ಬಸವಕಲ್ಯಾಣ ನಗರದಲ್ಲಿನ ಪ್ರತಿಷ್ಠಿತ ಬಸವೇಶ್ವರ ದೇವಸ್ಥಾನ ಪಂಚ ಸಮಿತಿಯ ಆಡಳಿತ ಮಂಡಳಿ 15 ನಿರ್ದೇಶಕರ ಆಯ್ಕೆಗಾಗಿ ಭಾನುವಾರ (ಮಾ.15) ರಂದು ನಡೆದ ಮತದಾನ ನಡೆದಿದ್ದು, ಸಂಜೆ ಫಲಿತಾಂಶ ಪ್ರಕಟವಾಗಿದೆ.
ಈ ಹಿಂದೆ ಕಮಿಟಿಗೆ ಅಧ್ಯಕ್ಷ ಮತ್ತು ಇತರೆ ಸ್ಥಾನದಲ್ಲಿದ್ದ ಅನೇಕರು ಮತ್ತೆ ಸ್ಪರ್ಧಿಸಿದ್ದರು. ಇಬ್ಬರು ಮಹಿಳೆಯರು ಒಳಗೊಂಡ ಒಟ್ಟು 40 ಜನರು ಚುನಾವಣಾ ಕಣದಲ್ಲಿದ್ದರು. ಅವರಲ್ಲಿ15 ಜನ ವಿಜಯಶಾಲಿಯಾಗಿದ್ದಾರೆ. ವಿಶ್ವಗುರು ಬಸವಣ್ಣನವರ ಪೆನಲ್ ಮೇಲುಗೈ ಸಾಧಿಸಿದೆ ಎಂಬುದು ತಿಳಿದು ಬಂದಿದೆ.
ಬಸವೇಶ್ವರ ದೇವಸ್ಥಾನದ ಎದುರಿನ ನೀಲಂಬಿಕಾ ದಾಸೋಹ ಭವನದಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು. ಚುನಾವಣೆಗಾಗಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 434 ಮತದಾರರ ಪೈಕಿ 408 ಜನರು ಮತದಾನ ಮಾಡಿದರು. ಮತದಾನ ಮುಗಿದ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಗಿ, ಸಂಜೆ ಸುಮಾರು ಏಳು ಗಂಟೆ ಸುಮಾರಿಗೆ ಫಲಿತಾಂಶ ಪ್ರಕಟಿಸಲಾಯಿತು.
ಫಲಿತಾಂಶದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪೆನಲ್ನ 5 ಅಭ್ಯರ್ಥಿಗಳು ಮತ್ತು ವಿಶ್ವಗುರು ಬಸವಣ್ಣನವರ ಪೆನಲ್ನ 10 ಅಭ್ಯರ್ಥಿಗಳು ಜಯಗಳಿಸಿದರು. ಚುನಾವಣಾಧಿಕಾರಿಯಾಗಿದ್ದ ನಾಗೇಂದ್ರ ಮಾಕ ಅವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು. ಆಯ್ಕೆಯಾದ 15 ನಿರ್ದೇಶಕರು ತಮ್ಮೊಳಗಿಂದ ಒಬ್ಬರನ್ನು ಅಧ್ಯಕ್ಷರಾಗಿ ಹಾಗೂ ಮತ್ತೊಬ್ಬರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ 12 ಜನ ಈ ಹಿಂದೆ ಪಂಚ ಕಮಿಟಿ ಚುನಾವಣೆಯಲ್ಲಿ ಗೆಲುವು ಕಂಡು ಅಧ್ಯಕ್ಷ, ನಿರ್ದೇಶಕ ಮತ್ತು ಇತರೆ ಹುದ್ದೆಗಳನ್ನು ಅಲಂಕರಿಸಿದವರೇ ಆಗಿದ್ದಾರೆ. ಮೂರು ಜನ ಅಷ್ಟೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಗೆದ್ದ ಅಭ್ಯರ್ಥಿಗಳು:
ಬಸವರಾಜ್ ಕೋರ್ಕೆ, ಪುಷ್ಪಾವತಿ ರಾಜಕುಮಾರ ಮಾಮ, ಅನಿಲಕುಮಾರ್ ರಗಟೆ, ವೀರಣ್ಣ ಹಲಶೆಟ್ಟಿ, ಭದ್ರಿನಾಥ್ ಪಾಟೀಲ್, ಮಲ್ಲಿಕಾರ್ಜುನ ಕುರಕೋಟೆ, ಸುನಿಲ್ ರಾಯವಾಡೆ, ವಿವೇಕಾನಂದ ಹೊದಲೂರೆ, ಬಸವರಾಜ್ ಬಾಲಕೀಲೆ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಚಿರಡೆ, ಸುನಿಲಕುಮಾರ್ ಹೊಲಕುಂದೆ, ಜಗನ್ನಾಥ ಖೂಬಾ, ರಾಜಕುಮಾರ್ ಹೊಳಕುಂದೆ ಹಾಗೂ ಅಶೋಕ ನಾಗರಾಳೆ ಜಯ ಸಾಧಿಸಿದ್ದಾರೆ.
