ಸಸ್ಯ ಸಂಪತ್ತಿನಿಂದಲೆ ಮನುಷ್ಯನ ಬದುಕು ನೆಮ್ಮದಿಯಿಂದ ಇರಲು ಸಾಧ್ಯ. ಗಿಡ ಮರಗಳ ನೆಲೆಯಲ್ಲಿ ದೊಡ್ಡ ಜೀವಜಾಲ ಅಡಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವೈಜಯಂತಾ ತ್ರಿಮುಖೆ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಹಯೋಗದಲ್ಲಿ ತಾಲೂಕಿನ ಹಳ್ಳಿ ಗ್ರಾಮದಲ್ಲಿರುವ ತೋಟಗಾರಿಕೆ ಕೇಂದ್ರದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜಿನ ಜೀವವಿಜ್ಞಾನ ವಿಭಾಗದಿಂದ ಈಚೆಗೆ ಹಮ್ಮಿಕೊಂಡಿದ್ದ ಜೀವ ಜಾಲ ಅಧ್ಯಯನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ʼವಿದ್ಯಾರ್ಥಿಗಳಲ್ಲಿ ನೆಲ, ನೀರು, ಸಸ್ಯ ಸಂಸ್ಕೃತಿಯ ಗಂಭೀರ ಅಧ್ಯಯನ ಅಗತ್ಯ. ಸಸ್ಯ ಕಸೀಕರಣ, ತೋಟಗಾರಿಕೆ ತರಬೇತಿ ಮೂಲಕ ಆಸಕ್ತ ರೈತರಿಗೆ ಅನುಕೂಲವಾಗುವ ಹಾಗೂ ಲಾಭದಾಯಕ ಬೆಳೆ ಬೆಳೆಯಲು ಇಲಾಖೆಯಿಂದ ಹಲವು ಯೋಜನೆಗಳು ಅನುಷ್ಠಾನಕ್ಕೆ ತರಲಾಗಿದೆʼ ಎಂದರು.
ʼಹಳ್ಳಿ ತೋಟಗಾರಿಕೆ ಕೇಂದ್ರದ ಅಧಿಕಾರಿ ಶ್ರೀಧರ್ ಪೂಜಾರಿ ಮಾತನಾಡಿ, ʼಸಸ್ಯ ಸಂಸ್ಕೃತಿಯ ಸಂಶೋಧನಾತ್ಮಕ ಅಧ್ಯಯನಗಳು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುತ್ತವೆ. ತೋಟಗಾರಿಕೆ ಇಲಾಖೆ ರೈತರ ಮತ್ತು ಸರ್ಕಾರದ ಯೋಜನೆಗಳ ನಡುವಿನ ಸೋಪಾನವಾಗಿದೆʼ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಗುಡ್ಡ, ಬೆಟ್ಟ, ನೀರು, ನೆಲ ನಿಸರ್ಗದ ಬಹುದೊಡ್ಡ ಜೀವಜಗತ್ತು ಕಾಪಿಟ್ಟುಕೊಂಡು ಬಂದಿದೆ. ಮನುಷ್ಯನ ಹಪಾಹಪಿತನದಿಂದ ಪ್ರಕೃತಿ ಹಲ್ಲೆಗೊಳಗಾಗುತ್ತಿದೆ. ನಗರ ಕೇಂದ್ರಿತ ಜೀವನದ ಹಂಬಲದಿಂದ ನಿಸರ್ಗಕ್ಕೆ ನಿರ್ಲಕ್ಷಿಸಲಾಗುತ್ತಿದೆʼ ಎಂದು ಬೇಸರ ವ್ಯಕ್ತಪಡಿಸಿದರು.
ʼಆಧುನಿಕತೆ, ಅಭಿವೃದ್ಧಿ ಎಂಬುದು ಜೀವ ಸಂಕುಲಕ್ಕೆ ಅನುಕೂಲವೊ ಅಪಾಯವೊ ಯೋಚಿಸಬೇಕಿದೆ. ಗಣಿಗಾರಿಕೆಯಿಂದ ಕಾಡಿನ ಸಂಪತ್ತು, ರಿಯಲ್ ಎಸ್ಟೇಟ್ ಗಳಿಂದ ಅನ್ನ ಕೊಡುವ ಫಲವತ್ತಾದ ನೆಲ ಸಂಪತ್ತು ಬಂಡವಾಳಶಾಹಿಗಳ ವಶವಾಗುತ್ತಿದೆ.
ಮನುಷ್ಯನ ಅನಿಯಂತ್ರಿತ ಆಮಿಷಗಳಿಂದ ಪ್ರಾಕೃತಿಕ ಸಂಪತ್ತಿಗೆ ಅಪಾಯ ಒದಗಿದೆʼ ಎಂದರು.
ಬಿ.ಎಸ್ಸಿ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಸಿಕಸಿ, ಜೇನು ಸಾಕಾಣಿಕೆ, ರೇಷ್ಮೆ ಕೃಷಿ, ಎರೆಹುಳು ಬಗೆಗೆ ಕ್ರೇತ್ರಾಧ್ಯಯನ ನಡೆಸಿದರು. ಜೀವ ವಿಜ್ಞಾನ ವಿಭಾಗ ಮುಖ್ಯಸ್ಥ ಅಶೋಕ ರೆಡ್ಡಿ ಗದಲೇಗಾವ ಮಾತನಾಡಿದರು
ಇದನ್ನೂ ಓದಿ : ಬೀದರ್ | ವೇಶ್ಯಾವಾಟಿಕೆ ದಂಧೆ : ಹೊರ ರಾಜ್ಯದ 5 ಮಹಿಳೆಯರ ರಕ್ಷಣೆ; ಇಬ್ಬರ ಆರೋಪಿಗಳ ಬಂಧನ
ಕುಶಾಲತಾ ಕಂಬಾರ, ರೇಷ್ಮೆ ಇಲಾಖೆಯ ಬಸವರಾಜ ಗದಲೇಗಾಂವ ಮತ್ತಿತರರಿದ್ದರು. ವಿವೇಕಾನಂದ ಶಿಂಧೆ ಸ್ವಾಗತಿಸಿದರು. ಸಂಗೀತಾ ಮಹಾಗಾವೆ ನಿರೂಪಿಸಿದರು. ಪ್ರಿಯಾ ಚೌಹಾಣ್ ವಂದಿಸಿದರು.




