸಾರಿದ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಡೀ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಹೋಲಿಸಿದ್ದಾರೆ. ಭಾರತದ ಅಖಂಡತೆ, ಅನನ್ಯತೆ ಸೂಚಿಸುವ ಕಾವ್ಯ ರಚಿಸಿದ್ದಾರೆʼ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕುವೆಂಪು ವಿರಚಿತರ ‘ಬಾ ಇಲ್ಲಿ ಸಂಭವಿಸು ಸತ್ಯಾವತಾರ’ ಮತ್ತು ‘ಅನಿಕೇತನ’ ಕವಿತೆಗಳು ವಾಚಿಸಿದರು.
ಇದನ್ನೂ ಓದಿ : ಕುವೆಂಪು ಪಂಚ ಮಂತ್ರಗಳಲ್ಲಿದೆ ಪ್ರಜಾಸತ್ತೆ ಕ್ರಾಂತಿ
ಕಾರ್ಯಕ್ರಮದಲ್ಲಿ ಪ್ರವೀಣ್ ಬಿರಾದಾರ, ಸಂಗೀತಾ ಮಹಾಗಾಂವೆ, ಶೃತಿ ನೀಲಮಠ, ರೋಷನ್ ಬೀ, ಗುರುದೇವಿ ಕಿಚಡೆ, ಸನತ್ ರೆಡ್ಡಿ, ಶಿತಲ್ ರೆಡ್ಡಿ, ಪ್ರೀಯಾ ಚೌಹಾಣ್, ಕೃಷ್ಣಪ್ಪ ಸದಲಾಪುರ, ನಾಗರಾಜ ನಾಸೆ, ಕೃಷ್ಣ ಗೌಳಿ, ವೀರೇಶ ಮಠಪತಿ, ಎಂ.ಡಿ.ಜಬಿ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಗಿರೀಶ್ ಪಾಟೀಲ ಅನೇಕರಿದ್ದರು. ಐಕ್ಯುಎಸಿ ಸಂಯೋಜಕ ಪವನ ಪಾಟೀಲ ಸ್ವಾಗತಿಸಿದರು .ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಜಾವಳಗೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.