ಫಲಿತಾಂಶ ಪ್ರಕಟವಾದ ನಂತರ ದೇವಸ್ಥಾನದ ಆವರಣದಲ್ಲಿ ಪ್ರಮುಖರು ಹಾಗೂ ಗಣ್ಯರು ನೂತನ ನಿರ್ದೇಶಕರಿಗೆ ಹಾರ ಹಾಕಿ ಸನ್ಮಾನಿಸಿದರು. ಈ ವೇಳೆ ಅವರ ಬೆಂಬಲಿಗರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಾಚರಣೆ ನಡೆಸಿದರು.
ಪಂಚ ಕಮಿಟಿಯಿಂದ ಏನಾಗಬೇಕು :
ಪಂಚ ಕಮಿಟಿಗೆ ಈ ಹಿಂದಿನ ಹಲವರು ಆಡಳಿತ ಮಂಡಳಿ ಭಾಗವಾಗಿ ಆಯ್ಕೆಯಾಗಿದ್ದಾರೆ. ಹೊಸಬರು ಕೆಲವರು ಈ ಸಲ ಪ್ರವೇಶಿಸಿದ್ದಾರೆ. ಒಂದು ಸಂಸ್ಥೆಗೆ ತನ್ನ ಸಮಕಾಲೀನ ಸಮಸ್ಯೆ ಮತ್ತು ಸವಾಲುಗಳನ್ನು ಮುಖಾಮುಖಿಯಾಗುತ್ತ, ಸ್ಪಂದಿಸುತ್ತ, ಜನಮುಖಿಯಾಗಿಯಾದಾಗ ಅದಕ್ಕೆ ಸಾಮಾಜಿಕ ಮಹತ್ವ ದೊರೆಯುತ್ತದೆ. ಅದು ಸಾಂಸ್ಕೃತಿಕವಾಗಿ ತಲೆ ಎತ್ತುತ್ತದೆ. ಆರ್ಥಿಕವಾಗಿ, ಸಾಮುದಾಯಿಕವಾಗಿ ಶಕ್ತವಾಗಿರುವ ಈ ಸಮಿತಿಯ ಎದುರಿಗೆ ಹಲವು ಸಾಧ್ಯತೆಗಳನ್ನು ಸಾಧ್ಯವಾಗಿಸುವ ಶಕ್ತಿಯೂ ಇದೆ. ಇಚ್ಛಾಶಕ್ತಿ, ಸಹಯೋಗ, ಸಹಮತಗಳಿಂದ ಮಾಡ ಹೊರಟರೆ ಕಲ್ಯಾಣದಲ್ಲಿ ಸಾಂಸ್ಕೃತಿಕ ಜಗತ್ತು ಕಟ್ಟಬಹುದು.
