ಭಾಲ್ಕಿ ಪಟ್ಟಣದಲ್ಲಿ ನಾಳೆ (ಫೆ.16) ಸೋಮವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಈಶ್ವರ ಖಂಡ್ರೆ ಅವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ʼನಾಳೆ ಸಾಯಂಕಾಲ 5 ಗಂಟೆಗೆ ಚನ್ನಬಸವಾಶ್ರಮ ಪರಿಸರದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ಅಭಿನಂದನಾ ಸಮಾರಂಭ
ಜರುಗಲಿದೆʼ ಎಂದರು.
ʼಹಿರೇಮಠ ಸಂಸ್ಥಾನ ಸಮಾಜದಲ್ಲಿ ಜನಪರ ಜೀವಪರ ಕಾರ್ಯಗಳನ್ನು ಕೈಗೊಳ್ಳವರನ್ನು ಸದಾ ಗುರುತಿಸುವುದರ ಜತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದವರನ್ನು ಅಭಿನಂದಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತ ಬರುತ್ತಿದೆ. ಅದರಂತೆ ನಮ್ಮ ಭಾಲ್ಕಿ ಮಠದ ಪರಮ ಶಿಷ್ಯರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ನಮ್ಮೆಲ್ಲರಿಗೂ ಅತೀವ ಸಂತಸವನ್ನುವುಂಟು ಮಾಡಿದೆ.ಈ ಭಾಗದ ಅಭಿವೃದ್ಧಿ ಮತ್ತು ಸಮುದಾಯದ ಪ್ರಗತಿಯಲ್ಲಿ ಖಂಡ್ರೆ ಪರಿವಾರದ ಕೊಡುಗೆ ದೊಡ್ಡದಿದೆʼ ಎಂದರು.
ʼಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಕಟ್ಟಿ ಬೆಳೆಸಿದ ನೂತನ ಅನುಭವ ಮಂಟಪದ ಪುನರ್ ನಿರ್ಮಾಣದ ನೀಲನಕಾಶೆಯನ್ನು ಸಚಿವರಿದ್ದ ಸಂದರ್ಭದಲ್ಲಿ ಈಶ್ವರ ಖಂಡ್ರೆ ಅವರು ಸಿದ್ಧಪಡಿಸಿ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನುಭವ ಮಂಟಪದ ಕಾಮಗಾರಿಗೆ ಅನುದಾನದ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಇಂತಹ ಅನೇಕ ವಿಧಾಯಕ ಕಾರ್ಯಗಳು ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಕೆಲಸದ ಜತೆಗೆ ಧಾರ್ಮಿಕ, ಸಮುದಾಯದ ಬೆಳವಣಿಗೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆʼ ಎಂದು ತಿಳಿಸಿದರು.
ʼವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರ ಅಭಿನಂದನಾ ಸಮಾರಂಭ ಹಿರೇಮಠ ಸಂಸ್ಥಾನದ ಸಹಯೋಗದಲ್ಲಿ ನಡೆಯಲಿದ್ದು ವಿವಿಧ ಸಂಘ-ಸಂಸ್ಥೆಗಳು ಕೂಡ ಕೈಜೋಡಿಸಿವೆ. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಹಿತೈಷಿಗಳು ಖಂಡ್ರೆ ಅವರ ಅಭಿಮಾನಿಗಳು ಪಾಲ್ಗೊಂಡು ಯಶಸ್ಸುಗೊಳಿಸಬೇಕು. ಭಾಗವಹಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ | ವೇಶ್ಯಾವಾಟಿಕೆ ದಂಧೆ : ಹೊರ ರಾಜ್ಯದ 5 ಮಹಿಳೆಯರ ರಕ್ಷಣೆ; ಇಬ್ಬರ ಆರೋಪಿಗಳ ಬಂಧನ
ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ರಾಜಶೇಖರ ಅಷ್ಟೂರೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಮಾಜಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ಹಿರಿಯ ಮುಖಂಡ ಸುಭಾಷ ಕಾರಾಮುಂಗೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸವರಾಜ ಮರೆ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಇದ್ದರು.