ಪಂಚ ಕಮಿಟಿಯು ಬಸವಕಲ್ಯಾಣದ ಕೆಲ ಶರಣ ಸ್ಮಾರಕಗಳ ಸಂರಕ್ಷಣೆ ಮತ್ತು ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಅಲ್ಲದೆ ಶಿಕ್ಷಣ ಸಂಸ್ಥೆಗಳು, ಅಂಗಡಿಗಳು, ಸಾಕಷ್ಟು ಜಮೀನುಗಳಿದ್ದು ಅವುಗಳನ್ನು ನಿಭಾಯಿಸುತ್ತಿದೆ. ಇನ್ನು ಉನ್ನತ ಶಿಕ್ಷಣ ಕೇಂದ್ರ ಸ್ಥಾಪನೆ, ಬಸವಣ್ಣನವರ ಪರುಷಕಟ್ಟೆಯ ಅಭಿವೃದ್ಧಿ ಕಾರ್ಯ, ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ ಸೇರಿದಂತೆ ಬಸವಾದಿ ಶರಣರ ಕಾರ್ಯಕ್ಷೇತ್ರವಾದ ಬಸವಕಲ್ಯಾಣವನ್ನು ಸಾಂಸ್ಕೃತಿಕ ಚಹರೆಯಾಗಿ ನಿರ್ಮಿಸುವ ಕಾರ್ಯ ಈ ಸಮಿತಿಯಿಂದ ಆಗಬೇಕು ಎಂಬುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
ಬಸವಾದಿ ಶರಣರ ವಚನ ಸಾಹಿತ್ಯದ ಕುರಿತು ಚರ್ಚೆ, ಚಿಂತನೆ, ಉಪನ್ಯಾಸಗಳ ಕುರಿತು ಮಹತ್ವದ ಪುಸ್ತಕಗಳು ಹೊರಬರಬೇಕು. ಇದಕ್ಕಾಗಿ ಬಸವ ಸಮಿತಿ, ಬಿಎಲ್ಡಿಇ ಮೊದಲಾದ ಸಂಸ್ಥೆಗಳ ಮಾದರಿಯಾಯಲ್ಲಿ ವಚನ ಸಾಹಿತ್ಯ ಪ್ರಸಾರಕ್ಕೆ ಪ್ರಕಾಶನ ಸಂಸ್ಥೆ ಹುಟ್ಟು ಹಾಕಬೇಕಾಗಿದೆ. ಸಹಕಾರ ಸಂಘ, ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ, ಪ್ರಾರ್ಥಮಿಕ ಆರೋಗ್ಯ ಚಿಕಿತ್ಸೆ ಕೇಂದ್ರ, ಈ ಸಂಸ್ಥೆಯ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಮಾಡಿಸುವ ಸಾಧ್ಯತೆಗಳು ಇವೆ.
ಇದನ್ನೂ ಓದಿ : ಬೀದರ್ | ಬಿಸಿಲಿನ ಧಗೆಗೆ ತಂಪೆರೆದ ಮಳೆ
ಪ್ರತಿ ವರ್ಷ ನಡೆಯುವ ಬಸವ ಜಯಂತಿಯ ಸಂದರ್ಭದಲ್ಲಿ ನಾಡಿನ ವಿದ್ವಾಂಸರು, ಅಧ್ಯಾಪಕರನ್ನು ಕರೆಯಿಸಿ ಕನಿಷ್ಠ ಎರಡು ದಿನವಾದರೂ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ಹಮ್ಮಿಕೊಳ್ಳಬಹುದು. ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯವ್ಯಾಪ್ತಿ ಇಡೀ ನಾಡನ್ನು ಸಾಂಸ್ಕೃತಿಕವಾಗಿ ಕಟ್ಟುವ ಮೂಲಕ ನಾಡಿನ ಆಕರ್ಷಣೀಯ ಸಂಸ್ಥೆ ಆಗಬೇಕು. ಈ ಭರವಸೆ ಹಲವರಲ್ಲಿ ಈಗಲೂ ಬತ್ತಿಲ್ಲ. ಹೊಸ ಸಮಿತಿ ಈ ಬಗ್ಗೆ ಯೋಚಿಸಿ, ಯೋಜನೆ ರೂಪಿಸುವಂತಾಗಲಿ ಎಂಬುದು ಹಲವರ ಸದಾಶಯ.





